ಚಾಲಕ, ನಿರ್ವಾಹಕ ನೇಮಕ ಆದವರ ಆದೇಶ ಪತ್ರ ಆಗ್ರಹ

| Published : Jun 12 2025, 05:23 AM IST

ಸಾರಾಂಶ

ನಮಗೆ ಅನ್ಯಾಯ ಮಾಡಬೇಡಿ. ನಮಗೆ ಆದೇಶ ಪತ್ರ ನೀಡಿ ನೌಕರಿಗೆ ಸೇರಿಸಿಕೊಂಡು ಪುಣ್ಯ ಕಟ್ಕೊಳ್ಳಿ ಎಂಬ ಆಗ್ರಹ ನೌಕರಿಗಾಗಿ ಕಾಯುತ್ತಿರುವ ಅಭ್ಯರ್ಥಿಗಳಿಂದ ಕೇಳಿಬರುತ್ತಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ 1000 ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ಹೊಸದಾಗಿ ಅಧಿಸೂಚನೆ ಹೊರಡಿಸಲು ಸಿದ್ಧತೆ ನಡೆಸಿದೆ. ಆದರೆ, 2019ರಲ್ಲೇ ಅರ್ಜಿ ಹಾಕಿ ಚಾಲನಾ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನೇ ಪರಿಗಣಿಸಿ ಆದೇಶ ಪತ್ರ ನೀಡಬೇಕೆಂಬ ಕೂಗು ಜೋರಾಗಿದೆ.

ನಮಗೆ ಅನ್ಯಾಯ ಮಾಡಬೇಡಿ. ನಮಗೆ ಆದೇಶ ಪತ್ರ ನೀಡಿ ನೌಕರಿಗೆ ಸೇರಿಸಿಕೊಂಡು ಪುಣ್ಯ ಕಟ್ಕೊಳ್ಳಿ ಎಂಬ ಆಗ್ರಹ ನೌಕರಿಗಾಗಿ ಕಾಯುತ್ತಿರುವ ಅಭ್ಯರ್ಥಿಗಳಿಂದ ಕೇಳಿಬರುತ್ತಿದೆ.

ಏನಿದು, ಯಾಕಿದು?: ವಾಯವ್ಯ ಕರ್ನಾಟಕ ರಸ್ತೆ ಸಂಸ್ಥೆಯಲ್ಲಿ 2019ರಲ್ಲಿ 2814 ಚಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಆಗ ಬರೋಬ್ಬರಿ 51 ಸಾವಿರಕ್ಕೂ ಅಧಿಕ ಜನ ಅರ್ಜಿ ಹಾಕಿದ್ದರು. ಮುಂದೆ ಕೋವಿಡ್‌ ಬಂತು. ನೇಮಕಾತಿ ಪ್ರಕ್ರಿಯೆ ಅಷ್ಟಕ್ಕೆ ನಿಂತಿತು. 2814 ಹುದ್ದೆಗಳಿಗೆ ನೇಮಕಾತಿ ನೇಮಕಾತಿ ಬೇಡ. 2000 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಿ ಎಂದು ಸರ್ಕಾರ ಸೂಚಿಸಿತು. ಅದರಂತೆ ನೇಮಕಾತಿ ಪ್ರಕ್ರಿಯೆಯೆನ್ನಲ್ಲ ಪೂರ್ಣಗೊಳಿಸಿತು. ಇದಕ್ಕಾಗಿ ₹3 ಕೋಟಿಗೂ ಅಧಿಕ ಖರ್ಚು ಕೂಡ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದೀಗ ಸರ್ಕಾರ 1000 ಚಾಲಕ ಹುದ್ದೆ ನೇಮಕಾತಿ ಮಾಡಿಕೊಳ್ಳಿ. ಇನ್ನುಳಿದ 1000 ಹುದ್ದೆಗಳನ್ನು ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಿ ಎಂಬ ಸೂಚನೆ ನೀಡಿದೆಯಂತೆ. ಅದರಂತೆ 2019ರಲ್ಲಿ ಅರ್ಜಿ ಸಲ್ಲಿಸಿದವರಲ್ಲಿ 1000 ಜನರಿಗಷ್ಟೇ ಆದೇಶ ಪತ್ರ ನೀಡಲು ವಾಯವ್ಯ ಸಾರಿಗೆ ಸಂಸ್ಥೆ ನಿರ್ಧರಿಸಿದೆ. ಜತೆಗೆ ಇನ್ನುಳಿದ 1000 ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ಹೊಸದಾಗಿ ಅಧಿಸೂಚನೆ ಹೊರಡಿಸಲು ನಿರ್ಧರಿಸಿದೆ.

ಅಭ್ಯರ್ಥಿಗಳ ಬೇಡಿಕೆ ಏನು?: ಹೊಸದಾಗಿ ಅಧಿಸೂಚನೆ ಹೊರಡಿಸದೇ 2019ರಲ್ಲೇ ಅರ್ಜಿ ಹಾಕಿದವರನ್ನೇ ಪರಿಗಣಿಸಬೇಕು. ಈಗ ಹೇಗಾದರೂ ಚಾಲನಾ ಪರೀಕ್ಷೆ ಸೇರಿದಂತೆ ಎಲ್ಲ ಬಗೆಯ ಟೆಸ್ಟ್‌ಗಳನ್ನು ನೋಡಿದ್ದಾಗಿದೆ. ಅವರನ್ನೇ ಪರಿಗಣಿಸಿ ನೇಮಕಾತಿ ಆದೇಶ ಪತ್ರ ನೀಡಬೇಕು ಎಂಬ ಬೇಡಿಕೆ ಆಗ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಇಟ್ಟಿದ್ದಾರೆ. ಆದರೆ, ಅಧಿಕಾರಿ ವರ್ಗ ಆಗ ಚಾಲಕ ಹುದ್ದೆಗಷ್ಟೇ ಅರ್ಜಿ ಆಹ್ವಾನಿಸಲಾಗಿತ್ತು. ಈಗ ಅಧಿಸೂಚನೆ ಹೊರಡಿಸಬೇಕು ಎಂದುಕೊಂಡಿರುವುದು ಚಾಲಕ ಕಂ ನಿರ್ವಾಹಕ ಹುದ್ದೆಗೆ. ಅದಕ್ಕಾಗಿ ಹೊಸದಾಗಿ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಲಾಗುತ್ತಿದೆ ಎನ್ನುತ್ತಿದ್ದಾರೆ.

ಚಾಲಕ ಹುದ್ದೆಗೆ ಅರ್ಜಿ ಹಾಕಿ ಪರೀಕ್ಷೆಗೆ ಹಾಜರಾದವರಲ್ಲಿ ಬಹುತೇಕ ಎಲ್ಲರದು ಕಂಡಕ್ಟರ್‌ ಲೈಸನ್ಸ್‌ ಹೊಂದಿರುತ್ತಾರೆ. ಒಂದು ವೇಳೆ ನಿರ್ವಾಹಕ ಲೈಸನ್ಸ್‌ ಇಲ್ಲದಿದ್ದಲ್ಲಿ ಒಂದೆರಡು ತಿಂಗಳು ಕಾಲಾವಕಾಶ ನೀಡಿ ಲೈಸನ್ಸ್‌ ಮಾಡಲು ಸೂಚಿಸಿದರೆ ಮುಗಿಯುತ್ತದೆ. ಇದರಿಂದ ಆಗ ಅರ್ಜಿ ಸಲ್ಲಿಸಿದವರಿಗೂ ನೌಕರಿ ಸಿಗುತ್ತದೆ. ಜತೆಗೆ ಮತ್ತೆ ಅರ್ಜಿ ಆಹ್ವಾನಿಸಿ ನೇಮಕಾತಿ ಪ್ರಕ್ರಿಯೆ ಮಾಡಬೇಕೆಂದರೆ ಮತ್ತೆ ಒಂದೆರಡು ವರ್ಷ ಸಮಯವಾಗುತ್ತದೆ. ಅಲ್ಲದೇ, ₹3-4 ಕೋಟಿ ಸರ್ಕಾರದ ವೆಚ್ಚವೂ ಆಗುತ್ತದೆ. ಅದರ ಬದಲಿಗೆ ಹಿಂದೆ ಅರ್ಜಿ ಸಲ್ಲಿಸಿ ಪರೀಕ್ಷೆಗಳನ್ನೆಲ್ಲ ಹಾಜರಾಗಿರುವವರಿಗೆ ಮೆರಿಟ್‌ ಮೇಲೆ ಆದೇಶ ಪತ್ರ ನೀಡಬೇಕು ಎಂಬ ಒತ್ತಾಯ ಅಭ್ಯರ್ಥಿಗಳದ್ದು.ಎಚ್ಚರಿಕೆ ಸಂದೇಶ: ಈ ಸಂಬಂಧಪಟ್ಟಂತೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಈಗಾಗಲೇ ಮನವಿ ಸಲ್ಲಿಸಿರುವ ಅಭ್ಯರ್ಥಿಗಳು, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿ, ಸಾರಿಗೆ ಸಚಿವರು ಸೇರಿದಂತೆ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲು ನಿರ್ಧರಿಸಿದೆ. ಇದಕ್ಕೆ ಸ್ಪಂದನೆ ಸಿಗದಿದ್ದಲ್ಲಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.

ಒಟ್ಟಿನಲ್ಲಿ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿನ ಚಾಲಕ ಕಂ ನಿರ್ವಾಹಕ ಹುದ್ದೆ ನೇಮಕಾತಿ ಬಗ್ಗೆ ಭಾರೀ ಚರ್ಚೆಗೆ ಗ್ರಾಸವನ್ನುಂಟು ಮಾಡಿರುವುದಂತೂ ಸತ್ಯ. ಸರ್ಕಾರ ಅಭ್ಯರ್ಥಿಗಳ ಮನವಿಗೆ ಸ್ಪಂದಿಸುತ್ತದೆಯೋ ಅಥವಾ ಹೊಸದಾಗಿ ಅರ್ಜಿ ಆಹ್ವಾನಿಸುತ್ತದೆಯೋ ಎಂಬುದನ್ನು ಕಾಯ್ದು ನೋಡಬೇಕಷ್ಟೇ.!

ಹೋರಾಟ: ನಾವು 2019ರಲ್ಲೇ ಅರ್ಜಿ ಸಲ್ಲಿಸಿದ್ದೇವು. ಆಗ ಚಾಲನಾ ಪರೀಕ್ಷೆಯನ್ನೆಲ್ಲ ನೀಡಿದ್ದೇವು. ಆಗ ಚಾಲಕ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದರು. ಮತ್ತೆ ಹೊಸದಾಗಿ ಅರ್ಜಿ ಆಹ್ವಾನಿಸದೇ ಆಗ ಅರ್ಜಿ ಹಾಕಿ ಪರೀಕ್ಷೆಗೆ ಹಾಜರಾದವರನ್ನು ಪರಿಗಣಿಸಬೇಕು. ಇಲ್ಲದಿದ್ದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಅಭ್ಯರ್ಥಿ ರಮೇಶ ತಿಳಿಸಿದರು.

ಪರಿಗಣಿಸಿ: 2000 ಹುದ್ದೆಗಳಿಗೂ ಹಿಂದೆ ಅರ್ಜಿ ಹಾಕಿದವರನ್ನೇ ಪರಿಗಣಿಸಬೇಕು. ಆಗ ಅರ್ಜಿ ಹಾಕಿದವರಲ್ಲಿ ಬಹುತೇಕರ ಬಳಿ ಕಂಡಕ್ಟರ್‌ ಲೈಸೆನ್ಸ್‌ ಇದೆ. ಒಂದು ವೇಳೆ ಇಲ್ಲದಿದ್ದಲ್ಲಿ 2-3 ತಿಂಗಳು ಕಾಲಾವಕಾಶ ನೀಡಿದರೆ ಮಾಡಿಸಿಕೊಳ್ಳುತ್ತಾರೆ. ಮತ್ತೆ ಅಧಿಸೂಚನೆ ಹೊರಡಿಸುವ ಅಗತ್ಯ ಬರಲ್ಲ ಎಂದು ಹೋರಾಟಗಾರ ಸುಭಾಸಸಿಂಗ್‌ ಜಮಾದಾರ ತಿಳಿಸಿದರು.