ನಿವೇಶನ, ವಸತಿ ವ್ಯವಸ್ಥೆ ಕಲ್ಪಿಸಲು ಆಗ್ರಹ

| Published : Mar 01 2024, 02:21 AM IST

ಸಾರಾಂಶ

ಆಳುತ್ತಿರುವ ಸರ್ಕಾರಗಳು ದುಡಿಯುವ ಕೈಗಳಿಗೆ ಉದ್ಯೋಗವನ್ನು ನೀಡದೇ ಹೊಟ್ಟೆ ತುಂಬಾ ಅನ್ನ ಸಿಗದಂತೆ ಮಾಡಿ, ಹಸಿವಿನಿಂದ ನರಳುತ್ತಾ, ಮಲಗಲು ಕೂಡ ಸ್ವಂತ ಮನೆ ಇಲ್ಲದ ಸ್ಥಿತಿಗೆ ಜನರನ್ನು ಸರ್ಕಾರಗಳು ದೂಡಿದೆ.

ಕೊಟ್ಟೂರು: ನಿವೇಶನ ಮತ್ತು ವಸತಿ ಕಲ್ಪಿಸುವಂತೆ ಆಗ್ರಹಿಸಿ ಇಲ್ಲಿನ ನಿವೇಶನ ಮತ್ತು ವಸತಿರಹಿತ ತಾಲೂಕು ಸಮಿತಿ ವತಿಯಿಂದ ಬಸ್ ನಿಲ್ದಾಣ ಹತ್ತಿರದ ಬಸವಣ್ಣನ ದೇವಸ್ಥಾನದಿಂದ ಪಟ್ಟಣ ಪಂಚಾಯಿತಿಯವರೆಗೂ ಪ್ರತಿಭಟನಾ ರ‍್ಯಾಲಿ ನಡೆಸಲಾಯಿತು.

ಈ ವೇಳೆ ವಸತಿ ಮತ್ತು ನಿವೇಶನದ ರೈತ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷ ಎಚ್ ವೀರಣ್ಣ ಮಾತನಾಡಿ, ದುಡಿಯುವ ಕೈಗಳಿಗೆ ಉದ್ಯೋಗ, ಹೊಟ್ಟೆ ತುಂಬ ಊಟ, ನೆಮ್ಮದಿಯಿದ ನಿದ್ರಿಸಲು ಸ್ವಂತದ ಒಂದು ಸೂರು ಈ ದೇಶದ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕಾಗಿದೆ. ಆದರೆ ದೇಶದಲ್ಲಿ ನಮ್ಮನ್ನು ಆಳುತ್ತಿರುವ ಸರ್ಕಾರಗಳು ದುಡಿಯುವ ಕೈಗಳಿಗೆ ಉದ್ಯೋಗವನ್ನು ನೀಡದೇ ಹೊಟ್ಟೆ ತುಂಬಾ ಅನ್ನ ಸಿಗದಂತೆ ಮಾಡಿ, ಹಸಿವಿನಿಂದ ನರಳುತ್ತಾ, ಮಲಗಲು ಕೂಡ ಸ್ವಂತ ಮನೆ ಇಲ್ಲದ ಸ್ಥಿತಿಗೆ ಜನರನ್ನು ಸರ್ಕಾರಗಳು ದೂಡಿದೆ ಎಂದರು.

ವಸತಿ ಮತ್ತು ನಿವೇಶನದ ರೈತ ಹೋರಾಟ ಸಮಿತಿ ರಾಜ್ಯ ಮಹಿಳೆ ಉಪಾಧ್ಯಕ್ಷೆ ಕೆ. ರೇಣುಕಮ್ಮ ಮಾತನಾಡಿ, ಭಾರತದ ಸಿರಿವಂತ ಕಾರ್ಪೋರೇಟ್ ಕಂಪನಿಗಳ ಮಾಲೀಕರು ಮಾತ್ರ ಪ್ರಪಂಚದ ಅತಿ ಶ್ರೀಮಂತರ ಪಟ್ಟಿಗೆ ಸೇರ್ಪಡೆಯಾಗುತ್ತಿದ್ದು. ಸಾರ್ವಜನಿಕ ಸಂಪತ್ತನ್ನು ಎಗ್ಗಿಲ್ಲದೇ ಲೂಟಿ ಮಾಡುವುದಕ್ಕೆ ಸರ್ಕಾರಗಳು ಅವಕಾಶಗಳನ್ನು ಮಾಡಿಕೊಡುತ್ತಿದೆ. ಆದರೆ ಇಲ್ಲಿಯವರೆಗೂ ಕಡುಬಡವರಿಗೆ ಸೂರು ಕಲ್ಪಿಸಲು ಮುಂದಾಗುತ್ತಿಲ್ಲ ಎಂದರು.

ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಎ. ನಸರುಲ್ಲಾ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಗುಡಿಹಳ್ಳಿ ಹಾಲೇಶ, ಹಲಗಿ ಸುರೇಶ, ರಾಜುಗೌಡ, ತಿಮ್ಮಪ್ಪ, ಕಾರ್ಯಕರ್ತರು ಉಪಸ್ಥಿತರಿದ್ದರು.