ಸಾರಾಂಶ
ಅರ್ಹ ವಿದ್ಯಾರ್ಹತೆ ಪೂರೈಸಿದ, 2016ಕ್ಕಿಂತ ಮುನ್ನ ನೇಮಕವಾದ ಎಲ್ಲ 1- 8 ನೇ ತರಗತಿವರೆಗಿನ ಶಾಲಾ ಶಿಕ್ಷಕರಿಗೆ ಮೊದಲಿನಂತೆಯೇ ಅರ್ಹತೆಯ ಆಧಾರದ ಮೇಲೆ ಪ್ರೌಢಶಾಲೆಗೆ ಬಡ್ತಿ ನೀಡಬೇಕು.
ಯಲ್ಲಾಪುರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕವು ಶಾಸಕ ಶಿವರಾಮ ಹೆಬ್ಬಾರರಿಗೆ ಹಾಗೂ ತಾಲೂಕು ದಂಡಾಧಿಕಾರಿಗಳಿಗೆ ಆ. 5 ರಂದು ಮನವಿ ಸಲ್ಲಿಸಿದೆ.
ಅರ್ಹ ವಿದ್ಯಾರ್ಹತೆ ಪೂರೈಸಿದ, 2016 ಕ್ಕಿಂತ ಮುನ್ನ ನೇಮಕವಾದ ಎಲ್ಲ 1- 8 ನೇ ತರಗತಿವರೆಗಿನ ಶಾಲಾ ಶಿಕ್ಷಕರಿಗೆ ಮೊದಲಿನಂತೆಯೇ ಅರ್ಹತೆಯ ಆಧಾರದ ಮೇಲೆ ಪ್ರೌಢಶಾಲೆಗೆ ಬಡ್ತಿ ನೀಡಬೇಕು. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಈ ಮೊದಲಿನಂತೆ ಮುಖ್ಯ ಶಿಕ್ಷಕರ ಮತ್ತು ಹಿರಿಯ ಶಿಕ್ಷಕರ ಹುದ್ದೆಗೆ ಸೇವಾ ಜೇಷ್ಠತೆಯ ಆಧಾರದ ಮೇಲೆ ಬಡ್ತಿ ಕೊಡಬೇಕು.
ಅರ್ಹ ವಿದ್ಯಾರ್ಹತೆ(ಪದವಿ ಮತ್ತು ಶಿಕ್ಷಣ ತರಬೇತಿ) ಹೊಂದಿದ 2016 ಕ್ಕಿಂತ ಪೂರ್ವದಲ್ಲಿ ನೇಮಕಗೊಂಡ ಪ್ರಾಥಮಿಕ ಶಾಲಾ ಸಹ ಶಿಕ್ಷಕರಿಗೆ ಸೇವಾ ಜೇಷ್ಠತೆಯ ರಕ್ಷಣೆಯೊಂದಿಗೆ ಬಡ್ತಿ ನೀಡಬೇಕು.
೨೦೧೭ರ ವರೆಗೆ ನೇಮಕವಾದ ಶಿಕ್ಷಕರನ್ನು1- 7ರ ವರೆಗೆ ನೇಮಕಗೊಂಡ ಶಿಕ್ಷಕರೆಂದು ಪರಿಗಣಿಸಿ, ಯಾವುದೇ ಕಾರಣಕ್ಕೂ ೨೦೧೬ಕ್ಕಿಂತ ಮುನ್ನ ನೇಮಕಗೊಂಡವರಿಗೆ ಪೂರ್ವಾನ್ವಯಗೊಳಿಸಬಾರದು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ತಾಲೂಕಾಧ್ಯಕ್ಷ ಆರ್.ಆರ್. ಭಟ್ಟ, ಕಾರ್ಯದರ್ಶಿ ಸತೀಶ ನಾಯಕ, ಜಿಲ್ಲಾಧ್ಯಕ್ಷ ನಾರಾಯಣ ನಾಯಕ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರಕಾಶ ನಾಯಕ, ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಸಂಜೀವಕುಮಾರ ಹೊಸ್ಕೇರಿ ಮತ್ತು ಸಂಘದ ವಿವಿಧ ಸ್ತರದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಆ. 12 ರಂದು ಈ ಕುರಿತಾಗಿ ಸರ್ಕಾರವನ್ನು ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಇದರ ಸಿದ್ಧತಾ ಕ್ರಮವಾಗಿ ಮನವಿ ನೀಡಲಾಯಿತೆಂದು ಸಂಘಟಕರು ಮಾಹಿತಿ ನೀಡಿದ್ದಾರೆ.