ಸಾರಾಂಶ
ದೇವದಾಸಿ ಮಹಿಳೆಯರ ಮರುಗಣತಿ ಮನೆ ಮನೆಗೆ ತೆರಳಿ ನಡೆಸಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿ ಸ್ಥಳೀಯ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ದೇವದಾಸಿ ಮಹಿಳೆಯರ ವಿಮೋಚನಾ ಸಂಘದಿಂದ ಗುರುವಾರ ಮನವಿ ನೀಡಿದರು.
ಗಜೇಂದ್ರಗಡ: ದೇವದಾಸಿ ಮಹಿಳೆಯರ ಮರುಗಣತಿ ಮನೆ ಮನೆಗೆ ತೆರಳಿ ನಡೆಸಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿ ಸ್ಥಳೀಯ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ದೇವದಾಸಿ ಮಹಿಳೆಯರ ವಿಮೋಚನಾ ಸಂಘದಿಂದ ಗುರುವಾರ ಮನವಿ ನೀಡಿದರು.
ಈ ವೇಳೆ ಸಂಘಟನೆಯ ಜಿಲ್ಲಾ ಗೌರವಾಧ್ಯಕ್ಷ ಬಾಲು ರಾಠೋಡ ಮಾತನಾಡಿ, ಕಳೆದ ಎರಡು-ಮೂರು ದಶಕಗಳಿಂದ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ನೇತೃತ್ವದಲ್ಲಿ ಹಾಗೂ ದೇವದಾಸಿ ಮಹಿಳೆಯರ ನಿರಂತರ ಮನವಿ ಹಾಗೂ ಒತ್ತಾಯದ ಮೇರೆಗೆ ರಾಜ್ಯ ಸರ್ಕಾರವು ತಡವಾಗಿಯಾದರೂ, ಸಕಾರಾತ್ಮಕವಾಗಿ ಸ್ಪಂದಿಸಿ ದೇವದಾಸಿ ಮಹಿಳೆಯರ ಕುಟುಂಬದ ಮರುಗಣತಿಗೆ ನಡೆಸಲು ಮುಂದಾಗಿದ್ದು ಐತಿಹಾಸಿಕ ಕ್ರಮ. ಸರ್ಕಾರದ ನಿರ್ಧಾರವನ್ನು ಸಂಘಟನೆಯು ಸ್ವಾಗತಿಸುತ್ತದೆ. ಆದರೆ ಮರುಗಣತಿ ದೇವದಾಸಿ ಮಹಿಳೆಯರ ಮನೆ, ಮನೆಗೆ ತೆರಳಿ ಮಾಡಬೇಕು, ಗಣತಿಗಾಗಿ ತೊಡಗಿಸಿಕೊಂಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ನೌಕರರ ಮೂಲಕ ಗಣತಿಗೆ ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.
ಇದನ್ನು ತಾಲೂಕು ಮಟ್ಟ ಅಥವಾ ಗ್ರಾಪಂ ಮಟ್ಟದಲ್ಲಿ ನಡೆಸಿದರೆ ತೀವ್ರ ಭ್ರಷ್ಟಾಚಾರಕ್ಕೆ ಮತ್ತು ದೇವದಾಸಿ ಮಹಿಳೆಯರಲ್ಲದ ಇತರೆ ಮಹಿಳೆಯರು ಈ ಸೌಲಭ್ಯ ಅನವಶ್ಯಕವಾಗಿ ಪಡೆಯಲು ಕಾರಣವಾಗುತ್ತದೆ. ಹೀಗಾಗಿ ಇಡೀ ದೇವದಾಸಿ ಮಹಿಳೆಯರ ಕುಟುಂಬದ ಎಲ್ಲ ಸದಸ್ಯರು ಈ ಗಣತಿಗೆ ದೊರೆಯಬೇಕಾದುದರಿಂದ ಅವರೆಲ್ಲರನ್ನು ಬೇರೊಂದು ಸ್ಥಳಗಳಿಗೆ ಕರೆಸಿ ಗಣತಿಗೆ ಮಾಡುವುದು ಆ ಕುಟುಂಬಗಳಿಗೆ ತೊಂದರೆದಾಯಕವಾಗಿದೆ. ಹೀಗಾಗಿ ಅಂಗನವಾಡಿ ಕಾರ್ಯಕರ್ತರಿಗೆ ತರಬೇತಿ ನೀಡಿ ಅವರ ಮೂಲಕವೇ ಮನೆ ಮನೆಗೆ ತೆರಳಿ ದೇವದಾಸಿ ಮಹಿಳೆಯರ ಮನೆಯ ಮುಂದೆ ಗಣತಿ ಮಾಡುವುದು ಸೂಕ್ತ. ಸರ್ಕಾರ ಸ್ಪಷ್ಟ ನಿಲುಮೆಯಿಂದ ಈ ಕೆಲಸ ಮಾಡಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಅಧ್ಯಕ್ಷೆ ಹುಲಗೆಮ್ಮ ಮಾತಿನ, ತಾಲೂಕಾಧ್ಯಕ್ಷೆ ದುರಗವ್ವ ಮಾದರ, ಮಲ್ಲಿಕಾರ್ಜುನ ಮಾದರ, ಚಂದ್ರು ಹಾದಿಮನಿ, ಕಿಟ್ಟವ್ವ ಮಾದರ, ಕೇಶವ್ವ ಮಾದರ, ಕಳಕವ್ವ ಕೋತಬಾಳ, ಶಾಂತವ್ವ ಮಾದರ, ಕಸ್ತೂರವ್ವ ಮಾದರ, ಶಿವವ್ವ ಮಾದರ, ರೋಣವ್ವ ಮಾದರ, ಮರಿಯವ್ವ ಮೇಲಿನಮನಿ, ಶೇಕವ್ವ ಕರಡಿ, ಬಸವ್ವ ಚಿಕ್ಕಾಡಿ, ಹನಮವ್ವ ಹುನಗುಂದ, ಬೀಮವ್ವ ಹಾದಿಮನಿ, ದೇವಕ್ಕ ಬನ್ನಿಹಟ್ಟಿ ಇದ್ದರು.