ಧಾರವಾಡ:

ಇಲ್ಲಿಯ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತರ ಸಂಘದ ಜಿಲ್ಲಾ ಸಮಿತಿ ವತಿಯಿಂದ ರಾಜ್ಯ ಬಜೆಟ್‌ನಲ್ಲಿ ಆಶಾ ಕಾರ್ಯಕರ್ತೆಯರಿಗೆ ವೇತನ ಹೆಚ್ಚಳ, ತರ್ಕ ಬದ್ಧಗೊಳಿಸುವ ಹೆಸರಿನಲ್ಲಿ ತೆಗೆಯುವ ನೀತಿ ಕೈಬಿಡಿ ಮತ್ತು ಮುಖ್ಯಮಂತ್ರಿ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ರಾಜ್ಯವ್ಯಾಪಿ ಪ್ರತಿಭಟನೆಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಗುರುವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷೆ ಭುವನಾ ಬಳ್ಳಾರಿ, 2025ರ ಜನವರಿ ನಡೆದ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಹೋರಾಟದ ಸಂದರ್ಭದಲ್ಲಿ ಮಾಸಿಕ ಕನಿಷ್ಠ ₹ 10,000 ಭರವಸೆ ನೀಡಿದ್ದು ಈ ವರೆಗೆ ಆದೇಶ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಕೈಬಿಟ್ಟ ಆಶಾಗಳಿಗೆ ಹೊರ ಗುತ್ತಿಗೆ ಗ್ರೂಪ್ ''''''''ಡಿ'''''''' ನೌಕರಿ ಕೆಲಸ ನೀಡುವುದಾಗಿ ತಿಳಿಸಿ, ಬಹುತೇಕ ಆಶಾಗಳನ್ನು ಕೈಬಿಡುವ ಪಿತೂರಿ ನಡೆಸಲಾಗಿದೆ. ದೇಶದ ಯಾವುದೇ ರಾಜ್ಯದಲ್ಲಿ ಇಲ್ಲದಿರುವುದು ನಮ್ಮ ರಾಜ್ಯದ ಆರೋಗ್ಯ ಇಲಾಖೆ ತರ್ಕಬದ್ಧಗೊಳಿಸುವ ಈ ಹುನ್ನಾರ ಆಶಾಗಳ ಆಕ್ರೋಶಕ್ಕೆ ಕಾರಣವಾಗಿದೆ. ಆದ್ದರಿಂದ ನೀಡಿದ ಭರವಸೆಯಂತೆ ಎಲ್ಲ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅನಿರ್ದಿಷ್ಟಾವಧಿ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಮಖಂಡರಾದ ಸರೋಜ ಮಡಿವಾಳರ, ಸಪ್ನ ಸುಳ್ಳದ, ರಾಜೇಶ್ವರಿ ಕೋರಿ, ಗೀತಾ ಸೂರ್ಯವಂಶಿ,, ಶೈಲಾ ಮುದುಗಲ್, ರುಕ್ಮಣಿ ಯಾಮೋಜಿ, ಗೀತಾ ಭರಮಗೌಡರ, ಗಿರಿಜಾ ಹೊಸಮನಿ, ಶೋಭಾ ಬೆಟಿಗೇರಿ, ಮೈತ್ರಿ ಮಾಗಣ್ಣನವರ್, ಎಲ್ಲಮ್ಮ ಬೋಸ್ಲೆ, ಶಾರದಾ ತಾವರಗೇರಿ ಇದ್ದರು.