ಜಿಲ್ಲಾಸ್ಪತ್ರೆ ಆವರಣದಲ್ಲಿ ಉದ್ಯಾನವನಕ್ಕಾಗಿ ಜಾಗ ಮೀಸಲಾಗಿರಿಸಲಾಗಿತ್ತು. ಈಗ ಉದ್ಯಾನವನ ಗಾಳಿ ಬೆಳಕು ಅಗತ್ಯ ರಸ್ತೆ ಬಿಡದೆ ಎಲ್ಲಂದರಲ್ಲಿ ಕಟ್ಟಡಗಳನ್ನು ಎಬ್ಬಿಸಲಾಗುತ್ತಿದೆ. ಸ್ಥಳವಕಾಶದ ಕೊರತೆ ನೆಪವೊಡ್ಡಿ ಈ ರೀತಿಯ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ.
ಮಂಡ್ಯ: ಜಿಲ್ಲಾಸ್ಪತ್ರೆ ಮಾನಸಿಕ ಹೊರ ರೋಗಿ ಘಟಕದ ಮುಂಭಾಗದ ಬಳಿ ಗಾಳಿ ಬೆಳಕಿಗಾಗಿ ಮೀಸಲಿರಿಸಿರುವ ಉದ್ಯಾನವನದಲ್ಲಿ ಹಿರಿಯ ನಾಗರಿಕರ ಆರೈಕೆ ಕೇಂದ್ರದ ಹೆಸರಲ್ಲಿ ಕಾಂಕ್ರೀಟ್ ಕಟ್ಟಡ ನಿರ್ಮಿಸುತ್ತಿರುವುದನ್ನು ಸ್ಥಗಿತಗೊಳಿಸುವಂತೆ ಕನ್ನಡಪರ ಸಂಘಟನೆಗಳ ಮುಖಂಡರು ವೈದ್ಯಕೀಯ ಶಿಕ್ಷಣ ಇಲಾಖೆ ಅಪರ ಕಾರ್ಯದರ್ಶಿ ಮಹಮ್ಮದ್ ಮೌಸಿನ್ ಅವರಿಗೆ ಮನವಿ ಸಲ್ಲಿಸಿದರು.
ವೈದ್ಯಕೀಯ ಶಿಕ್ಷಣ ಇಲಾಖೆಯ ಕಚೇರಿಯಲ್ಲಿ ಭೇಟಿ ಮಾಡಿದ ಮುಖಂಡರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಿಸುತ್ತಿರುವ ಆರೈಕೆ ಕೇಂದ್ರ ಕಟ್ಟಡದಿಂದ ಆಸ್ಪತ್ರೆಯ ರೋಗಿಗಳು ಮತ್ತು ಸಾರ್ವಜನಿಕರ ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದರು.ಜಿಲ್ಲಾಸ್ಪತ್ರೆ ಆವರಣದಲ್ಲಿ ಉದ್ಯಾನವನಕ್ಕಾಗಿ ಸದರಿ ಜಾಗ ಮೀಸಲಾಗಿರಿಸಲಾಗಿತ್ತು. ಈಗ ಉದ್ಯಾನವನ ಗಾಳಿ ಬೆಳಕು ಅಗತ್ಯ ರಸ್ತೆ ಬಿಡದೆ ಎಲ್ಲಂದರಲ್ಲಿ ಕಟ್ಟಡಗಳನ್ನು ಎಬ್ಬಿಸಲಾಗುತ್ತಿದೆ. ಸ್ಥಳವಕಾಶದ ಕೊರತೆ ನೆಪವೊಡ್ಡಿ ಈ ರೀತಿಯ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಆಸ್ಪತ್ರೆಗೆ ಬೇಕಾದ ಅಗತ್ಯ ವೈದ್ಯಕೀಯ ಸಿಬ್ಬಂದಿ ನೇಮಿಸುವಲ್ಲಿ ವಿಫಲವಾಗಿರುವ ನಮ್ಮ ಆಡಳಿತ ವ್ಯವಸ್ಥೆ ಕಟ್ಟಡಗಳ ನಿರ್ಮಾಣದ ಹಿಂದೆ ಬಿದ್ದಿದೆ ಎಂದು ದೂರಿದರು.
ಆಸ್ಪತ್ರೆ ಒಳರೋಗಿಗಳ ಆವರಣದಲ್ಲಿ ಉತ್ತಮ ಗಾಳಿ ಬೆಳಕಿಗೆ ಬಿಟ್ಟಿದ್ದ ಸ್ಥಳವಕಾಶದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡ ನಿರ್ಮಾಣವನ್ನು ತಕ್ಷಣ ಸ್ಥಗಿತಗೊಳಿಸಬೇಕು. ಯಾವುದೇ ಹೊಸ ಕಟ್ಟಡ ನಿರ್ಮಾಣ ಕೈಬಿಡಬೇಕು ಎಂದು ಆಗ್ರಹಿಸಿದರು.ಉದ್ದೇಶಿತ ಕಟ್ಟಡಕ್ಕೆ ಪರ್ಯಾಯಾವಾಗಿ ಕಣ್ಣು ಮತ್ತು ಇಎನ್ ಟಿ ವಿಭಾಗದ ಪಕ್ಕದಲ್ಲಿ ವಿಶಾಲ ವಾರ್ಡುಗಳು ಕಳೆದ ಹಲವು ವರ್ಷಗಳಿಂದ ಖಾಲಿಯಿದ್ದು ಅವುಗಳನ್ನು ಬಳಕೆ ಮಾಡಿಕೊಳ್ಳಬೇಕು. ಮೂರು ದಶಕಗಳಿಂದ ನನೆಗುದಿಗೆ ಬಿದ್ದಿರುವ ಮೆಡಿಕಲ್ ಕಾಲೇಜಿಗೆ ಸೇರಿದ 19 ಎಕರೆ ಭೂಮಿ ಒತ್ತುವರಿ ತೆರವುಗೊಳಿಸಿ ಜಿಲ್ಲೆಯ ಜನಪ್ರತಿನಿಧಿಗಳು ತಮ್ಮ ರಾಜಕೀಯ ಇಚ್ಚಾಶಕ್ತಿ ಪ್ರದರ್ಶಿಸಬೇಕು ಎಂದು ಕೋರಿದರು.
ಮನವಿ ಸ್ವೀಕರಿಸಿದ ಅಧಿಕಾರಿಗಳು ಮಿಮ್ಸ್ ನಿರ್ದೇಶಕರಿಗೆ ಅಗತ್ಯ ಸೂಚನೆ ನೀಡುವುದಾಗಿ ತಿಳಿಸಿದರು. ಈ ವೇಳೆ ಕರುನಾಡ ಸೇವಕರು ಸಂಘಟನೆ ರಾಜ್ಯ ವಕ್ತಾರ ಎಂ.ಬಿ.ನಾಗಣ್ಣಗೌಡ. ಮನು, ರಾಜೇಂದ್ರ. ಕೋ.ಪು.ಗುಣಶೇಖರ ಇದ್ದರು.