ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಘಟನೆ ಅಮಾನವೀಯ ಕೃತ್ಯವಾಗಿದೆ. ಕೂಡಲೇ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಲಾಯಿತು.

ನರಗುಂದ: ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ದಲಿತ ಯುವಕನನ್ನು ಮದುವೆಯಾಗಿದ್ದ ಮಾನ್ಯಾ ಪಾಟೀಲ ಎಂಬ ಗರ್ಭಿಣಿಯನ್ನು ಕುಟುಂಬದವರೇ ಹತ್ಯೆ ಮಾಡಿದ್ದಲ್ಲದೇ, ಯುವಕನ ಕುಟುಂಬದವರ ಮೇಲೆ ಹಲ್ಲೆ ಮಾಡಿದವರನ್ನು ಉಗ್ರ ಶಿಕ್ಷೆಗೆ ಒಳಪಡಿಸಬೇಕೆಂದು ಪುರಸಭೆ ಮಾಜಿ ಉಪಾಧ್ಯಕ್ಷ ವಾಸು ಜೋಗಣ್ಣವರ ಸರ್ಕಾರವನ್ನು ಆಗ್ರಹಿಸಿದರು.

ಶುಕ್ರವಾರ ಪಟ್ಟಣದ ಶಿವಾಜಿ ವೃತ್ತದಲ್ಲಿ ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ಮಾನ್ಯಾ ಪಾಟೀಲ ಮರ್ಯಾದೆ ಹತ್ಯೆ ಮಾಡಿದ ಜಾತಿವಾದಿಗಳಿಗೆ ಮರಣದಂಡನೆ ಶಿಕ್ಷೆ ನೀಡುವಂತೆ ಆಗ್ರಹಿಸಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಮಾನವ ಸರಪಳಿ ಮೂಲಕ ರಸ್ತೆತಡೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ‌ ಮನವಿ ಸಲ್ಲಿಸಿ ನಂತರ ಮಾತನಾಡಿದರು.

ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಘಟನೆ ಅಮಾನವೀಯ ಕೃತ್ಯವಾಗಿದೆ. ಕೂಡಲೇ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿದರು.

ನ್ಯಾಯವಾದಿ ಎಫ್.ವೈ. ದೊಡಮನಿ ಮಾತನಾಡಿ, ಜಾತಿವಾದಿಗಳಿಗೆ ಮರಣದಂಡನೆ ನೀಡಬೇಕು. ಹಲ್ಲೆಗೆ ಒಳಗಾದ ವಿವೇಕಾನಂದ ಹರಿಜನ ಕುಟುಂಬದವರಿಗೆ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿದರು.

ದಲಿತ ಸಂಘರ್ಷ ಸಮಿತಿ ಘಟಕದ ಅಧ್ಯಕ್ಷ ಕಿರಣ ಜೋಗಣ್ಣವರ, ಮುತ್ತು ಸುರಕೋಡ, ದತ್ತು ಜೋಗಣ್ಣವರ, ವಿಜಯ ಚಲವಾದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಹಸೀಲ್ದಾರ್ ಶ್ರೀಶೈಲ ತಳವಾರ ಅವರು ಮನವಿ ಸ್ವೀಕರಿಸಿ ಸರ್ಕಾರಕ್ಕೆ ರವಾನೆ ಮಾಡಲಾಗುವುದೆಂದು ಹೇಳಿದರು.

ಈ ಸಂದರ್ಭದಲ್ಲಿ ರವಿ ಚಿಂತಾಲ, ಯಶವಂತ ನಡುವಿನಮನಿ, ಈರಪ್ಪ ಮ್ಯಾಗೇರಿ, ಗುರು ಕೆಂಗಾರಕರ, ಪ್ರಶಾಂತ ತಡಸಿ, ವಿಕ್ರಮ ಹೊನಕೇರಿ, ಅರ್ಜುನ ಮುಗನೂರ, ನಿಂಗಪ್ಪ ಮಾದರ, ಪ್ರವೀಣ ಮಾದರ, ಮಹಾಂತೇಶ ಮಾದರ ಇತರರು ಇದ್ದರು.