ಮುಖ್ಯರಸ್ತೆ ಅಗಲೀಕರಣ ಕಾಮಗಾರಿಯಿಂದ ಪಟ್ಟಣದ ಮುಖ್ಯರಸ್ತೆಯಲ್ಲಿ ಸಂಚಾರ ಸಂಪೂರ್ಣ ಬಂದ್ ಆಗಿರುವ ಹಿನ್ನೆಲೆ ಸಾರ್ವಜನಿಕರಿಗೆ ಪರ್ಯಾಯ ಸಂಚಾರ ವ್ಯವಸ್ಥೆ ಕಲ್ಪಿಸುವಂತೆ ಹಾಗೂ ಕಲಾಭವನದ ಬಳಿ ತಾತ್ಕಾಲಿಕ ಬಸ್ ನಿಲ್ದಾಣ ಆರಂಭಿಸಲು ಕ್ರಮ ಕೈಗೊಳ್ಳುವಂತೆ ಕರುನಾಡ ಸಮಗ್ರ ಮಹಿಳಾ ಹಿತ ರಕ್ಷಣಾ ಸಮಿತಿ ಸದಸ್ಯರು ಶುಕ್ರವಾರ ಸಾರಿಗೆ ಇಲಾಖೆ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.

ಬ್ಯಾಡಗಿ:ಮುಖ್ಯರಸ್ತೆ ಅಗಲೀಕರಣ ಕಾಮಗಾರಿಯಿಂದ ಪಟ್ಟಣದ ಮುಖ್ಯರಸ್ತೆಯಲ್ಲಿ ಸಂಚಾರ ಸಂಪೂರ್ಣ ಬಂದ್ ಆಗಿರುವ ಹಿನ್ನೆಲೆ ಸಾರ್ವಜನಿಕರಿಗೆ ಪರ್ಯಾಯ ಸಂಚಾರ ವ್ಯವಸ್ಥೆ ಕಲ್ಪಿಸುವಂತೆ ಹಾಗೂ ಕಲಾಭವನದ ಬಳಿ ತಾತ್ಕಾಲಿಕ ಬಸ್ ನಿಲ್ದಾಣ ಆರಂಭಿಸಲು ಕ್ರಮ ಕೈಗೊಳ್ಳುವಂತೆ ಕರುನಾಡ ಸಮಗ್ರ ಮಹಿಳಾ ಹಿತ ರಕ್ಷಣಾ ಸಮಿತಿ ಸದಸ್ಯರು ಶುಕ್ರವಾರ ಸಾರಿಗೆ ಇಲಾಖೆ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಸಮಿತಿಯ ರಾಜ್ಯಾಧ್ಯಕ್ಷೆ ಪರೀದಾಬಾನು ನದಿಮುಲ್ಲಾ, ಪಟ್ಟಣದ ಜನರ ಸುಮಾರು 15 ವರ್ಷಗಳ ಬಹುಕಾಲದ ಕನಸಾಗಿದ್ದ ಮುಖ್ಯರಸ್ತೆ ಅಗಲೀಕರಣ ಕಾಮಗಾರಿ ಇದೀಗ ನಡೆಯುತ್ತಿರುವುದು ಸಂತಸದ ಸಂಗತಿ. ಆದರೆ ರಸ್ತೆ ಬಂದ್ ಆಗಿರುವುದರಿಂದ ಸಾರ್ವಜನಿಕರು ನಿತ್ಯ ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ಹಾವೇರಿ ಕಡೆಯಿಂದ ಬರುವ ಬಸ್‌ಗಳನ್ನು ಕಾಕೋಳ ರಸ್ತೆಯಲ್ಲಿ ನಿಲ್ಲಿಸಲಾಗುತ್ತಿದ್ದು, ಅಲ್ಲಿಂದ ಮಾರುಕಟ್ಟೆ, ಶಾಲೆ-ಕಾಲೇಜುಗಳು ಹಾಗೂ ವಿವಿಧ ಕಚೇರಿಗಳಿಗೆ ಸಾರ್ವಜನಿಕರು ನಡೆದುಕೊಂಡೇ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಹಾವೇರಿ ಹಾಗೂ ಮೋಟೆಬೆನ್ನೂರು ಭಾಗದಿಂದ ಬರುವ ಬಸ್‌ಗಳನ್ನು ಪಟ್ಟಣದ ಕಲಾಭವನದ ಬಳಿ ತಾತ್ಕಾಲಿಕವಾಗಿ ನಿಲುಗಡೆ ಮಾಡುವ ವ್ಯವಸ್ಥೆ ಕಲ್ಪಿಸಿದರೆ ಸಾರ್ವಜನಿಕರಿಗೆ ಬಹಳ ಅನುಕೂಲವಾಗಲಿದೆ ಎಂದರು.

ಸಮಿತಿಯ ಸದಸ್ಯೆ ಗುತ್ತೆಮ್ಮ ಮಾಳಗಿ ಮಾತನಾಡಿ, ಪಟ್ಟಣದಲ್ಲಿ 40 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದ್ದು, ದಿನದಿಂದ ದಿನಕ್ಕೆ ನಗರ ವಿಸ್ತಾರವಾಗುತ್ತಿದೆ. ಆದರೆ ಪಟ್ಟಣದ ವಿವಿಧ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಬಸ್ ನಿಲ್ದಾಣದಿಂದ ವಿವಿಧ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಸುರಕ್ಷಿತ ಹಾಗೂ ಕಡಿಮೆ ವೆಚ್ಚದ ಪ್ರಯಾಣ ಸೌಲಭ್ಯ ಅಗತ್ಯವಾಗಿದೆ. ಪಟ್ಟಣದೊಳಗೆ ಸಂಚಾರಿ ಬಸ್ ಸೇವೆ ಆರಂಭಿಸಿದರೆ ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಹಿರಿಯ ನಾಗರಿಕರಿಗೆ ಬಹಳ ಅನುಕೂಲವಾಗಲಿದೆ ಎಂದರು.

ಪಾಂಡುರಂಗ ಸುತಾರ, ರತ್ನವ್ವ ಕಮ್ಮಾರ, ಮುಬೀನಾ ಬಾಣಾವರ, ಶೇಹನಾಜ್ ಮೆಡ್ಲೇರಿ, ಜಮಾಲಬಿ ನದಾಫ್, ರತ್ನವ್ವ ಮುದಕಮ್ಮನವರ, ಶಾಂತವ್ವ ಕುಸಗೂರು, ಬಿಬಿಜಾನ್ ನದಾಫ್, ಶಾಂತವ್ವ ಪಾಟೀಲ, ಫಾತಿಮಾ ಸಯ್ಯದ್, ಸಾವಿತ್ರಿ ಕೇರಗೋಡ, ರೇಖಾ ಬ್ಯಾಡಗಿ, ಕರಬಸಮ್ಮ ಮಡಿವಾಳರ ಉಪಸ್ಥಿತರಿದ್ದರು.