ಸಾರಾಂಶ
ಹಗರಿಬೊಮ್ಮನಹಳ್ಳಿ: ಅಂಜಲಿ ಅಂಬಿಗೇರ್ ಕೊಲೆ ಆರೋಪಿ ಗಿರೀಶ್ ಸಾವಂತರನ್ನು ಕೂಡಲೇ ಪತ್ತೆಹಚ್ಚಿ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ವಿಜಯನಗರ ಜಿಲ್ಲಾ ಗಂಗಾಮತ ಸಮಾಜ ಸಂಘದವರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.ಈ ಕುರಿತು ಸಮಾಜದ ಜಿಲ್ಲಾಧ್ಯಕ್ಷ ಅಂಬಾಡಿ ನಾಗರಾಜ ಮಾತನಾಡಿ, ಪ್ರೀತಿ ನಿರಾಕರಣೆ ವಿಷಯಕ್ಕೆ ಹುಬ್ಬಳ್ಳಿಯಲ್ಲಿ ಮತ್ತೋರ್ವ ಯುವತಿ ಬಲಿಯಾಗಿರುವುದು ಬೇಸರದ ಸಂಗತಿಯಾಗಿದೆ. ಕೊಲೆ ಆರೋಪಿ ಗಿರೀಶ್ ಮೊದಲೇ ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಅಂಜಲಿಗೆ ಬೆದರಿಕೆ ಹಾಕಿದ್ದನು. ಈ ವಿಷಯವನ್ನು ಅಂಜಲಿ ಕುಟುಂಬದವರು ಪೊಲೀಸರಿಗೆ ತಿಳಿಸಿದ್ದರು ಕೂಡ ಈ ಘಟನೆ ನಡೆದಿರುವುದು ಪೊಲೀಸ್ ಅಧಿಕಾರಿಗಳ ಆಡಳಿತ ಲೋಪ ಎತ್ತಿತೋರಿಸುತ್ತಿದೆ. ಕುಟುಂಬದವರ ಮಾಹಿತಿ ನಂತರ ಪೊಲೀಸರು ಗಿರೀಶ್ನನ್ನು ಬಂಧಿಸಿದ್ದರೆ ಈ ಘಟನೆ ಸಂಭವಿಸುತ್ತಿರಲಿಲ್ಲ. ಕೊಲೆ ಆರೋಪಿಯನ್ನು ಈವರೆಗೂ ಬಂಧಿಸದಿರುವುದು ಖಂಡನೀಯವಾಗಿದೆ. ಕೂಡಲೇ ಕೊಲೆಗೈದ ಗಿರೀಶ್ನನ್ನು ಬಂಧಿಸಿ, ಸರಕಾರ ಅಂಜಲಿ ಕುಟುಂಬಕ್ಕೆ ೫೦ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಸಮಾಜದ ಜಿಲ್ಲಾ ಗೌರವಾಧ್ಯಕ್ಷ ವೈ.ಯಮುನೇಶ್, ಕೆ.ಎಂ.ಅಶೋಕ, ಬಿ.ನಿಂಗಪ್ಪ, ಸುರೇಶ, ಸೂರ್ಯನಾರಾಯಣಪ್ಪ, ಮುತ್ಕೂರು ರಾಮಣ್ಣ, ಅಂಬಿಗರ ಮಂಜುನಾಥ, ರಾಜೇಶ್, ವರುಣ, ನಾಗರಾಜ, ಬಿ.ಅಶೋಕ ಇತರರಿದ್ದರು. ಹಗರಿಬೊಮ್ಮನಹಳ್ಳಿ ಅಂಜಲಿ ಅಂಬಿಗೇರ್ ಕೊಲೆ ಆರೋಪಿಯನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಗಂಗಾಮತ ಸಮಾಜದ ಪದಾಧಿಕಾರಿಗಳು ಹೊಸಪೇಟೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.