ಕನ್ನಡಪ್ರಭ ವಾರ್ತೆ ಮಂಡ್ಯ
ಮೈಷುಗರ್ ಕಾರ್ಖಾನೆಯ ಆಡಳಿತ ವ್ಯವಹಾರಗಳು ಪಾರದರ್ಶಕವಾಗಿದ್ದರೆ ಇಡೀ ವರ್ಷದ ಆದಾಯ, ವೆಚ್ಚ, ಕಬ್ಬು ಅರೆದ ಲೆಕ್ಕ ಮತ್ತು ಆಸ್ತಿ ಮಾರಾಟ, ವಿಲೇವಾರಿ ಕುರಿತು ತಕ್ಷಣವೇ ಶ್ವೇತಪತ್ರ ಹೊರಡಿಸುವಂತೆ ಮೈಷುಗರ್ ಉಳಿಸಿ ಹೋರಾಟ ಸಮಿತಿಯ ಎಂ.ಬಿ.ನಾಗಣ್ಣಗೌಡ ಒತ್ತಾಯಿಸಿದರು.ಕಾರ್ಖಾನೆಯ ಬಿ-ಮಿಲ್ನ್ನು ಮಾರಾಟ ಮಾಡಲು ಅನುಸರಿಸಿದ ಕಾನೂನು ಪ್ರಕ್ರಿಯೆಗಳೇನು. ಟೆಂಡರ್ ಪ್ರಕ್ರಿಯೆಯ ದಾಖಲೆಗಳು, ಮೌಲ್ಯಮಾಪನ ವರದಿಯ ಪ್ರತಿಯನ್ನು ಒದಗಿಸಿ ಅನುಪಯುಕ್ತ ವಸ್ತುಗಳ ವಿಲೇವಾರಿ ಟೆಂಡರ್ ಪ್ರಕ್ರಿಯೆಗೆ ಮೊದಲು ಇದರ ಮೌಲ್ಯಮಾಪನ ಮಾಡಲಾಗಿದೆಯೇ ಅದಕ್ಕೆ ಅರ್ಹ ಏಜೆನ್ಸಿಗಳನ್ನು ಬಳಸಿಕೊಳ್ಳಲಾಗಿದೆಯೇ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಕಳೆದ ಮೂರು ವರ್ಷಗಳಲ್ಲಿ ಕಾರ್ಖಾನೆಯ ಯಾವೆಲ್ಲಾ ಸ್ಥಿರ ಮತ್ತು ಚರ ಆಸ್ತಿಗಳನ್ನು ವಿಲೇವಾರಿ ಮಾಡಲಾಗಿದೆ. ಅವುಗಳ ಅಧಿಕೃತ ಮಾರುಕಟ್ಟೆ ಮೌಲ್ಯ ಎಷ್ಟು, ಎಷ್ಟು ಮೊತ್ತಕ್ಕೆ ಮಾರಾಟ ಮಾಡಲಾಗಿದೆ. ಇವುಗಳ ವಿಲೇವಾರಿಯಲ್ಲಿ ಕೆಟಿಟಿಪಿ ಪೋರ್ಟಲ್ ಬದಲು ಮ್ಯಾನ್ಯುಯಲ್ ಟೆಂಡರ್ ಪ್ರಕ್ರಿಯೆ ಮೊರೆ ಹೋಗಿರುವುದು ಅಕ್ರಮ ಎಸಗುವ ಉದ್ದೇಶ ಹೊಂದಿರುವುದಾಗಿ ಶಂಕೆ ವ್ಯಕ್ತಪಡಿಸಿದರು.ಕಳೆದ ಎರಡು ವರ್ಷಗಳಲ್ಲಿ ಸಿ.ಡಿ.ಗಂಗಾಧರ್ರವರ ಕಳಪೆ ಆಡಳಿತದಿಂದ ಕಾರ್ಖಾನೆ ಭಾರೀ ನಷ್ಟ ಅನುಭವಿಸಿದೆ. ಈಗ ನಷ್ಟದ ಹಣವನ್ನು ಯಾವ ಮೂಲದಿಂದ ತುಂಬಿ ಸರಿದೂಗಿಸಿದ್ದೀರಿ. ಒಂದೆಡೆ ಸರ್ಕಾರ ಯಾವುದೇ ಅನುದಾನ, ಸಹಾಯಧನ ನೀಡಿಲ್ಲ ಎನ್ನುವವರು ನಷ್ಟವನ್ನು ಸಮತೋಲನ ಮಾಡಿರುವುದಾಗಿ ಹೇಳುತ್ತಿರುವುದಾದರೆ ಕಪ್ಪು ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.
ಕಾರ್ಖಾನೆಯ ವಾಸ್ತವತೆಯನ್ನು ಬಹಿರಂಗಪಡಿಸುತ್ತಿರುವ ರೈತರನ್ನು ಮತ್ತು ಸಾಮಾಜಿಕ ಹೋರಾಟಗಾರರನ್ನು ಕಿಡಿಗೇಡಿಗಳು ಎಂದು ಕರೆದಿರುವುದು ಸರಿಯೇ. ಈ ಹೇಳಿಕೆಯನ್ನು ವಾಪಸ್ ಪಡೆದ ರೈತರ ಕ್ಷಮೆಯಾಚಿಸುವಂತೆ ಆಗ್ರಹಿಸಿದರು.
ಕಬ್ಬು ಅರೆಯುವ ಪ್ರಕ್ರಿಯೆಗಾಗಿ ಬಾಹ್ಯ ಕಂಪನಿಗಳು ಅಥವಾ ಖಾಸಗಿ ಸಂಸ್ಥೆಗಳೊಂದಿಗೆ ಮಾಡಿಕೊಳ್ಳಲಾದ ಒಪ್ಪಂದಗಳ ಷರತ್ತುಗಳನ್ನು ಬಹಿರಂಗಪಡಿಸುತ್ತಿಲ್ಲ. ಕಾರ್ಖಾನೆ ಮಾಡಿಕೊಂಡಷ್ಟು ಒಪ್ಪಿಗೆ ಕಬ್ಬನ್ನು ಅರೆಯದಿದ್ದರೂ ಗುತ್ತಿಗೆ ಕಂಪನಿಗೆ ಒಪ್ಪಿಗೆ ಕಬ್ಬಿನಷ್ಟೇ ಹಣವನ್ನು ಪಾವತಿಸಲಾಗುತ್ತಿದೆ. ಇದು ಕಾರ್ಖಾನೆಗೆ ಉಂಟಾಗುವ ನಷ್ಟವಲ್ಲದೆ ಮತ್ತೇನು. ಇಂತಹ ಆಡಳಿತದಿಂದ ಕಾರ್ಖಾನೆ ಸುಧಾರಣೆ ಕಾಣುವುದಕ್ಕೆ ಸಾಧ್ಯವಿಲ್ಲ ಎಂದು ನುಡಿದರು.
ಸರ್ಕಾರಿ ಸ್ವಾಮ್ಯದಲ್ಲಿರುವ ಏಕೈಕ ಸಕ್ಕರೆ ಕಾರ್ಖಾನೆ ಮೈಷುಗರ್ ಆಗಿರುವ ಕಾರಣ ದಕ್ಷ, ಪ್ರಾಮಾಣಿಕ ಅಧಿಕಾರಿಗಳನ್ನು ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ನೇಮಿಸಬೇಕು. ಆಡಳಿತದ ಅನುಭವವಿರುವವರನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಬೇಕು. ಹೈಕೋರ್ಟ್ ನಿರ್ದೇಶನದಂತೆ ರಾಜಕಾರಣಿಗಳ ಹಿಂಬಾಲಕರಿಗೆ ಅಧಿಕಾರ ನೀಡಬಾರದು. ಸರ್ಕಾರಿ ಸ್ವಾಮ್ಯದಲ್ಲಿ ನಷ್ಟದಲ್ಲಿದ್ದ ಹಟ್ಟಿ ಚಿನ್ನದ ಗಣಿ, ಮೈಸೂರು ಶ್ರೀಗಂಧದ ಕಾರ್ಖಾನೆ ಇವೆಲ್ಲವೂ ಈಗ ಲಾಭದತ್ತ ಮುನ್ನಡೆಯುತ್ತಿವೆ. ಅದೇ ರೀತಿ ಮೈಷುಗರ್ ಕಾರ್ಖಾನೆಯ ಆಡಳಿತವನ್ನು ಸುಧಾರಿಸುವಂತಹ ಕ್ರಮಗಳನ್ನು ರಾಜ್ಯಸರ್ಕಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಗೋಷ್ಠಿಯಲ್ಲಿ ಸಾತನೂರು ವೇಣುಗೋಪಾಲ್, ಅಣ್ಣಯ್ಯ, ಎನ್.ರಾಜೇಂದ್ರಸಿಂಗ್ ಬಾಬು, ಎಚ್.ಡಿ.ಜಯರಾಂ, ಶಿವರಾಮೇಗೌಡ ಇತರರಿದ್ದರು.