ಜನನ, ಮರಣ ನೋಂದಣಿ ತಿದ್ದುಪಡಿ ಕಾಯ್ದೆ ಹಿಂಪಡೆವಂತೆ ಆಗ್ರಹ

| Published : Nov 01 2023, 01:00 AM IST / Updated: Nov 01 2023, 01:01 AM IST

ಜನನ, ಮರಣ ನೋಂದಣಿ ತಿದ್ದುಪಡಿ ಕಾಯ್ದೆ ಹಿಂಪಡೆವಂತೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಕಾನೂನು ಜಾರಿಗೊಳಿಸದಂತೆ ಸರ್ಕಾರಕ್ಕೆ ಆಗ್ರಹಿಸಿ ವಕೀಲರ ಸಂಘ ದಿಂದ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಶಹಾಪುರ ಕೇಂದ್ರ ಸರ್ಕಾರ ಅ.1ರಿಂದ ಜಾರಿಗೆ ತಂದಿರುವ ಜನನ ಮತ್ತು ಮರಣ ನೋಂದಣಿ ತಿದ್ದುಪಡೆ ಕಾಯ್ದೆಯಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ. ಉದ್ದೇಶಿತ ಕಾಯ್ದೆಯನ್ನು ಹಿಂಪಡೆಯಬೇಕು ಹಾಗೂ ರಾಜ್ಯ ಸರ್ಕಾರ ಜಾರಿಗೊಳಿಸಬಾರದು ಎಂದು ಆಗ್ರಹಿಸಿ ವಕೀಲರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು. ಕಾಯ್ದೆ ಜಾರಿಗೊಳ್ಳುವ ಮುಂಚೆ ನಿಗದಿಪಡಿಸಿದ ಕಾಲಾವಧಿಯಲ್ಲಿ ನೋಂದಣಿಯಾಗಿರದಿದ್ದರೆ ಜನನ ಮತ್ತು ಮರಣ ನೋಂದಣಿ ಪ್ರಮಾಣ ಪತ್ರವನ್ನು ಆಯಾ ನ್ಯಾಯಾಲಯದ ವ್ಯಾಪ್ತಿಯಲ್ಲಿ ಕಕ್ಷಿದಾರರು ಪಡೆದುಕೊಳ್ಳುತ್ತಿದ್ದರು. ಆದರೆ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ತಿದ್ದುಪಡಿ ಕಾಯ್ದೆಯಿಂದ ಆಯಾ ಉಪವಿಭಾಗಾಧಿಕಾರಿ ಬಳಿ ತೆರಳಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಪ್ರಮಾಣ ಪತ್ರವನ್ನು ಪಡೆಯಲು ಅವಕಾಶ ನೀಡಿದೆ. ಕೇಂದ್ರ ಸರ್ಕಾರದ ನಿಲುವು ಸರಿಯಲ್ಲ ಎಂದು ಭಾರತೀಯ ವಕೀಲರ ಒಕ್ಕೂಟದ ತಾಲೂಕು ಘಟಕದ ಸಂಚಾಲಕರಾದ ಆರ್. ಚೆನ್ನಬಸ್ಸು ಹಾಗೂ ಸಯ್ಯದ ಇಬ್ರಾಹಿಂ ಸಾಬ್ ಜಮದಾರ ತಿಳಿಸಿದರು. ನ್ಯಾಯಾಲಯಕ್ಕೂ ಇದುವರೆಗೂ ಸ್ಪಷ್ಟ ಮಾಹಿತಿ ಹಾಗೂ ಲಿಖಿತ ಆದೇಶ ಬಂದಿಲ್ಲ. ನ್ಯಾಯಾಲಯದಲ್ಲಿ ಜನನ ಮತ್ತು ಮರಣ ನೋಂದಣಿ ಅರ್ಜಿ ದಾಖಲಿಸಿಕೊಳ್ಳುತ್ತಿಲ್ಲ. ಪ್ರಮಾಣ ಪತ್ರ ಪಡೆಯಲು ಯಾವ ಅಗತ್ಯ ದಾಖಲೆಗಳು ಮತ್ತು ತಗಲುವ ವೆಚ್ಚ, ಎಷ್ಟು ದಿನದಲ್ಲಿ ಪ್ರಮಾಣ ಪತ್ರ ನೀಡಬೇಕು ಎಂಬ ಸ್ಪಷ್ಟವಾದ ಮಾಹಿತಿ ಕಕ್ಷಿದಾರರಿಗೆ ಇಲ್ಲ. ಇದು ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ. ಕೇಂದ್ರ ಸರ್ಕಾರದ ತಿದ್ದುಪಡಿ ಕಾಯ್ದೆಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿ ಮೊದಲಿನಂತೆ ಪ್ರಮಾಣ ಪತ್ರ ಪಡೆಯಲು ಸ್ಪಷ್ಟ ಆದೇಶ ನೀಡಬೇಕು. ಅನಾವಶ್ಯಕವಾಗಿ ಸಮಯ ಹಾಗೂ ಹಣ ವೆಚ್ಚವಾಗುತ್ತದೆ. ಜನ ವಿರೋಧಿ ಕಾಯ್ದೆ ತಕ್ಷಣ ಹಿಂಪಡೆಯಬೇಕು ಎಂದು ವಕೀಲರು ಆಗ್ರಹಿಸಿದರು. ವಕೀಲರ ಸಂಘದ ಅಧ್ಯಕ್ಷ ಸಂತೋಷ್ ದೇಶಮುಖ, ಹಿರಿಯ ವಕೀಲರಾದ ಹನುಮೇಗೌಡ ಮರಕಲ್, ರಮೇಶ ದೇಶಪಾಂಡೆ, ವಿಶ್ವನಾಥರಡ್ಡಿ ಸಾಹು, ಯೂಸೂಫ್ ಸಿದ್ದಕಿ, ಟಿ.ನಾಗೇಂದ್ರ, ಮಲ್ಕಪ್ಪ ಪಾಟೀಲ್, ಸಿದ್ದೂ ಪಸ್ಪೂಲ್, ಶರಣಪ್ಪ ಹೊಸಮನಿ, ರಮೇಶ ಸೇಡಂಕರ್, ಶರಬಣ್ಣ ರಸ್ತಾಪುರ, ಮಲ್ಲಪ್ಪ ಪೂಜಾರಿ, ಸಂದೀಪ ದೇಸಾಯಿ, ದೇವರಾಜ ಚೆಟ್ಟಿ, ವಿನೋದ ದೊರೆ, ಚೇತನ ಹಿರೇಮಠ, ಅಮರೇಶ ಇಟಗಿ, ಭೀಮರಾಜ, ನಾಗರಡ್ಡಿ, ಚೆನ್ನಬಸಪ್ಪ ಬೇನಕ ಇತರರಿದ್ದರು. --------- ಕೋಟ-1 : ಜನನ ಮತ್ತು ಮರಣ ನೋಂದಣಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದಾಗ ಹಿಂಬರಹ ನೀಡುತ್ತಿದ್ದು, ಅದನ್ನು ಆಯಾ ಉಪವಿಭಾಗಾಧಿಕಾರಿಯ ಮೂಲಕ ಪಡೆದುಕೊಳ್ಳಲು ಸೂಚಿಸಿದೆ. - ಉಮಾಕಾಂತ ಹಳ್ಳೆ. ತಹಸೀಲ್ದಾರ್, ಶಹಾಪುರ -- 31ವೈಡಿಆರ್5: ಶಹಾಪುರ ನಗರದಲ್ಲಿ ಜನನ ಮತ್ತು ಮರಣ ನೋಂದಣಿ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು ಎಂದು ಆಗ್ರಹಿಸಿ ವಕೀಲರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.