ಎಸ್ಟಿ ಅಲ್ಲದವರಿಗೆ ಜಾತಿ ಪ್ರಮಾಣ ಪತ್ರ ಕೊಡದಿರಲು ಆಗ್ರಹ

| Published : Apr 03 2024, 01:31 AM IST

ಸಾರಾಂಶ

ಕರ್ನಾಟಕ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ನಕಲಿ ಜಾತಿ ಪ್ರಮಾಣ ಪತ್ರಗಳ ಹಾವಳಿ ವಿಪರೀತವಾಗಿದ್ದು, ಇಂತಹ ಪ್ರಕರಣಗಳ ಬಗ್ಗೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಕೊಪ್ಪಳ

ಕರ್ನಾಟಕ ಉಚ್ಚ ನ್ಯಾಯಾಲಯ ನೀಡಿರುವ ಮಧ್ಯಂತರ ಆದೇಶವನ್ನು ಜಾರಿ ಮಾಡುವ ಕುರಿತು ಅಪರ ಡಿಸಿ ಮೂಲಕ ಸರ್ಕಾರಕ್ಕೆ ರಾಜ್ಯ ವಾಲ್ಮೀಕಿ ಮಹಾಸಭಾದ ಕೊಪ್ಪಳ ಘಟಕದ ವತಿಯಿಂದ ಮನವಿ ಸಲ್ಲಿಸಲಾಯಿತು. ಕರ್ನಾಟಕ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ನಕಲಿ ಜಾತಿ ಪ್ರಮಾಣ ಪತ್ರಗಳ ಹಾವಳಿ ವಿಪರೀತವಾಗಿದ್ದು, ಇಂತಹ ಪ್ರಕರಣಗಳ ಬಗ್ಗೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ನಾವು ನೀಡಿದ್ದ ಮನವಿ ಮೇಲೆ ಜಿಲ್ಲಾಧಿಕಾರಿ, ತಹಸೀಲ್ದಾರರಾಗಲಿ ಕ್ರಮ ತೆಗೆದುಕೊಳ್ಳದೇ ಇರುವುದರಿಂದ ಸಾವಿರಾರು ಕೊಟ್ಟಿ ಜಾತಿ ಪ್ರಮಾಣ ಪತ್ರಗಳು ವಿತರಣೆಯಾಗಿ ನೈಜ ಪರಿಶಿಷ್ಟ ವರ್ಗದವರಿಗೆ ಸಾಂವಿಧಾನಿಕವಾಗಿ ಲಭ್ಯವಾಗಬೇಕಿದ್ದ ಸೌಲಭ್ಯಗಳು ಅನ್ಯರ ಪಾಲಾಗಿರುವುದನ್ನು ಗಮನಿಸಲಾಗಿದ್ದು, ಬೇರೆ ದಾರಿಯಿಲ್ಲದೆ ಉಚ್ಚನ್ಯಾಯಾಲಯದ ಮೊರೆ ಹೋಗಲಾಗಿತ್ತು. ಕರ್ನಾಟಕ ಉಚ್ಚನ್ಯಾಲಯವು 21.3.2024ರಂದು ಮಧ್ಯಂತರ ತೀರ್ಪು ನೀಡಿದ್ದು, ಅದರಂತೆ ವಾಲ್ಮೀಕಿ ನಾಯಕ ಉಪ ಪಂಗಡಗಳಾದ ನಾಯಕ ಪರಿವಾರ ಮತ್ತು ನಾಯಕ ತಳವಾರ ಹೊರತುಪಡಿಸಿ ಬೇರೆ ಜಾತಿಗಳಲ್ಲಿ ಬರುವ ಪರಿವಾರ ಮತ್ತು ತಳವಾರ ಜಾತಿಗಳಿಗೆ ಪರಿಶಿಷ್ಟ ವರ್ಗ ಪ್ರಮಾಣ ಪತ್ರ ನೀಡಿರುವುದನ್ನು ಹಿಂಪಡಿಯಬೇಕು. ಯಾವುದೇ ಕಾರಣಕ್ಕೂ ಮುಂದೆ ಅಂತಹ ಪತ್ರಗಳ ವಿತರಣೆ ಆಗದಂತೆ ಎಚ್ಚರವಹಿಸಬೇಕು ಎಂದು ಮನವಿ ಮಾಡಿದರು.

ನ್ಯಾಯಾಲಯದ ಆದೇಶದಂತೆ ಕೂಡಲೇ ಕ್ರಮ ತೆಗೆದುಕೊಂಡು ವಾಮ ಮಾರ್ಗದಿಂದ ನೈಜ ಪರಿಶಿಷ್ಟ ವರ್ಗಕ್ಕೆ ಸೇರಿಲ್ಲದವರು ಈಗಾಗಲೇ ತೆಗೆದುಕೊಂಡಿರುವ ಕೊಟ್ಟಿ ಜಾತಿ ಪತ್ರಗಳನ್ನು ಕೂಡಲೇ ವಜಾ ಮಾಡಬೇಕು. ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಇತರೆ ಹಿಂದುಳಿದ ವರ್ಗ (ನೇಮಕಾತಿಗಳಲ್ಲಿ ಇತರೆ ಮೀಸಲಾತಿ) ಅಧಿನಿಯಮ, 1990 ಮತ್ತು ಅದರಡಿ ಬರುವ ನಿಯಮಗಳಡಿ ಕ್ರಮ ತೆಗೆದುಕೊಂಡು ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ರಾಮಣ್ಣ ಕಲ್ಲನವರ, ಕಾಂಗ್ರೆಸ್ ಎಸ್.ಟಿ. ಘಟಕದ ತಾಲೂಕು ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಶಿವಮೂರ್ತಿ ಗುತ್ತೂರ, ರಾಮಣ್ಣ ಬೆಳವಿನಾಳ, ರಮೇಶ ಚೌಡಕಿ, ಬಸವರಾಜ, ಚನ್ನಪ್ಪ, ಹನುಮಂತಪ್ಪ, ಈರಪ್ಪ ನಾಯಕ, ಉಮೇಶ ನಾಯಕ ಫಕೀರಪ್ಪ ನಾಯಕ, ಕೆಂಚಪ್ಪ ತಳವಾರ ಬೆಟಗೇರಿ, ಮಹೇಶ ನಾಯಕ, ಪಂಪಣ್ಣ ಇತರರು ಇದ್ದರು.