ದರ್ಶನ್, ಪವಿತ್ರಗೌಡರಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹ

| Published : Jun 14 2024, 01:11 AM IST / Updated: Jun 14 2024, 08:35 AM IST

ಸಾರಾಂಶ

ರೇಣುಕಾ ಸ್ವಾಮಿ ತಪ್ಪು ಮಾಡಿದ್ದರೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವ ಅವಕಾಶ ಇತ್ತು, ಆದರೆ, ಅದನ್ನು ಬಿಟ್ಟು ಆತನನ್ನು ಅಮಾನುಷವಾಗಿ ಹತ್ಯೆ ಮಾಡಿರುವುದು ಅಕ್ಷಮ್ಯ ಅಪರಾಧ. ಪ್ರಕರಣದಲ್ಲಿ ಬಂಧಿತರಾಗಿರುವ ಎಲ್ಲಾ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

 ಮಂಡ್ಯ :  ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಚಿತ್ರನಟ ದರ್ಶನ್, ಪವಿತ್ರ ಗೌಡ ಹಾಗೂ ಸಹಚರರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ (ರೈತ ಬಣ) ಕಾರ್ಯಕರ್ತರು ಮಂಡ್ಯದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮುಖ್ಯಮಂತ್ರಿಗೆ ಮನವಿ ಪತ್ರ ರವಾನಿಸಿದರು.

ಚಲನಚಿತ್ರ ಮಾಧ್ಯಮವು ಸಮಾಜದಲ್ಲಿ ಬದಲಾವಣೆ ತರಬಹುದಾದ ಪ್ರಬಲ ದೃಶ್ಯ ಮಾಧ್ಯಮವಾಗಿದೆ, ಬಂಗಾರದ ಮನುಷ್ಯ ಚಿತ್ರದಿಂದ ಸ್ಫೂರ್ತಿ ಪಡೆದು ಜೀವನದಲ್ಲಿ ಬದಲಾವಣೆಗೊಂಡವರನ್ನು ನೋಡಿದ್ದೇವೆ. ಆದರೆ ಚಲನಚಿತ್ರದಲ್ಲಿ ಆದರ್ಶ ನಾಯಕನಂತೆ ನಟಿಸಿ ನಿಜ ಜೀವನದಲ್ಲಿ ಖಳನಾಯಕನಂತೆ ವರ್ತಿಸಿ ಅಮಾಯಕ ಯುವಕ ರೇಣುಕಾ ಸ್ವಾಮಿಯನ್ನು ಹತ್ಯೆಮಾಡಿರುವ ಚಿತ್ರನಟ ದರ್ಶನ್ ಕನ್ನಡ ಚಲನಚಿತ್ರರಂಗಕ್ಕೆ ಕಳಂಕ ತಂದಿದ್ದಾರೆ ಎಂದು ಆರೋಪಿಸಿದರು.

ರೇಣುಕಾ ಸ್ವಾಮಿ ತಪ್ಪು ಮಾಡಿದ್ದರೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವ ಅವಕಾಶ ಇತ್ತು, ಆದರೆ, ಅದನ್ನು ಬಿಟ್ಟು ಆತನನ್ನು ಅಮಾನುಷವಾಗಿ ಹತ್ಯೆ ಮಾಡಿರುವುದು ಅಕ್ಷಮ್ಯ ಅಪರಾಧ. ಪ್ರಕರಣದಲ್ಲಿ ಬಂಧಿತರಾಗಿರುವ ಎಲ್ಲಾ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

ಪ್ರಕರಣದಲ್ಲಿ ಪ್ರಭಾವಿಗಳು ಭಾಗಿಯಾಗಿರುವುದರಿಂದ ಪ್ರಕರಣ ಮುಚ್ಚಿ ಹಾಕುವ ಸಂಶಯವಿದೆ. ಹಾಗಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು, ಈಗಾಗಲೇ ತನಿಖೆ ಕೈಗೊಂಡಿರುವ ಪೊಲೀಸರು ಯಾವುದೇ ಪ್ರಭಾವಕ್ಕೆ ಒಳಗಾಗದೆ ನ್ಯಾಯ ಸಮ್ಮತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಚಿತ್ರನಟ ದರ್ಶನ್ ಅಪರಾಧ ಹಿನ್ನೆಲೆಯುಳ್ಳವರಾಗಿದ್ದು, ಇವರ ಮೇಲೆ ಹಲವು ಪ್ರಕರಣ ಇರುವುದರಿಂದ ಇವರನ್ನು ರೌಡಿಶೀಟರ್ ಪಟ್ಟಿಗೆ ಸೇರಿಸಬೇಕು, ಚಲನಚಿತ್ರ ವಾಣಿಜ್ಯ ಮಂಡಳಿ ಚಿತ್ರರಂಗದಿಂದ ದರ್ಶನ್ ಅವರನ್ನು ಬ್ಯಾನ್ ಮಾಡಬೇಕು. ಅವರು ಅಭಿನಯಿಸಿರುವ ಚಲನಚಿತ್ರಗಳನ್ನು ಬಹಿಷ್ಕರಿಸಬೇಕು, ಚುನಾವಣೆಗಳಲ್ಲಿ ಇವರನ್ನು ಯಾರೂ ಮುಂದೆ ಪ್ರಚಾರಕ್ಕೆ ಕರೆಯಬಾರದು, ಹಾಗೊಮ್ಮೆ ಪ್ರಚಾರ ಮಾಡಿದರೆ ಅಂತಹ ಅಭ್ಯರ್ಥಿಗೆ ಜನರು ಮತ ನೀಡಬಾರದು ಎಂದು ಒತ್ತಾಯಿಸಿದರು.

ರೈತ ಸಂಘದ ಇಂಗಲಗುಪ್ಪೆ ಕೃಷ್ಣೇಗೌಡ, ಹೆಮ್ಮಿಗೆ ಚಂದ್ರಶೇಖರ್ ಸೇರಿ ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.