ಘಟನೆ ಬಗ್ಗೆ ನಿರ್ಲಕ್ಷ್ಯ ತಾಳಿದರೆ ಗಣಪತಿ ವಿಸರ್ಜನೆಯನ್ನೇ ಮಾಡುವುದಿಲ್ಲ ಎಂದು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಘಟನೆಯಿಂದ ಆಟೋ ಚಾಲಕರು ಬೇಸರ ಮಾಡಿಕೊಂಡಿದ್ದು, ಕಲ್ಲೆಸೆದಿರುವುದು ಧಾರ್ಮಿಕ ಭಾವನೆಗೆ ಧಕ್ಕೆ ಆಗಿದೆ.

ಭಟ್ಕಳ: ಭಟ್ಕಳ ರಿಕ್ಷಾ ಚಾಲಕರು ಮಾಲೀಕರ ಗಣೇಶೋತ್ಸವದ ಪೆಂಡಾಲ್ ಮೇಲೆ ಯಾರೋ ಕಿಡಿಗೇಡಿಗಳು ಕಲ್ಲೆಸೆದಿದ್ದು, ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದು ಆಟೋ ರಿಕ್ಷಾ ಚಾಲಕರ ಮಾಲೀಕರ ಸಂಘದ ಅಧ್ಯಕ್ಷ ವೆಂಕಟೇಶ ನಾಯ್ಕ ಆಗ್ರಹಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಗಣೇಶನ ಮೂರ್ತಿ ಮಂಟಪದ ಚಾವಣಿ ಶೀಟಿಗೆ ಕಲ್ಲೆಸೆದಿದ್ದರೂ ಕೆಲವರು ಬಾಲ್ ಎಸೆದಿದ್ದಾರೆಂದು ಹೇಳುತ್ತಿದ್ದಾರೆ ಎಂಬ ಸುದ್ದಿ ಹರಡಿದೆ. ಎಸೆದಿರುವುದು ಕಲ್ಲನ್ನೇ ಹೊರತು ಬಾಲ್ ಅಲ್ಲ ಎಂದು ಸ್ಪಷ್ಟಪಡಿಸಿದ ಅವರು, ಶುಕ್ರವಾರ ಬೆಳಗ್ಗೆ ಅಡುಗೆ ಭಟ್ಟರು, ಆಟೋ ಚಾಲಕರು ಮತ್ತು ಸಮಿತಿಯ ಪದಾಧಿಕಾರಿಗಳು ಗಣೇಶೋತ್ಸವದ ಬಳಿ ಕೆಲಸದಲ್ಲಿರುವಾಗಲೇ ಮಂಟಪದ ಶೀಟ್ ಮೇಲೆ ಮೂರ್ನಾಲ್ಕು ಕಲ್ಲು ಬಂದು ಬಿದ್ದಿದೆ.

ಶಬ್ದವಾಗಿರುವುದನ್ನು ಇವರೆಲ್ಲರೂ ಕೇಳಿದ್ದಾರೆ. ಎಸೆದ ಕಲ್ಲು ಬಾಲ್ ಆಗುವುದು ಹೇಗೆ ಎಂದು ಪ್ರಶ್ನಿಸಿದ ಅವರು ಯಾರೇ ಇರಲಿ, ಸತ್ಯವನ್ನು ಮರೆಮಾಚಬಾರದು. ಆರೋಪಿಗಳು ಯಾರೇ ಇರಲಿ, ಅವರನ್ನು ಪತ್ತೆ ಹಚ್ಚಿ ಬಂಧಿಸುವ ಕೆಲಸ ಮಾಡಬೇಕು. ಪೊಲೀಸ್ ಅಧಿಕಾರಿಗಳಿಗೂ ನಾವು ಇದನ್ನೇ ಹೇಳಿದ್ದೇವೆ ಎಂದರು.

ಘಟನೆ ಬಗ್ಗೆ ನಿರ್ಲಕ್ಷ್ಯ ತಾಳಿದರೆ ಗಣಪತಿ ವಿಸರ್ಜನೆಯನ್ನೇ ಮಾಡುವುದಿಲ್ಲ ಎಂದು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಘಟನೆಯಿಂದ ಆಟೋ ಚಾಲಕರು ಬೇಸರ ಮಾಡಿಕೊಂಡಿದ್ದು, ಕಲ್ಲೆಸೆದಿರುವುದು ಧಾರ್ಮಿಕ ಭಾವನೆಗೆ ಧಕ್ಕೆ ಆಗಿದೆ. ರಿಕ್ಷಾ ಚಾಲಕರು, ಮಾಲೀಕರು ಕಳೆದ 43 ವರ್ಷಗಳಿಂದ ಶಾಂತಿಯುತವಾಗಿ ಗಣೇಶೋತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದೇವೆ. ಆದರೆ ಕಿಡಿಗೇಡಿಗಳು ಕಲ್ಲೆಸೆತದಿಂದ ಭಾವನೆಗೆ ಧಕ್ಕೆಯಾಗಿದೆ. ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಮಂಜುನಾಥ ನಾಯ್ಕ, ಗಣಪತಿ ನಾಯ್ಕ, ಮಾಸ್ತಪ್ಪ ನಾಯ್ಕ, ಮಾದೇವ ನಾಯ್ಕ, ಮಂಜುನಾಥ ನಾಯ್ಕ, ಹಿಂದೂಪರ ಸಂಘಟನೆಯ ರಾಮಕೃಷ್ಣ ನಾಯ್ಕ, ಜಯಂತ ನಾಯ್ಕ, ಮೋಹನ ಶಿರಾಲಿಕರ್ ಮುಂತಾದವರು ಇದ್ದರು.