ಸಾರಾಂಶ
ಕನ್ನಡಪ್ರಭ ವಾರ್ತೆ ಚಿಂಚೋಳಿ
ಪಟ್ಟಣದ ಹೊರವಲಯದಲ್ಲಿ ಪ್ರಾರಂಭಿಸಿರುವ ಸಿದ್ದಸಿರಿ ಇಥೆನಾಲ್ ಮತ್ತು ಪವರ್ ಘಟಕದಿಂದ ತಾಲೂಕಿನ ರೈತರ ಕಬ್ಬನ್ನು ಖರೀದಿಸಬೇಕು. ದಲ್ಲಾಳಿ ಜನರ ಹಾವಳಿ ತಪ್ಪಿಸಬೇಕೆಂದು ಆಗ್ರಹಿಸಿ ಪಟ್ಟಣದ ತಹಸೀಲ್ದಾರ್ ಕಚೇರಿ ಮುಂದೆ ತಾಲೂಕು ರೈತಪರ ಹಿತರಕ್ಷಣಾ ಸಮಿತಿ ಹಾಗೂ ತಾಲೂಕಿನ ಸಾಮೂಹಿಕ ಸಂಘಟನೆಗಳ ಒಕ್ಕೂಟಗಳ ಮುಖಂಡರು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ರೈತ ಮುಖಂಡ ಬಸವರಾಜ ಮಲಿ ಪ್ರತಿಭಟನೆಯಲ್ಲಿ ಮಾತನಾಡಿ, ಚಿಂಚೋಳಿ ಮತ್ತು ಕಾಳಗಿ ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ರೈತರು ಸಿದ್ದಸಿರಿ ಕಂಪನಿಯ ಮೇಲೆ ನಂಬಿಕೆ ಇಟ್ಟು ಹೆಚ್ಚು ಕಬ್ಬು ಬೆಳೆದಿದ್ದಾರೆ. ಆದರೆ ಕಂಪನಿಯವರು ನಮ್ಮ ತಾಲೂಕಿನ ಕಬ್ಬನ್ನು ಖರೀದಿಸದೇ ಬೇರೆ ಬೇರೆ ಕಡೆಯಿಂದ ಕಬ್ಬನ್ನು ತರಿಸಿಕೊಂಡು ನಮ್ಮ ತಾಲೂಕಿನ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಕಬ್ಬು ಖರೀದಿಸುವಲ್ಲಿ ದಲ್ಲಾಳಿ ವ್ಯಾಪಾರಿಗಳ ಹಾವಳಿ ಹೆಚ್ಚಾಗಿದೆ. ಮಹಾರಾಷ್ಟ್ರದ ನಾಂದೇಡ, ಲಾತೂರ, ಉದಗಿರ ಮುಂತಾದ ನಗರ ಪ್ರದೇಶಗಳಿಂದ ಕಬ್ಬು ಖರೀದಿಸಿ ನಮ್ಮ ತಾಲೂಕಿನ ರೈತರನ್ನು ಕಡೆಗಣಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಧುಸೂಧನರೆಡ್ಡಿ ಪಾಟೀಲ ಕಲ್ಲೂರ ಮಾತನಾಡಿ, ಸಿದ್ದಸಿರಿ ಇಥೆನಾಲ್ ಮತ್ತು ಪವರ್ ಘಟಕ ಪ್ರಾರಂಭಿಸಿದ ಬಗ್ಗೆ ನಮಗೆ ಹೆಮ್ಮೆ ಇದೆ. ಆದರೆ ನಮ್ಮ ತಾಲೂಕಿನ ರೈತರ ಕಬ್ಬು ಖರೀದಿಸದೇ ಇರುವುರಿಂದ ಅನ್ಯಾಯವಾಗುತ್ತಿದೆ. ಅನೇಕ ಗ್ರಾಮಗಳಲ್ಲಿ ಕಬ್ಬು ಕಟಾವಿಗೆ ಬಂದಿದೆ. ಆದರೆ ಕಬ್ಬು ಒಣಗಿ ಹೋಗುತ್ತಿರುವುದರಿಂದ ರೈತರು ಆತಂಕದಲ್ಲಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ಲಕ್ಷ್ಮಣ ಆವಂಟಿ, ಪುರಸಭೆ ಸದಸ್ಯ ಅಬ್ದುಲ್ ಬಾಸೀತ, ಸಂತೋಷ ಗುತ್ತೆದಾರ, ರಾಮಶೆಟ್ಟಿ ಪವಾರ, ಸುರೇಶ ಬಂಟಾ, ವೀರಶೆಟ್ಟಿ ಪಾಟೀಲ ಅಣವಾರ, ಮೇಘರಾಜ ರಾಠೋಡ, ಸೂರ್ಯಕಾಂತ ಹುಲಿ, ನರಸಿಂಹಲು ಸವಾರ, ನರಸಿಂಹಲು ಕುಂಬಾರ ಮಾತನಾಡಿದರು. ಈ ವೇಳೆ ಅನವರ ಖತೀಬ, ಧೂಳಪ್ಪ ಬೀರನಳ್ಳಿ, ಜರ್ನಾಧನ ಕಾಕೇರ, ಶಿವರಾಜ ಪಾಟೀಲ, ನರಸಪ್ಪ ಕಿವಣೋರ, ನಾಗೇಶ ಗುಣಾಜಿ, ಡಾ. ತುಕಾರಾಮ, ವೀರಶೆಟ್ಟಿ ಐನಾಪೂರ, ಶಿವಾನಂದ ಮಾಲಿಪಾಟೀಲ, ಮತೀನ ಸೌದಾಗರ, ಮಲ್ಲಪ್ಪ ಹಳೀಮನಿ ಸೇರಿದಂತೆ ತಾಲೂಕಿನ ಹಲವು ಗ್ರಾಮಗಳ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.