ಕೊಪ್ಪಳ: ಬಸವಕಲ್ಯಾಣದಲ್ಲಿ ಕನ್ಹೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು ಹಾಗೂ ಅವರಿಗೆ ಬಸವಕಲ್ಯಾಣ ಪ್ರವೇಶ ನಿಷೇಧಿಸಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾ ಆಗ್ರಹಿಸಿದೆ.

ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಹಾಗೂ ಗೃಹಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ.

ಕನ್ಹೇರಿ ಮಠದ ಕಾಡಸಿದ್ದೇಶ್ವರ ಸ್ವಾಮಿ ಬಸವ ಸಂಸ್ಕೃತಿ ಅಭಿಯಾನ ಮತ್ತು ಲಿಂಗಾಯತ ಮಠಾಧಿಪತಿಗಳಿಗೆ ಅಶ್ಲೀಲ, ಅವಾಚ್ಯ, ಅಸಂವಿಧಾನಿಕ ಭಾಷೆ ಬಳಸಿ ಅಪಮಾನ ಮಾಡಿದ್ದಾರೆ. ಅವರಿಗೆ ಕೋರ್ಟ್‌ ಛೀಮಾರಿ ಹಾಕಿದೆ. ಅವರು ಬಸವತತ್ವ ತಿರುಚುವ ಹಾಗೂ ಲಿಂಗಾಯತ ಧರ್ಮ ಕಲುಷಿತಗೊಳಿಸುವ ಕೆಲಸವನ್ನು ನಿರಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಲಿಂಗಾಯತ ಧರ್ಮೀಯರ ಪವಿತ್ರ ಧರ್ಮಕ್ಷೇತ್ರ ಬೀದರ ಜಿಲ್ಲೆಯ ಬಸವ ಕಲ್ಯಾಣದಲ್ಲಿ ಬಸವಾದಿ ಶರಣರ ಹಿಂದೂ ಸಮಾವೇಶದ ಹೆಸರಿನಲ್ಲಿ ಸಮಾವೇಶ ಆಯೋಜಿಸಲಾಗಿದೆ. ಬಸವತತ್ವ ಹಿಯಾಳಿಸುವುದೇ ಈ ಸಮಾವೇಶದ ಉದ್ದೇಶವಾಗಿದೆ. ಆದ್ದರಿಂದ ಬಸವಕಲ್ಯಾಣದ ಪವಿತ್ರವಾದ ಭೂಮಿಯಲ್ಲಿ ಲಿಂಗಾಯತ ಮತ್ತು ಬಸವ ದ್ರೋಹಿ ಕನ್ಹೇರಿ ಸ್ವಾಮಿ ಅವರ ಕಾರ್ಯಕ್ರಮ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಜಾಗತಿಕ ಲಿಂಗಾಯತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಬಸವರಾಜ ಬಳ್ಳೊಳ್ಳಿ, ಜಿಲ್ಲಾ ಅಧ್ಯಕ್ಷ ಹನುಮೇಶ ಕಲ್ಮಂಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಶ ಸಸಿಮಠ, ತಾಲೂಕು ಕಾರ್ಯದರ್ಶಿ ಶರಣಬಸವನಗೌಡ ಪಾಟೀಲ್, ಯುವ ಘಟಕದ ಅಧ್ಯಕ್ಷ ಶೇಖರ ಇಂಗಳದಾಳ, ವಿಶ್ವಗುರು ಬಸವೇಶ್ವರ ಟ್ರಸ್ಟಿನ ಅಧ್ಯಕ್ಷ ವೀರಭದ್ರಪ್ಪ ನಂದ್ಯಾಳ, ಕಾರ್ಯದರ್ಶಿ ಬಾಪುಗೌಡ ಪಾಟೀಲ್, ಪ್ರಮುಖರಾದ ಜಿ. ದೇವೀಶಪ್ಪ, ಶಿವಪುತ್ರಪ್ಪ ಲಕ್ಕುಂಡಿ, ಮುಖಂಡರಾದ ಗಾಳೆಪ್ಪ ಕಡೆಮನಿ, ಎಮ್.ಎಸ್. ಬೀರಲದಿನ್ನಿ, ಗುಡದಪ್ಪ ಹಡಪದ, ಶಿವಸಂಗಪ್ಪ ವಣಗೇರಿ, ರಾಷ್ಟ್ರೀಯ ಬಸವದಳದ ಅಧ್ಯಕ್ಷ ಮಂಜುನಾಥ ಹಿರೇಮಠ, ಮಹಿಳಾ ಮುಖ್ಯಸ್ಥೆ ಶರಣಮ್ಮ ಕಲ್ಮಂಗಿ ಇತರರಿದ್ದರು.