ಮುಂಡರಗಿ ತಾಲೂಕಿನ ಕಕ್ಕೂರ ಏತ ನೀರಾವರಿ ಯೋಜನೆಯಡಿ ಈಗಾಗಲೇ ಶೇ. 75ರಷ್ಟು ಕಾಮಗಾರಿ ಮುಗಿದಿದ್ದು, ಕಾಲುವೆ ನಿರ್ಮಾಣ ಮಾಡಿ ನೀರಾವರಿ ಪ್ರಾರಂಭಿಸಬೇಕು ಎಂದು ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್. ಗೌಡರ ಒತ್ತಾಯಿಸಿದ್ದಾರೆ.

ಮುಂಡರಗಿ: ತಾಲೂಕಿನ ಕಕ್ಕೂರ ಏತ ನೀರಾವರಿ ಯೋಜನೆಯಡಿ ಈಗಾಗಲೇ ಶೇ. 75ರಷ್ಟು ಕಾಮಗಾರಿ ಮುಗಿದಿದ್ದು, ಕಾಲುವೆ ನಿರ್ಮಾಣ ಮಾಡಿ ನೀರಾವರಿ ಪ್ರಾರಂಭಿಸಬೇಕು ಎಂದು ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್. ಗೌಡರ ಒತ್ತಾಯಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಮುಂಡರಗಿ ಮತಕ್ಷೇತ್ರ ರದ್ದಾದ ನಂತರ ತಾಲೂಕು ಎರಡು ಕ್ಷೇತ್ರಕ್ಕೆ ಹಂಚಿಕೆಯಾಗಿ ಅಭಿವೃದ್ಧಿ ಮರೀಚಿಕೆಯಾಗಿದೆ. ರೈತರಿಗೆ ಬಳಕೆಯಾಗಬೇಕಿರುವ ಯೋಜನೆಗಳು ಜನಪ್ರತಿನಿಧಿಗಳ, ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಬಳಕೆಯಾಗದ ಸ್ಥಿತಿ ನಿರ್ಮಾಣವಾಗಿದೆ.ತಾಲೂಕಿನ ಕಕ್ಕೂರ, ಕಕ್ಕೂರ ತಾಂಡಾ, ನಾಗರಹಳ್ಳಿ, ಹೆಸರೂರ, ರಾಮೇನಹಳ್ಳಿ ಭಾಗದ ಜಮೀನುಗಳಿಗೆ ನೀರಾವರಿ ಕಲ್ಪಿಸಬೇಕು ಎನ್ನುವ ಉದ್ದೇಶದಿಂದ ಕಕ್ಕೂರ ಏತ ನೀರಾವರಿ ಯೋಜನೆಯು ದಿ. ಡಿ. ದೇವರಾಜ್ ಅರಸರು ಮುಖ್ಯಮಂತ್ರಿಯಾಗಿದ್ದಾಗ 1972ರಲ್ಲಿ ಪ್ರಾರಂಭಗೊಂಡಿತು. ಅಂದು ರೈತರ ಬಾಳಿಗೆ ಹಸಿರು ಕ್ರಾಂತಿಯನ್ನುಂಟು ಮಾಡಿದ್ದ ಈ ಯೋಜನೆ ನಂತರದ ವರ್ಷಗಳಲ್ಲಿ ಯಂತ್ರಗಳ ರಿಪೇರಿಯಿಂದ ಸ್ಥಗಿತಗೊಂಡಿತ್ತು.ಆಗ ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ರೈತರ ಸಹಯೋಗದೊಂದಿಗೆ ಹೋರಾಟ ಮಾಡಿ ಯೋಜನೆಯ ಮಹತ್ವವನ್ನು ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಮನವರಿಕೆ ಮಾಡಲು ಯಶಸ್ವಿಯಾದುದರ ಫಲವಾಗಿ ಯೋಜನೆಯ ಶಿಥಿಲಗೊಂಡ ಕಟ್ಟಡ ಹಾಗೂ ನೂತನ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ. ಈ ದುರಸ್ತಿ ಕಾರ್ಯಕ್ಕೆ ₹9 ಕೋಟಿಗೂ ಹೆಚ್ಚು ಹಣವನ್ನು ಖರ್ಚು ಮಾಡಲಾಗಿದ್ದು, ಈಗ ಸಂಪೂರ್ಣವಾಗಿ ನೀರು ಹರಿಸಲು ಸಿದ್ಧವಾಗಿದ್ದು, ಕಾಲುವೆ ಸಂಪೂರ್ಣವಾಗಿ ಮುಚ್ಚಿ ಹೋಗಿದ್ದರಿಂದಾಗಿ ನೀರು ಹರಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.ಈಗಾಗಲೇ 210 ಎಚ್‌ಪಿಯ 3 ಸಬ್‌ಮರ್ಷಿಬಲ್ ಪಂಪ್‌ಗಳನ್ನು ಕೂಡಿಸಿದ್ದಾರೆ. ವಿದ್ಯುತ್ ಸಂಪರ್ಕ, 2 ಕಿಮೀ ಪೈಪ್‌ಲೈನ್ ಕೂಡಾ ಅಳವಡಿಸಲಾಗಿದೆ. ಈ ಕಾಲುವೆ ನಿರ್ಮಾಣವಾದಲ್ಲಿ ಅಂದಾಜು 6 ಸಾವಿರ ಎಕರೆಗೂ ಹೆಚ್ಚು ನೀರಾವರಿ ಸೌಲಭ್ಯ ಕಲ್ಪಿಸಿದಂತಾಗುತ್ತದೆ ಎಂದಿದ್ದಾರೆ.