ಗದಗ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡುವಂತೆ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ರೈತರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಮುಂದಿನ ದಿನಮಾನದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ಹಾಗೂ ಧರಣಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಗದಗ: ಗದಗ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡುವಂತೆ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಗದಗ ಗ್ರಾಮೀಣ ಮಂಡಲ ಅಧ್ಯಕ್ಷ ಬೂದಪ್ಪ ಹಳ್ಳಿ ಮಾತನಾಡಿ, ಗದಗ ತಾಲೂಕಾದ್ಯಂತ ಮಳೆ ಆಗದಿರುವ ಕಾರಣ ತಾಲೂಕಿನಲ್ಲಿ ಮುಂಗಾರು ಬೆಳೆಗಳಾದ ಹೆಸರು, ಗೋವಿನಜೋಳ, ಹತ್ತಿ, ಈರುಳ್ಳಿ, ಸೋಯಾಬಿನ್, ಉದ್ದು, ಶೇಂಗಾ ಬೆಳೆಗಳು ನಾಶವಾಗಿ, ರೈತನಿಗೆ ತುಂಬಾ ನಷ್ಟವಾಗಿದೆ. ಗದಗ ತಾಲೂಕನ್ನು ಬರಗಾಲ ಪ್ರದೇಶ ಎಂದು ಕೂಡಲೇ ಘೋಷಣೆ ಮಾಡಬೇಕು. ರೈತನಿಗೆ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ತೋಟಪ್ಪ (ರಾಜು) ಕುರುಡಗಿ ಮಾತನಾಡಿ, ರೈತರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಮುಂದಿನ ದಿನಮಾನದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ಹಾಗೂ ಧರಣಿ ಮಾಡುತ್ತೇವೆ ಎಂದರು.

ಡಿ.ವೈ. ಹುನಗುಂದ, ವೈ.ಪಿ. ಅಡ್ನೂರ, ಮಹೇಶ ಶಿರಹಟ್ಟಿ, ಅಶೋಕ ಬ್ಯಾಹಟ್ಟಿ, ಸುರೇಶ ಮರಳಪ್ಪನವರ, ನಿಂಗಪ್ಪ ಹುಗ್ಗಿ, ಶೇಖಣ್ಣ ಕನ್ಯಾಳ, ಸಿದ್ದು ಪಲ್ಲೇದ, ಅಶೋಕ ಕರೂರ, ರವಿಕಾಂತ ಅಂಗಡಿ, ಡಿ.ಬಿ. ಕರೀಗೌಡ್ರ, ಅರವಿಂದ ಹುಲ್ಲೂರ, ನಾಗರಾಜ ಕುಲಕರ್ಣಿ, ನಾಗರಾಜ ಮದ್ನೂರ, ದಾವಲಸಾಬ ಅಣ್ಣಿಗೇರಿ, ರವಿ ವಗ್ಗನವರ, ಸೋಮರೆಡ್ಡಿ ನಡೂರ, ಸಿದ್ದಪ್ಪ ಜೊಂಡಿ, ವೆಂಕಟೇಶ ಸೂರಣಗಿ, ಮಹಾಂತೇಶ ಬಾತಾಖಾನಿ, ನಿಂಗಯ್ಯ ಇಟಗಿಮಠ, ಸಿದ್ದಪ್ಪ ಈರಗಾರ, ಫಕ್ಕಿರೇಶ ಗುಗ್ಗರಿ, ಮಂಜುನಾಥ ಮರಿಯಪ್ಪಗೌಡ್ರ, ನೀಲಪ್ಪ ಮಹಾಲಿಂಗಪುರ, ಶಂಕರ ಕರಿಬಿಷ್ಟಿ, ಈರಪ್ಪ ಹಡಪದ, ಮಲ್ಲಾರೆಪ್ಪ ಬೆಂತೂರ, ಅಪ್ಪು ನಮಸ್ತೆಮಠ, ಬಸವರಾಜ ಅಕ್ಕಿ, ವಿರೂಪಾಕ್ಷ ಹಾದಿಮನಿ, ಅಲ್ಲಾಸಾಬ ಪಿರಕಾನವರ, ಮಂಜುನಾಥ, ವಿನೋದ ಹಂಸನೂರ ಇದ್ದರು.

ಶಿರಹಟ್ಟಿ ತಾಲೂಕು ಬರಪೀಡಿತ ಎಂದು ಘೋಷಿಸಲು ಆಗ್ರಹ:ಶಿರಹಟ್ಟಿ ತಾಲೂಕಿನಲ್ಲಿ ಮಳೆ ಕೊರತೆಯಿಂದ ಕೃಷಿ ಚಟುವಟಿಕೆ ಕುಂಠಿತವಾಗಿದೆ. ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಬರಪೀಡಿತ ತಾಲೂಕು ಎಂದು ಘೋಷಿಸಿ, ರೈತರಿಗೆ ಅಗತ್ಯ ಪರಿಹಾರ ಹಾಗೂ ನೆರವು ಒದಗಿಸಬೇಕು ಎಂದು ಜೆಡಿಎಸ್ ವತಿಯಿಂದ ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಈ ವೇಳೆ ಪಕ್ಷದ ತಾಲೂಕು ಘಟಕದ ಅಧ್ಯಕ್ಷ ಶರಣಪ್ಪ ಹೂಗಾರ ಮಾತನಾಡಿ, ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಸಮರ್ಪಕ ಮಳೆಯಾಗದೆ ಬಿತ್ತನೆ ಮಾಡಿದ ಬೆಳೆಗಳು ಒಣಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ಕೊರತೆಯಿಂದ ಜಮೀನುಗಳಲ್ಲಿ ತೇವಾಂಶದ ಕೊರತೆ ಉಂಟಾಗಿದ್ದು, ರೈತರು ಬೆಳೆ ಉಳಿಸಿಕೊಳ್ಳಲು ಪರದಾಡುವಂತಾಗಿದೆ. ಮತ್ತೊಂದೆಡೆ ಬಿತ್ತನೆ ಬೀಜ, ರಸಗೊಬ್ಬರ, ಕೃಷಿ ಚಟುವಟಿಕೆಗೆ ಮಾಡಿದ ಖರ್ಚು ರೈತರ ಮೇಲೆ ಆರ್ಥಿಕ ಹೊರೆಯಾಗಿದೆ ಎಂದು ಹೇಳಿದರು.

ಸರ್ಕಾರ ಕೂಡಲೇ ತಾಲೂಕಿನಲ್ಲಿ ಬೆಳೆ ಹಾನಿ ಸಮೀಕ್ಷೆ ನಡೆಸಿ, ಬರ ಪರಿಸ್ಥಿತಿಯನ್ನು ವೈಜ್ಞಾನಿಕವಾಗಿ ಪರಿಶೀಲಿಸಿ ಶಿರಹಟ್ಟಿ ತಾಲೂಕನ್ನು ಬರಪೀಡಿತ ಎಂದು ಘೋಷಿಸಬೇಕು. ವಿವಿಧ ಪರಿಹಾರ ಕ್ರಮಗಳನ್ನು ತ್ವರಿತವಾಗಿ ಜಾರಿಗೊಳಿಸಬೇಕು. ಬೆಳೆ ಹಾನಿಗೊಳಗಾದ ರೈತರಿಗೆ ಎಕರೆಗೆ ಕನಿಷ್ಠ ₹೫೦ ಸಾವಿರ ಪರಿಹಾರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.ಈಗಾಗಲೇ ಸರ್ಕಾರ ಘೋಷಣೆ ಮಾಡಿರುವ ಬರಪೀಡಿತ ತಾಲೂಕು ಪಟ್ಟಿಯಲ್ಲಿ ಶಿರಹಟ್ಟಿ ಸೇರಿಸದೇ ಇರುವುದರಿಂದ ರೈತರಿಗೆ ಅನ್ಯಾಯವಾಗಿದೆ. ಒಂದು ವಾರದೊಳಗಾಗಿ ಸಮಗ್ರ ಸಮೀಕ್ಷೆ ನಡೆಸಿ, ನಿಖರ ಮಾಹಿತಿ ಪಡೆದು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

ತಹಸೀಲ್ದಾರ್ ಕೆ. ರಾಘವೇಂದ್ರ ರಾವು ಮನವಿ ಸ್ವೀಕರಿಸಿದರು. ಪಕ್ಷದ ಗೌರವಾಧ್ಯಕ್ಷ ಫಕ್ಕೀರಪ್ಪ ತುಳಿ, ಮಹಿಳಾ ಘಟಕದ ಅಧ್ಯಕ್ಷೆ ಲಲಿತಾ ಕಲ್ಲಪ್ಪನವರ, ನಗರ ಘಟಕದ ಅಧ್ಯಕ್ಷ ಮುನ್ನ ಢಾಲಾಯತ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮಾಬೂಸಾಬ ಕನಕವಾಡ, ಸಂಘಟನಾ ಕಾರ್ಯದರ್ಶಿ ಶಿವು ಪಾಟೀಲ್, ಬಸವರಾಜ ಕಲ್ಲಪ್ಪನವರ ಉಪಸ್ಥಿತರಿದ್ದರು.