ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ತ್ರಿವಿಧ ದಾಸೋಹಿ, ನಡೆದಾಡುವ ದೇವರು ಡಾ.ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆ ದಿನವನ್ನು ರಾಜ್ಯ ಸರ್ಕಾರ ದಾಸೋಹ ದಿನವೆಂದು ಅಧಿಕೃತವಾಗಿ ಘೋಷಣೆ ಮಾಡಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ತಾಳಶಾಸನ ಎಸ್.ಆನಂದ್ ಒತ್ತಾಯಿಸಿದರು.ಪಟ್ಟಣದ ಐದು ದೀಪದ ವೃತ್ತದಲ್ಲಿ ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಘಟಕದ ತಾಲೂಕು ಅಧ್ಯಕ್ಷ ಶಿವಕುಮಾರ್ ನೇತೃತ್ವದಲ್ಲಿ ತ್ರಿವಿಧ ದಾಸೋಹಿ ಡಾ.ಶಿವಕುಮಾರಸ್ವಾಮೀಜಿ ಅವರ 6 ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಬಳಿಕ ಅನ್ನದಾಸೋಹ ವಿತರಿಸಿ ಮಾತನಾಡಿದರು.
ಡಾ.ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆಯನ್ನು ಸರಳವಾಗಿ ಆಚರಿಸುತ್ತಿದ್ದೇವೆ. ಕಳೆದ ಸರ್ಕಾರ ಸ್ವಾಮೀಜಿಗಳ ಪುಣ್ಯಸ್ಮರಣೆಯನ್ನು ದಾಸೋಹ ದಿನವೆಂದು ಘೋಷಿಸಿತ್ತು. ಆದರೆ, ಈಗಿನ ಸರ್ಕಾರ ಘೋಷಣೆ ಮಾಡಿಲ್ಲ. ತ್ರಿವಿಧ ದಾಸೋಹ ನಡೆಸಿದ ಅಂತಹ ಮಹಾನ್ ಪುರುಷರ ಪುಣ್ಯಸ್ಮರಣೆಯನ್ನು ರಾಜ್ಯ ಸರ್ಕಾರ ದಾಸೋಹ ದಿನ ಎಂದು ಘೋಷಣೆ ಮಾಡಿದರೆ ಅದು ಸರ್ಕಾರಕ್ಕೆ ಘನತೆ ಹೆಚ್ಚುತ್ತದೆ ಎಂದು ಆಗ್ರಹಿಸಿದರು.ಮುಖಂಡ ಎಸ್.ಎ.ಮಲ್ಲೇಶ್ ಮಾತನಾಡಿ, ಶಿವಕುಮಾರ ಸ್ವಾಮೀಜಿ ಬಸವಣ್ಣನವರ ತತ್ವದಡಿ ಬಾಳಿ ಬದುಕಿದೆ ಮಹಾನ್ ಪುರುಷರು. ಸಿದ್ದಗಂಗಾ ಮಠದಲ್ಲಿ ನಿತ್ಯ ಸಾವಿರಾರು ಮಕ್ಕಳಿಗೆ ದಾಸೋಹ ನಡೆಯುತ್ತಿದೆ. ಶ್ರೀಗಳು ಮಠದಲ್ಲಿ ಹಲವು ವರ್ಷಗಳ ಹಿಂದೆ ಹಚ್ಚಿದಂತಹ ದಾಸೋಹದ ಒಲೆ ಇಂದಿಗೂ ಹಾರಿಲ್ಲ. ನಿರಂತರವಾಗಿ ದಾಸೋಹ ನಡೆಯುತ್ತಿದೆ ಎಂದರು.
ಪೂಜ್ಯರು ಹಣ, ಆಸ್ತಿ ಸಂಪಾದನೆ ಮಾಡಬೇಕು ಎಂಬ ಆಸೆ ಹೊಂದಿದವರಲ್ಲಿ ಮಠಕ್ಕೆ ಬರುವ ಭಕ್ತರು ಹಾಗೂ ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ದಾಸೋಹ ನೀಡುವ ಮೂಲಕ ಅಸಿವು ನೀಗಿಸುವ ಕೆಲಸ ಮಾಡಿದ್ದಾರೆ. ಇಂತಹ ಮಹಾನ್ ವ್ಯಕ್ತಿಗಳು ನಡೆದು ಬಂದ ದಾರಿಯಲ್ಲಿ ಪ್ರತಿಯೊಬ್ಬರು ಸಾಗಬೇಕು ಎಂದರು.ಕಾರ್ಯಕ್ರಮದ ಬಳಿಕ ಡಾ.ಶಿವಕುಮಾರಸ್ವಾಮೀಜಿಗಳ ಪುಣ್ಯಸ್ಮರಣೆ ಅಂಗವಾಗಿ ಅನ್ನಸಂತರ್ಪಣೆ ಮಾಡಲಾಯಿತು. ಸಂಘದ ತಾಲೂಕು ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷರಾದ ಜಯಣ್ಣ, ಮೀನಾಕ್ಷಿ, ಪ್ರಧಾನಕಾರ್ಯದರ್ಶಿ ಹರೀಶ್, ಖಜಾಂಚಿ ಕಲಿಗಣೇಶ್, ವೀರಶೈವ ಮುಖಂಡ ಎಸ್.ಎ.ಮಲ್ಲೇಶ್, ಪುರಸಭೆ ಅಧ್ಯಕ್ಷೆ ಜ್ಯೋತಿಲಕ್ಷ್ಮಿ, ಉಪಾಧ್ಯಕ್ಷ ಅಶೋಕ್, ತಹಸೀಲ್ದಾರ್ ಸಂತೋಷ್ಕುಮಾರ್, ಟಿಎಪಿಸಿಎಂಎಸ್ ನಿರ್ದೇಶಕ ರಾಮಕೃಷ್ಣೇಗೌಡ, ಜಿಲ್ಲಾ ಖಜಾಂಚಿ ಈರಣ್ಣ, ಮುಖಂಡರಾದ ಅಮೃತಿ ರಾಜಶೇಖರ್, ಎಸ್.ಮಂಜುನಾಥ್, ಚಂದ್ರಶೇಖರ್, ದ್ಯಾವಪ್ಪ, ಮಹದೇವಪ್ಪ, ಕೆಎಸ್ಆರ್ಟಿಸಿ ಬಿ.ನಾಗಸುಂದರ್, ದಲಿತ ಮುಖಂಡ ಬೊಮ್ಮರಾಜು, ಬಿ.ಎಸ್.ಜಯರಾಮು, ಬಿಜೆಪಿ ಅಧ್ಯಕ್ಷ ಧನಂಜಯ್, ಪುಟ್ಟಸ್ವಾಮಿ(ಪಾಪಣ್ಣ), ರುದ್ರೇಶ್ ಸೇರಿದಂತೆ ಹಲವರು ಹಾಜರಿದ್ದರು.