ಸಾರಾಂಶ
ಕನ್ನಡಪ್ರಭ ವಾರ್ತೆ ಕಂಪ್ಲಿ
ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿ ಬಿಜೆಪಿ ಮಹಾಶಕ್ತಿ ಕೇಂದ್ರದಿಂದ ತಾಪಂ ಇಒ ಆರ್.ಕೆ. ಶ್ರೀಕುಮಾರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬುಧವಾರ ಮನವಿ ಸಲ್ಲಿಸಲಾಯಿತು.ಬಿಜೆಪಿ ಮಂಡಲ ಅಧ್ಯಕ್ಷ ಸಿ.ಡಿ. ಮಹದೇವ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಒಂದಲ್ಲ ಒಂದು ಹಗರಣಗಳ ಮೂಲಕ ರಾಜ್ಯದ ಜನರಿಗೆ ಅನ್ಯಾಯ ಮಾಡುತ್ತಲೇ ಬಂದಿದೆ. ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣ, ಇದೀಗ ವಸತಿ ಇಲಾಖೆಯಲ್ಲಿಯೂ ಹಗರಣ ಮಾಡುವ ಮೂಲಕ ಕಾಂಗ್ರೆಸ್ ಜನಾಕ್ರೋಶಕ್ಕೆ ಕಾರಣವಾಗಿದೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನಲ್ಲಿ ರಾಜೀವ ಗಾಂಧಿ ವಸತಿ ನಿಗಮದ 200 ಮನೆ ನೀಡಲು ವಸತಿ ಸಚಿವರ ಆಪ್ತ ಕಾರ್ಯದರ್ಶಿ ಹಣ ಪಡೆದಿದ್ದಾರೆ ಎಂದು ಸ್ವಂತ ಆಡಳಿತರೂಢ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ ಆರೋಪಿಸಿದ್ದಾರೆ. ಇದರಂತೆ ರಾಜ್ಯಾದ್ಯಂತ ಹಣ ಪಡೆದೇ ಮನೆ ಮಂಜೂರು ಮಾಡಿದ್ದಾರೆ. ಹಣ ಕೊಡದ ತಾಲೂಕುಗಳ ಮನೆ ರದ್ದು ಮಾಡಿದ್ದಾರೆ. ವಸತಿ ಇಲಾಖೆ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ. ಭ್ರಷ್ಟ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ರಾಜ್ಯದ ಜನರಿಗೆ ದೊರಕಬೇಕಿದ್ದ ಸೌಲಭ್ಯಗಳು ದುರುಪಯೋಗವಾಗುತ್ತಿದೆ ಎಂದು ಆರೋಪಿಸಿದರಲ್ಲದೇ ಕೂಡಲೇ ವಸತಿ ಸಚಿವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭ ಬಿಜೆಪಿ ಮುಖಂಡರಾದ ಅಳ್ಳಳ್ಳಿ ವೀರೇಶ್, ಸುಗುಣ, ಪಿ. ಬ್ರಹ್ಮಯ್ಯ, ಡಿ. ಶ್ರೀಧರಶ್ರೇಷ್ಠಿ ಜಿ. ಸುಧಾಕರ, ಟಿ.ವಿ. ಸುದರ್ಶನರೆಡ್ಡಿ, ಜಿ. ಶ್ರೀನಿವಾಸ, ಬಿ.ದೇವೇಂದ್ರ, ಬಾಲಚಂದ್ರ, ವೈ. ಮುರಳಿ ಮೋಹನರೆಡ್ಡಿ, ಇಟಗಿ ಮಂಜುನಾಥಗೌಡ, ಪ್ರಶಾಂತ ಸೇರಿ ಇತರರಿದ್ದರು.