ಜತೆಗೆ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ, ಜನ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಕೊಳವೆ ಬಾವಿಗಳ ಕೊರೆಸಲು ಕ್ರಿಯಾ ಯೋಜನೆ ರೂಪಿಸಿ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ ಬರ ನಿರ್ವಹಣೆ ಮತ್ತು ಕುಡಿಯುವ ನೀರು ಕುರಿತು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಹೂವಿನಹಡಗಲಿ: ಮುಂಗಾರು ಮಳೆ ಇಲ್ಲದೇ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಜತೆಗೆ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ, ಜನ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಕೊಳವೆ ಬಾವಿಗಳ ಕೊರೆಸಲು ಕ್ರಿಯಾ ಯೋಜನೆ ರೂಪಿಸಿ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ ಬರ ನಿರ್ವಹಣೆ ಮತ್ತು ಕುಡಿಯುವ ನೀರು ಕುರಿತು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಈಗಾಗಲೇ 15 ಗ್ರಾಪಂ ವ್ಯಾಪ್ತಿಯಲ್ಲಿನ ಹಳ್ಳಿಗಳಲ್ಲಿ 32 ಕೊಳವೆ ಬಾವಿಗಳ ಬೇಡಿಕೆ ಇದೆ. ಜತೆಗೆ ಉಳಿದ ಪಿಡಿಒ ಮಾಹಿತಿ ನೀಡಬೇಕು ಎಂದು ಹೇಳಿದರು.

ತುಂಗಭದ್ರಾ ನದಿಗೆ ಒಳಹರಿವು ಬಂದ ಕೂಡಲೇ ತಾಲೂಕಿನ ಕೆರೆಗಳಿಗೆ ನೀರು ತುಂಬಿಸಬೇಕು. ಪೈಪ್‌ಲೈನ್‌ ದುರಸ್ಥಿ ಇದ್ದರೂ ಬೇಗನೆ ರಿಪೇರಿ ಮಾಡಿಸಬೇಕು. ಜತೆಗೆ ಕೆರೆಗಳಿಗೆ ರೈತರು ಅಕ್ರಮವಾಗಿ ಪೈಪ್‌ ಅಳವಡಿಸಿದ್ದರೆ ಕೂಡಲೇ ತೆರವು ಮಾಡಬೇಕು. ಅಲ್ಲದೆ ಕೆರೆಗಳಿಗೆ ನೀರು ಹರಿಸಿದರೆ ಕುಡಿಯುವ ನೀರಿನ ಸಮಸ್ಯೆ ಉಲ್ಭಣವಾಗುವುದಿಲ್ಲ ಎಂದು ಸಿಂಗಟಾಲೂರು ಏತ ನೀರಾವರಿ ಇಇಗೆ ಸೂಚನೆ ನೀಡಿದರು.

ತಾಲೂಕಿನಲ್ಲಿ 42,110 ಜಾನುವಾರು, 1,97,939 ಕುರಿ ಮೇಕೆಗಳಿವೆ. ಸದ್ಯ 1,28,976 ಟನ್ ನಷ್ಟು ಮೇವು ಸಂಗ್ರಹವಿದೆ. ಇದು 51 ವಾರಗಳಿಗೆ ಸಾಕಾಗುತ್ತದೆ ಎಂದು ಪಶು ವೈದ್ಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ನಾರಾಯಣ ಬಣಕಾರ ಸಭೆ ಮಾಹಿತಿ ನೀಡಿದಾಗ, ಕುಡಿಯುವ ನೀರಿನ ಸಮಸ್ಯೆ ಕುರಿತು 3 ದಿನದೊಳಗೆ ವರದಿ ನೀಡಬೇಕು ಎಂದು ಶಾಸಕರು ಸೂಚಿಸಿದರು.

11 ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳಿದ್ದು, ಇದರಲ್ಲಿ ಹೊಳಗುಂದಿ ಉತ್ತಂಗಿ ಯೋಜನೆ ಪೈಪ್‌ಲೈನ್‌ ದುರಸ್ಥಿ ಇದೆ. ಉಳಿದ 10 ಯೋಜನೆ ಚಾಲನೆಯಲ್ಲಿವೆ. ಜತೆಗೆ ಜೆಜೆಎಂ ಯೋಜನೆಯ ಕಾಮಗಾರಿ ನಡೆಯುತ್ತಿದ್ದು ಬೇಗನೆ ಪೂರ್ಣಗೊಳಿಸಿ ಗ್ರಾಪಂಗೆ ಹಸ್ತಾಂತರಿಸುತ್ತೇವೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಎಂಜಿನಿಯರ್‌ ಚಂದ್ರಕಾಂತ್‌ ಸಭೆಗೆ ಮಾಹಿತಿ ನೀಡಿದರು.

ಕೆಲವಡೆಗಳಲ್ಲಿ ಕುಡಿಯುವ ನೀರಿನ ಯೋಜನೆಗಳಿಗೆ ವಿದ್ಯುತ್‌ ಪದೇ ಪದೇ ಕೈ ಕೊಡುತ್ತಿದೆ. ಇದರಿಂದ ನೀರು ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿದೆ. ಕೆಲವು ಯೋಜನೆಗಳಿಗೆ ನೀಡಿದ್ದ ವಿದ್ಯುತ್‌ ಪರಿವರ್ತಕಗಳನ್ನು ಜೆಸ್ಕಾಂ ಇಲಾಖೆ ಮರಳಿ ನೀಡಿಲ್ಲ. ರೈತರ ಟಿಸಿಗಳಿಗೆ ಸಂಪರ್ಕ ಪಡೆದು ಗ್ರಾಮಗಳಿಗೆ ನೀರು ಪೂರೈಕೆ ಮಾಡುತ್ತಿದ್ದೇವೆ ಎಂದು ಪಿಡಿಒಗಳು ಸಭೆಯ ಗಮನಕ್ಕೆ ತಂದಾಗ, ಜೆಸ್ಕಾಂ ಶಾಖಾಧಿಕಾರಿಗೆ ಸರಿಯಾಗಿ ವಿದ್ಯುತ್‌ ಕೊಡಿ, ಜಂಗಲ್‌ ಕಟ್ಟಿಂಗ್‌ ತೆರವು ಮಾಡಿ, ಕುಡಿಯುವ ನೀರಿನ ಟಿಸಿಗಳನ್ನು ಕೂಡಲೇ ನೀಡಬೇಕು. ನಿರಂತರ ಜ್ಯೋತಿಗೆ ಅಕ್ರಮ ಸಂಪರ್ಕಗಳನ್ನು ತೆರವು ಮಾಡಬೇಕು ಎಂದು ಶಾಸಕರು ಸೂಚನೆ ನೀಡಿದರು.

56 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ 29,514 ಹೆಕ್ಟೇರ್‌ ಬಿತ್ತನೆಯಾಗಿದ್ದು, 20,990 ಹೆಕ್ಟೇರ್‌ ಮೆಕ್ಕೆಜೋಳ ಬಿತ್ತನೆಯಾಗಿದೆ. 3580 ಹೆಕ್ಟೇರ್‌ ತೊಗರಿ, 1575 ಹೆಕ್ಟೇರ್‌ ಸೂರ್ಯಕಾಂತಿ ಬಿತ್ತನೆಯಾಗಿದೆ. ಇದರಲ್ಲಿ ಶೇ. 40ರಷ್ಟು ನೀರಾವರಿ ಸೌಲಭ್ಯವಿದೆ. ಶೇ. 56ರಷ್ಟು ಮಳೆ ಕೊರತೆ ಇದೆ. ಆದ್ದರಿಂದ ರೈತರು ಬೆಳೆ ವಿಮೆ ಮಾಡಿಸಬೇಕು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಟಿ. ಮಂಜುನಾಥ ಮಾಹಿತಿ ನೀಡಿದರು.

56 ಸಾವಿರ ರೈತರಲ್ಲಿ 25 ಸಾವಿರ ರೈತರು ಎಫ್‌ಐಡಿ ಮಾಡಿಸಿದ್ದಾರೆ, ಉಳಿದವರು ಎಫ್‌ಐಡಿ ಮಾಡಿಸಿ, ಆಯಾ ಬ್ಯಾಂಕ್‌ಗಳಲ್ಲಿ ಶೇ. 90ರಷ್ಟು ರೈತರು ಬೆಳೆ ವಿಮೆ ಮಾಡಿಸಬೇಕು ಎಂದು ಶಾಸಕರು ಹೇಳಿದರು.

ಸಭೆಯಲ್ಲಿ ತಹಸೀಲ್ದಾರ್‌ ಕೆ.ಎಂ. ಗುರುಬಸವರಾಜ, ತಾಪಂ ಇಒ ಜಿ. ಪರಮೇಶ್ವರ ಇದ್ದರು.