ಸಾರಾಂಶ
ನಗರದಲ್ಲಿ ರೈಲ್ವೆ ಮೇಲ್ಸೇತುವೆ ಉದ್ಘಾಟನಾ ಸಮಾರಂಭದಲ್ಲಿ ರೈಲ್ವೆ ಮಂತ್ರಿ ವಿ. ಸೋಮಣ್ಣ ಅವರಿಗೆ ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ ನಿಯೋಗದಿಂದ ಕೆಲವು ರೈಲುಗಳ ಸೇವೆ ವಿಸ್ತರಿಸಲು ಹಾಗೂ ಮುಂದುವರೆಸಲು ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಕೊಪ್ಪಳ
ನಗರದಲ್ಲಿ ರೈಲ್ವೆ ಮೇಲ್ಸೇತುವೆ ಉದ್ಘಾಟನಾ ಸಮಾರಂಭದಲ್ಲಿ ರೈಲ್ವೆ ಮಂತ್ರಿ ವಿ. ಸೋಮಣ್ಣ ಅವರಿಗೆ ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ ನಿಯೋಗದಿಂದ ಶಾಸಕ ಗಾಲಿ ಜನಾರ್ದನ್ ರೆಡ್ಡಿ ಹಾಗೂ ಸಮಿತಿ ಅಧ್ಯಕ್ಷ ಕೆ.ಎಂ. ಮಹೇಶ್ವರ್ ಸ್ವಾಮಿ ಅವರ ನೇತೃತ್ವದ ಲ್ಲಿ ಕೆಲವು ರೈಲುಗಳ ಸೇವೆ ವಿಸ್ತರಿಸಲು ಹಾಗೂ ಮುಂದುವರೆಸಲು ಮನವಿ ಸಲ್ಲಿಸಲಾಯಿತು.ಈ ಹಿಂದೆ ಸಂಚರಿಸುತ್ತಿದ್ದ ಬೆಳಗಾವಿ ಮುನ್ಗೂರು ರೈಲನ್ನು, ಶಿವಮೊಗ್ಗ ಬಳ್ಳಾರಿ ಚೆನ್ನೈ ರೈಲುಗಳನ್ನು ಮುಂದುವರಿಸಬೇಕು. ಕೊಪ್ಪಳ ಬಳ್ಳಾರಿ ಗುಂತಕಲ್ ಮಾರ್ಗದಲ್ಲಿ ಇಂಟರ್ ಸಿಟಿ ಇಲ್ಲವೇ ಒಂದೇ ಭಾರತ್ ರೈಲು ಆರಂಭಿಸಬೇಕು. ವಿಜಯಪುರ ಮಂಗಳೂರು ರೈಲು, ಹುಬ್ಬಳ್ಳ- ಚಿಕ್ಕಜಾಜೂರು ಮಾರ್ಗದಲ್ಲಿ ಸಂಚರಿಸುತ್ತಿದ್ದು, ಕೊಪ್ಪಳ, ಹೊಸಪೇಟೆ, ಬಳ್ಳಾರಿ ಹಾಗೂ ಚಿತ್ರದುರ್ಗ ಜಿಲ್ಲೆಗಳ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಗದಗ-ಬಳ್ಳಾರಿ-ಚಿತ್ರದುರ್ಗ-ಚಿಕ್ಕಜಾಜೂರ್ ಲಿಂಕ್ ಎಕ್ಸ್ಪ್ರೆಸ್ ಆರಂಭಿಸಿ ಮಂಗಳೂರು ರೈಲಿಗೆ ಲಿಂಕ್ ಕೊಡಬೇಕು, ಮುಂಬೈ ಹೊಸಪೇಟೆ ರೈಲನ್ನು ಬಳ್ಳಾರಿವರೆಗೆ ವಿಸ್ತರಿಸಬೇಕು. ಈ ಕಾರಣಕ್ಕಾಗಿ ಈ ರೈಲಿನ ಸೇವೆಯನ್ನು ಬೆಂಗಳೂರು ಇಲ್ಲವೇ ಮೈಸೂರುವರೆಗೆ ವಿಸ್ತರಿಸಬೇಕು ಎಂದು ಮನವಿಯಲ್ಲಿ ಕೋರಿದರು.
ಹೊಸಪೇಟೆ, ಬಳ್ಳಾರಿಯ ಪ್ರದೇಶಗಳಿಂದ ಸಾವಿರಾರು ಕೋಟಿ ರೂಪಾಯಿಗಳ ಆದಾಯ ರೈಲ್ವೆ ಇಲಾಖೆಗೆ ಬರುತ್ತಿದ್ದು, ಈ ಭಾಗದ ರೈಲ್ವೆ ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯ ನೀಡುತ್ತಿಲ್ಲ. ಕಳೆದ 10-15 ವರ್ಷಗಳಿಂದ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ. ಒಂದು ತಿಂಗಳೊಳಗೆ ಮೇಲಿನ ಬೇಡಿಕೆ ಈಡೇರಿಸದಿದ್ದರೆ ಬಳ್ಳಾರಿಯಿಂದ ಹುಬ್ಬಳ್ಳಿಯವರೆಗೆ ಪಾದಯಾತ್ರೆಯ ಜನಪರ ಹೋರಾಟ ಹಾಗೂ ಗೂಡ್ಸ್ ರೈಲುಗಳ ನಿಲುಗಡೆ ಮಾಡುವುದಾಗಿ ಎಚ್ಚರಿಸಿದರು.ನಿಯೋಗದಲ್ಲಿ ಪಿ. ಬಂಡೇಗೌಡ, ಜಿ. ತಿಪ್ಪೆರುದ್ರಪ್ಪ, ಜಿ. ನೀಲಕಂಠಪ್ಪ, ಜಿ.ಪಿ. ರಾವ್, ಮಧುಸೂದನಗೌಡ, ಸಂಗನಕಲ್ಲು ವಿರುಪಾಕ್ಷಪ್ಪ, ಮಹೇಶ ಕೊಡತಿನಿ, ಕೌತಾಳ ವಿಶ್ವನಾಥ, ಅರವಿಂದ ಜಾಲಿ ಇತರರಿದ್ದರು.