ಕನ್ನಡಪ್ರಭ ವಾರ್ತೆ ವಿಜಯಪುರ

ಲಾಲ್ ಬಹದ್ದೂರ್‌ ಶಾಸ್ತ್ರಿ ಜಲಾಶಯದ ವ್ಯಾಪ್ತಿಗೆ ಬರುವ ಮುಳವಾಡ ಹಾಗೂ ಚಿಮ್ಮಲಗಿ ಏತನೀರಾವರಿಗೆ ಸಂಬಂಧಿಸಿದ ಎಲ್ಲ ಕಾಲುವೆಗಳಿಗೆ ನೀರು ಹರಿಸಿ ಜಿಲ್ಲೆಯಲ್ಲಿರುವ 124 ಕೆರೆಗಳಿಗೆ ಮತೊಮ್ಮೆ ನೀರು ಭರ್ತಿ ಮಾಡಲು ಅನುಮತಿ ನೀಡಬೇಕೆಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಜಂಟಿಯಾಗಿ ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಭೇಟಿ ಆಗಿ ಪ್ರಾದೇಶಿಕ ಆಯುಕ್ತೆ ಎ.ಎಂ.ಜಾನಕಿ ಅವರಿಗೆ ಮನವಿ ಸಲಿಸಿದರು.

ಏಪ್ರಿಲ್ 28ರ ವರೆಗೂ ಎಲ್ಲ ಕಾಲುವೆಗಳಿಗೆ ನೀರು ಹರಿಸಿದರೂ ಕೂಡ ಕೇವಲ ಶೇ.30ರಷ್ಟು ಮಾತ್ರ ನೀರನ್ನು ಕೆರೆಗಳಿಗೆ ಬಿಡಲಾಗಿದೆ. ಆದರೆ, ಕೆಬಿಜೆಎನ್‌ಎಲ್ ಅಧಿಕಾರಿಗಳು ಶೇ.70ರಷ್ಟು ಕೆರೆಗಳಿಗೆ ನೀರು ತುಂಬಿಸಿದ್ದೇವೆ ಎಂದು ಹೇಳುತ್ತಾರೆ. ಈ ಮಾತು ಸತ್ಯಕ್ಕೆ ದೊರವಾಗಿದೆ. ಇದೇ ತಿಂಗಳು 5 ರಂದು ಆಲಮಟ್ಟಿಯ ಕೆಬಿಜೆಎನ್‌ಎಲ್‌ ಮುಖ್ಯ ಅಭಿಯಂತರರ ಕಚೇರಿ ಮುಂದೆ ಪ್ರತಿಭಟಿಸಿ, ಜಂಟಿ ಸಂಘಟನೆಯಿಂದ ಧರಣಿ ನಡೆಸಲಾಗಿತ್ತು.

ಮುಖ್ಯ ಅಭಿಯಂತರರಾದ ಡಿ.ಬಸವರಾಜ ಅವರು ಮನವಿ ಸ್ವೀಕರಿಸಿ, ಮತ್ತೆ ಕಾಲುವೆಗಳಿಗೆ ನೀರು ಹರಸಿ ಕೆರೆಗಳನ್ನು ಭರ್ತಿ ಮಾಡಲು ಪ್ರಾದೇಶಿಕ ಆಯುಕ್ತರ ಅನುಮತಿಗೆ ಪತ್ರ ಬರೆದಿದ್ದಾರೆ. ಆದ್ದರಿಂದ ಕೂಡಲೇ ಕಾಲುವೆಗಳಿಗೆ ನೀರು ಹರಿಸಲು ಅನುಮತಿ ನೀಡಬೇಕು ಎಂದರು.

ಜಿಲ್ಲೆಯ ಕೆಲವೊಂದು ಭಾಗದ ಕೆರೆಗಳಿಗೆ ನೀರು ತಲುಪಿಲ್ಲ. ಈ ಬಾರಿ ಬೇಸಿಗೆಯ ಬಿಸಿಲಿನ ಪ್ರಖರತೆ ಅತಿಯಾಗಿದೆ. ಹಿಂದೆಂದೂ ಇಂತಹ ಬಿಸಿಲು ಕಂಡಿಲ್ಲ. ಈಗ ಕೆರೆಗಳಿಗೆ ಹರಿಸಿದ ನೀರು ಬಾಸ್ಪೀಕರಣವಾಗಿ ಬೇಗನೆ ಬರಿದಾಗುತ್ತದೆ. ಇನ್ನೂ ಒಂದು ತಿಂಗಳು ಬೇಸಿಗೆ ಇದ್ದು ಅಲ್ಲಿಯವರಿಗೆ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ತತ್ವಾರ ಎದುರಾಗುತ್ತದೆ. ಆದ್ದರಿಂದ ತಕ್ಷಣ ಆದೇಶ ನೀಡಿ ಎಲ್ಲ ಕಾಲುವೆಗಳಿಗೆ ನೀರು ಹರಿಸಿ ಶೇ.75 ರಿಂದ 80ರಷ್ಟು ಕೆರೆಗಳನ್ನು ಭರ್ತಿ ಮಾಡಿ ಜನ ಹಾಗೂ ಜಾನುವಾರಗಳಿಗೆ ಕುಡಿಯುವ ನೀರಿನ ಅನುಕೂಲತೆ ಕಲ್ಪಿಸಬೇಕೆಂದು ಒತ್ತಾಯಿಸಿದರು.


ಇದಕ್ಕೆ ಸ್ಪಂದಿಸಿದ ಪ್ರಾದೇಶಿಕ ಆಯುಕ್ತರು ತಕ್ಷಣ ಜಿಲ್ಲಾಧಿಕಾರಿಗಳಿಂದ ವರದಿ ತರಿಸಿಕೊಂಡು, ನೀರು ಹರಿಸಲು ಅನುಮತಿ ನೀಡಲಾಗುವುದೆಂದು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಜಮೀನಿಗೆ ಹೋಗುವ ದಾರಿ ಸಮಸ್ಯೆ ಕುರಿತು ಮನವಿ ಸಲ್ಲಿಸಿ ಕಾನೂನು ತಿದ್ದುಪಡಿ ಮಾಡಿ ತಹಸೀಲ್ದಾರರಿಗೆ ಪೂರ್ಣ ಅಧಿಕಾರ ನೀಡಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.

ರೈತ ಮುಖಂಡರಾದ ಸೀತಪ್ಪ ಗಣಿ, ಶಶಿಕಾಂತ ದೇಸಾಯಿ, ಫೀರಸಾಬ ನದಾಫ್, ವೆಂಕಟೇಶ ವಡ್ಡರ, ಸಾಯಿಬಣ್ಣ ಅಂಗಡಿ, ಇಬ್ರಾಹಿಂ ವಾಲಿಕಾರ, ಲಂಕೇಶ ತಳವಾರ, ನಾಗಪ್ಪ ಬೂಧಗೋಳಿ, ಮಂಜು ಛಲವಾದಿ, ಬಸವರಾಜ ಬೋಳಿ, ಚಂದಪ್ಪ ಬೋಮ್ಮನಗಿ, ಹೊನ್ನಪ್ಪ ಕೆಂಗುತ್ತಿ, ಅರವಿಂದ ಕುಲಕರ್ಣಿ ಉಪಸ್ಥಿತರಿದ್ದರು.