ಸಾರಾಂಶ
ಗದಗ: ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಪ್ರಮುಖ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ ಗದಗ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಕೊರ್ಲಹಳ್ಳಿ ಮಾತನಾಡಿ, ಕರ್ನಾಟಕ ಖಾಸಗಿ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿ (ವೇತನ, ನಿವೃತ್ತಿ ವೇತನ ಮತ್ತು ಇತರೆ ಸೌಲಭ್ಯಗಳ ನಿಯಂತ್ರಣ) ವಿಧೇಯಕ 2014ಕ್ಕೆ ತಿದ್ದುಪಡಿ ತಂದು ಅಥವಾ ರದ್ದುಪಡಿಸಿ ಭವಿಷ್ಯವರ್ತಿಯಾಗಿ ಜಾರಿಗೆ ಬರುವಂತೆ ಕ್ರಮ ವಹಿಸುವ ಮೂಲಕ 1-4-2006ರ ಪೂರ್ವದಲ್ಲಿ ನೇಮಕವಾಗಿ ನಂತರ ಅನುದಾನಕ್ಕೆ ಒಳಪಟ್ಟ ನೌಕರರ ಅನುದಾನಕ್ಕೂ ಪೂರ್ವದ ಸೇವೆ ಕೇವಲ ಪಿಂಚಣಿ ಸೌಲಭ್ಯಕ್ಕೆ ಮಾತ್ರ ಪರಿಗಣಿಸಿ ಹಳೆಯ ನಿಶ್ಚಿತ ಪಿಂಚಣಿ ಸೌಲಭ್ಯ ನೀಡಬೇಕು.ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷವು ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ರಾಜ್ಯದ ಸರ್ಕಾರಿಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಎನ್ಪಿಎಸ್ ರದ್ದುಗೊಳಿಸಿ ಓಪಿಎಸ್ ಜಾರಿಗೆ ತರುವ ಭರವಸೆ ನೀಡಿರುತ್ತದೆ. ನೀಡಿರುವ ಭರವಸೆಯಂತೆ ಶೀಘ್ರದಲ್ಲಿಯೇ ಹಳೆಯ ನಿಶ್ಚಿತ ಪಿಂಚಣಿ ಸೌಲಭ್ಯ (ಓಪಿಎಸ್) ಜಾರಿಗೊಳಿಸಬೇಕು. 2020 ಡಿ.31 ರವರೆಗೆ ಪ್ರೌಢಶಾಲೆ ಪಪೂ ಕಾಲೇಜುಗಳಲ್ಲಿ ಖಾಲಿಯಾಗಿರುವ ಬೋಧಕ ಹುದ್ದೆ ತುಂಬಿಕೊಳ್ಳಲು ಅನುಮತಿಸಿದ್ದನ್ನು ಸ್ವಾಗತಿಸುತ್ತೇವೆ.ಅದೇ ತೆರನಾಗಿ 2002 ರಿಂದ 2020ರ ವರೆಗೆ ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ಮರಣ, ನಿವೃತ್ತಿ ರಾಜೀನಾಮೆ ಮತ್ತು ಇತರ ಕಾರಣಗಳಿಗಾಗಿ ಖಾಲಿಯಾಗಿರುವ ಶಿಕ್ಷಕ ಹುದ್ದೆಗಳನ್ನು ತುಂಬಿಕೊಳ್ಳಲು ಅನುಮತಿಸಬೇಕು.
ಸರ್ಕಾರಿ ಶಾಲಾ ಕಾಲೇಜುಗಳ ಮತ್ತು ಅನುದಾನಿತ ಶಾಲಾ-ಕಾಲೇಜುಗಳ ಮಕ್ಕಳು ಹಾಗೂ ನೌಕರರುಗಳಿಗೆ ನೀಡುವ ಸೌಲಭ್ಯಗಳಲ್ಲಿ ಯಾವುದೇ ತಾರತಮ್ಯ ಮಾಡದಂತೆ ಸಮಾನವಾಗಿ ಸೌಲಭ್ಯ ನೀಡುವುದು ಸೇರಿದಂತೆ ಹಲವಾರು ಪ್ರಮುಖ ಬೇಡಿಕೆಗಳ ಕುರಿತು ವಿವರವಾಗಿ ಮಾತನಾಡಿದರು.ಈ ವೇಳೆ ಜಿಲ್ಲಾ ಗೌರವಾಧ್ಯಕ್ಷ ವಿ.ಎಚ್. ಕೊಳ್ಳಿ, ಈರಣ್ಣ ಹಾದಿಮನಿ, ರವಿ ಕೋಟಿ, ಸಂಗಮೇಶ ಅಬ್ಬಿಗೇರಿ, ಎಚ್.ಎಚ್. ಹಳ್ಳಿ, ಜಿ.ಬಿ. ಲಮಾಣಿ, ಎಸ್.ಎಸ್. ಕುರಿ, ಎಚ್.ಎನ್. ಕುರಿ, ಎಸ್.ಕೆ. ಅಂಗಡಿ, ಎಸ್.ಎಸ್. ರಾಹುತರ, ಮಂಜುನಾಥ ಮರಾಟೆ, ಎಂ.ಡಿ. ನದಾಫ, ಎಂ.ವೈ. ಮಾದರ, ಎ.ಎ. ಹದ್ಲಿ, ಕೆ.ಎಸ್.ಮಡಿವಾಳರ, ಆರ್.ವಿ. ಗೊಂಡಬಾಳ, ಕೆ.ಎಸ್. ಕಟಗಿ, ಎಸ್.ಎಸ್. ಗೌಡರ, ಸಿ.ಎಸ್. ಮುಂಡವಾಡ, ಡಿ.ಎಫ್. ಹೊಸಮನಿ ಸೇರಿದಂತೆ ಇತರರು ಇದ್ದರು.