ಸಾರಾಂಶ
ಬ್ಯಾಡಗಿ: ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ಸ್ಥಳೀಯ ಕೇಂದ್ರಗಳಲ್ಲಿಯೇ ಕೆಲಸ ನಿರ್ವಹಿಸಲು ಹೆಚ್ಚಿನ ಒತ್ತು ನೀಡುವಂತೆ ಹೊರಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದರು.ಜಿಲ್ಲಾ ಸರ್ಕಾರಿ ಹೊರಗುತ್ತಿಗೆ ನೌಕರರ ವಿವಿಧೋದ್ದೇಶ ಸಹಕಾರ ಸೊಸೈಟಿ ರಚನೆ ಕುರಿತಂತೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಗುರುರಾಜ ಕಂಬಳಿ ಅವರು, ಅತಿ ಕಡಿಮೆ ವೇತನಕ್ಕೆ ದುಡಿಯುವ ಹೊರಗುತ್ತಿಗೆ ನೌಕರರನ್ನು ಅವರಿರುವ ಸ್ಥಳೀಯ ಕಚೇರಿಗಳಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಿದಲ್ಲಿ ಆರ್ಥಿಕ ದೃಷ್ಟಿಯಿಂದ ಅನೂಕೂಲವಾಗಲಿದೆ. ಅಲ್ಲದೇ ಹೆಚ್ಚು ಕಾರ್ಯಕ್ಷಮತೆಯಿಂದ ಕೆಲಸ ಮಾಡಲು ಉತ್ಸಾಹ ನೀಡಲಿದೆ ಎಂದರು.ಸೇವಾ ಭದ್ರತೆ ಇಲ್ಲ: ಯಾವ ಕಚೇರಿಯಲ್ಲಿ ಕೆಲಸ ಮಾಡಿದರೂ ನಾವು ಸರ್ಕಾರಿ ನೌಕಕರು ಅಲ್ಲದಿರವ ಕಾರಣ ನಮ್ಮ ಕೆಲಸಕ್ಕೆ ಭದ್ರತೆ ಇಲ್ಲದಂತಾಗಿದೆ. ಹೊರಗುತ್ತಿಗೆ ಆಯ್ಕೆಯಲ್ಲಿಯೂ ರಾಜಕೀಯ ನಡೆಸಿ ಕೆಲವರಿಗೆ ಅನ್ಯಾಯ ಮಾಡಲಾಗುತ್ತದೆ. ಅಲ್ಲದೇ ನಮಗೆ ಯಾವುದೇ ಸೇವಾ ಭದ್ರತೆಯಿಲ್ಲದ ಕಾರಣ ನಾವು ಅತಂತ್ರ ಸ್ಥಿತಿ ತಲುಪಿದ್ದೇವೆ. ಆದ್ದರಿಂದ ನಮಗೂ ಸೇವಾ ಭದ್ರತೆ ಒದಗಿಸುವಂತೆ ಆಗ್ರಹಿಸಿದರು.60 ವರ್ಷ ಕೆಲಸ ಸಿಗಲಿ: ಪ್ರಧಾನ ಕಾರ್ಯದರ್ಶಿ ರಾಜು ಪೂಜಾರ ಮಾತನಾಡಿ, ಜಿಲ್ಲೆಯಲ್ಲಿ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘ ರಚಿಸುತ್ತಿರುವುದು ಸ್ವಾಗತಾರ್ಹ. ಈ ವಿಷಯಕ್ಕೆ ಸಂಬಂಧಿಸಿದಂತೆ ರಚಿಸಲಾಗಿರುವ ಉಪವಿಧಿಗಳು(ಬೈಲಾ) ಕೈಪಿಡಿಯಲ್ಲಿ ಸಂಘದ ಸದಸ್ಯರು ಎಲ್ಲಿ ಕಾರ್ಯನಿರ್ವಹಿಸುತ್ತಾರೊ ಅಲ್ಲಿಯೇ ಮುಂದುವರಿಸುವ ಬಗ್ಗೆ ಯಾವುದೇ ಲಿಖಿತ ಮಾಹಿತಿ ಇಲ್ಲ ಹಾಗೂ ಕಾರ್ಮಿಕರ ಹಿತ ಕಾಯುವ ದೃಷ್ಟಿಯಿಂದ ಕಾರ್ಮಿಕರನ್ನು ಸರ್ಕಾರಿ ನೌಕರರ ಮಾದರಿಯಲ್ಲಿ 60 ವರ್ಷಗಳವರೆಗೆ ಕೆಲಸದಿಂದ ವಿಮುಖಗೊಳಿಸದಿರಲು ಉಪವಿಧಿಗಳ ಕೈಪಿಡಿಯಲ್ಲಿ ವ್ಯಾಖ್ಯಾನವನ್ನು ಸೇರಿಸಲು ಮನವಿ ಮಾಡಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ದುರುಗೇಶ ವಂದವಾಗಲು, ಸುರೇಶ ಸಾಗರ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಪ್ರಜಾಪ್ರಭುತ್ವಕ್ಕೆ ತಳಹದಿ ಹಾಕಿದ ಬಸವ
ಹಿರೇಕೆರೂರು: ಕಾಯಕವನ್ನೇ ತಮ್ಮ ಜೀವನದ ವೃತ್ತಿಯನ್ನಾಗಿ ಮಾಡಿಕೊಂಡು ಸಮಾಜಕ್ಕೆ ಆದರ್ಶಪ್ರಾಯವಾಗಿ ಇಡೀ ಮನುಕುಲವನ್ನೇ ಸಮಾನತೆಯ ಧರ್ಮದಲ್ಲಿ ಕಂಡ ಮಹಾಮಾನವತಾವಾದಿ ಬಸವಣ್ಣನವರು ಎಂದು ಶಾಸಕ ಯು.ಬಿ. ಬಣಕಾರ ತಿಳಿಸಿದರು.ಪಟ್ಟಣದ ಚಿಕ್ಕೇರೂರು ರಸ್ತೆಯ ಶಾಂತಿನಿಕೇತನ ಆವರಣದಲ್ಲಿ ಸಿಇಎಸ್ ವಿದ್ಯಾ ಸಂಸ್ಥೆಯ ಹಾಗೂ ಟಿಎಪಿಸಿಎಂಎಸ್ ಸಹಯೋಗದಲ್ಲಿ ನಡೆದ ಬಸವೇಶ್ವರ ಜಯಂತಿ ಅಂಗವಾಗಿ ಬಸವಣ್ಣನವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.೧೨ನೇ ಶತಮಾನದ ಧಾರ್ಮಿಕ ಹಾಗೂ ಸಾಮಾಜಿಕ ಕ್ರಾಂತಿಯ ಹರಿಕಾರರಾಗಿ ಈಗಿರುವ ಪ್ರಜಾಪ್ರಭುತ್ವ ವ್ಯವಸ್ಥೆಯಂತೆ ಅಂದು ಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪಿಸಿ ವಿಶ್ವದ ಮೊಟ್ಟ ಮೊದಲ ಪ್ರಜಾಪ್ರಭುತ್ವ ಜಾರಿಗೆ ತಂದ ಧೀಮಂತ ನಾಯಕರು ಬಸವಣ್ಣನವರು. ಇಂದಿನ ಸಂವಿಧಾನದಲ್ಲಿ ಬಸವಣ್ಣನವರ ವಚನಗಳ ಆತ್ಮವಿಮರ್ಶೆಯನ್ನು ಕಾಣುತ್ತೇವೆ. ಇಡೀ ಜಗತ್ತನ್ನು ಜ್ಞಾನದ ಬಲದಿಂದಲೇ ಗೆಲ್ಲಬೇಕೆಂದು ಎಲ್ಲರೂ ಜ್ಞಾನಿಗಳಾಗುವಂತಹ ಬಯಕೆ ಬಸವಣ್ಣನವರದಾಗಿತ್ತು ಎಂದರು.ಸಿಇಎಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ಎಸ್. ಪಾಟೀಲ ಮಾತನಾಡಿ, ಬಸವಣ್ಣನವರು ಸರ್ವರಲ್ಲಿ ಸಮಾನತೆ ಸಾರಿದ ನಾಡಿನ ಕ್ರಾಂತಿಪುರುಷರಾದ ಅವರು ವಿಶ್ವದೆತ್ತರಕ್ಕೆ ಬೆಳೆದು ಮನುಕುಲವನ್ನು ಸಮಾನತೆಯ ದಿಕ್ಕಿನಲ್ಲಿ ಕೊಂಡೊಯ್ಯಲು ನುಡಿದಂತೆ ನಡೆದು ತೋರಿಸಿ ತನ್ನ ಬದುಕನ್ನೇ ಸಮರ್ಪಿಸಿದ ಮಹಾ ಚೇತನ ಬಸವಣ್ಣ ಎಂದರು.ಸಿಇಎಸ್ ಸಂಸ್ಥೆಯ ಅಧ್ಯಕ್ಷ ಎಸ್.ಬಿ. ತಿಪ್ಪಣ್ಣನವರ ಅಧ್ಯಕ್ಷತೆ ವಹಿಸಿದ್ದರು. ವೀರಶೈವ ಮಹಾಸಭಾ ರಾಜ್ಯ ಘಟಕದ ಕಾರ್ಯನಿರ್ವಾಹಕ ಸದಸ್ಯ ಲಿಂಗರಾಜ ಚಪ್ಪರದಳ್ಳಿ ತಾಲೂಕು ಘಟಕದ ಅಧ್ಯಕ್ಷ ಶಿವಕುಮಾರ ತಿಪ್ಪಶೆಟ್ಟಿ, ಎಸ್. ವೀರಭದ್ರಯ್ಯ ಯು.ಎಸ್. ಕಳಗೊಂಡದ, ಬಿ.ಜಿ. ಬಣಕಾರ ಪ್ರಾಚಾರ್ಯರಾದ ಡಾ. ಎಸ್.ಬಿ. ಚನ್ನಗೌಡ್ರ ಬಿ.ಪಿ. ಹಳ್ಳೇರ, ಕೆ.ಎಚ್. ಮಾವಿನತೋಪ, ಮುಖ್ಯಶಿಕ್ಷಕರಾದ ಆರ್.ಎಚ್. ಬೆಟ್ಟಳ್ಳಿ ಬಿ.ವಿ. ಸನ್ನೇರ, ಸತೀಶ ಬಣಕಾರ ಇತರರು ಇದ್ದರು.