ಸಾರಾಂಶ
ಅಡಕೆ ತಟ್ಟೆ, ಲೋಟ ಮತ್ತಿತರ ಉತ್ಪನ್ನಗಳು ಆರೋಗ್ಯಕ್ಕೆ ಹಾನಿಕರ ಎಂದು ಅಮೆರಿಕ ಹೊರಡಿಸಿರುವ ಆಮದು ನಿರ್ಬಂಧ ತೆರವುಗೊಳಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ ಆಗ್ರಹಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಅಡಕೆ ತಟ್ಟೆ, ಲೋಟ ಮತ್ತಿತರ ಉತ್ಪನ್ನಗಳು ಆರೋಗ್ಯಕ್ಕೆ ಹಾನಿಕರ ಎಂದು ಅಮೆರಿಕ ಹೊರಡಿಸಿರುವ ಆಮದು ನಿರ್ಬಂಧ ತೆರವುಗೊಳಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ ಆಗ್ರಹಿಸಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಸಂಘದ ರಾಜ್ಯಾಧ್ಯಕ್ಷ ಯು.ಬಸವರಾಜ ಮತ್ತು ಪ್ರಧಾನ ಕಾರ್ಯದರ್ಶಿ ಟಿ.ಯಶವಂತ. ಭಾರತದಿಂದ ರಫ್ತಾಗುವ ಅಡಕೆ ಹಾಳೆ ತಟ್ಟೆ, ಲೋಟ ಮತ್ತಿತರ ಪರಿಕರಗಳು ಆರೋಗ್ಯಕ್ಕೆ ಹಾನಿಕರ ಹಾಗೂ ಕ್ಯಾನ್ಸರ್ಕಾರಕ ಎಂದು ಅಮೆರಿಕ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆ ಮೇ 8 ರಂದು ಆದೇಶ ಹೊರಡಿಸಿದೆ. ಈ ನಿರ್ಬಂಧ ತೆರವುಗೊಳಿಸಲು ಪ್ರಧಾನಿ ಮೋದಿ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದ್ದಾರೆ. ದೇಶದಲ್ಲೇ ಕರ್ನಾಟಕ ಹೆಚ್ಚು ಅಡಕೆ ಬೆಳೆಯುವ ರಾಜ್ಯ. ಅಡಕೆ ಹಾಳೆಯ ಉತ್ಪನ್ನಗಳ ಜಾಗತಿಕ ಮಾರುಕಟ್ಟೆ 3.5 ಸಾವಿರ ಕೋಟಿ ರು. ಇದ್ದು ಇದರಲ್ಲಿ ರಾಜ್ಯದ ಕೊಡುಗೆಯೇ ಸುಮಾರು 2.5 ಸಾವಿರ ಕೋಟಿಯಷ್ಟಿದೆ. ಈ ನಿರ್ಬಂಧದಿಂದ ಬೆಳೆಗಾರರು ಸೇರಿ ಉದ್ಯಮದಲ್ಲಿ ತೊಡಗಿರುವ ಸಹಸ್ರಾರು ಜನರ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.ನಿರ್ಬಂಧದಿಂದ ದಕ್ಷಿಣ ಕನ್ನಡ ಮತ್ತಿತರ ಜಿಲ್ಲೆಗಳಿಂದ ನಡೆಯುತ್ತಿದ್ದ ರಪ್ತು ವಹಿವಾಟು ತೀವ್ರ ಪ್ರಮಾಣದಲ್ಲಿ ಕುಸಿದಿದೆ. ಅದ್ದರಿಂದ ಅಡಕೆ ಬೆಳೆಯುವ ಪ್ರದೇಶದ ಸಂಸದರು ಈ ಸಮಸ್ಯೆ ನಿವಾರಿಸುವಂತೆ ಪ್ರಧಾನಿ ಮೇಲೆ ಒತ್ತಡ ತರಬೇಕು. ರಾಜ್ಯ ಸರ್ಕಾರ ಸಹ ತಕ್ಷಣ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು ಎಂದು ಆಗ್ರಹಿಸಿದ್ದಾರೆ.