ಸಾರಾಂಶ
ಕನ್ನಡಪ್ರಭ ವಾರ್ತೆ ಭದ್ರಾವತಿ
ಭದ್ರಾವತಿ ವಿಧಾನಸಭಾ ಕ್ಷೇತ್ರವನ್ನು ಆಕರ್ಷಣೀಯ ಪ್ರವಾಸಿಗರ ತಾಣ ಮಾಡುವ ಸಂಬಂಧ ರಾಜ್ಯ ಸರ್ಕಾರದಿಂದ ಆರ್ಥಿಕ ನೆರವು ದೊರಕಿಸಿಕೊಡಬೇಕೆಂದು ನಗರದ ಜನ್ನಾಪುರ ಡಿ. ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್, ಸುವರ್ಣ ಮಹಿಳಾ ವೇದಿಕೆ ವತಿಯಿಂದ ಸಲ್ಲಿಸಲಾಗಿದ್ದ ಮನವಿಗೆ ಸಂಸದ ಬಿ.ವೈ ರಾಘವೇಂದ್ರರವರು ಸ್ಪಂದಿಸಿ ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗು ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ ಪಾಟೀಲ್ರವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಟ್ರಸ್ಟ್ ಚೇರ್ಮನ್, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಮಾತನಾಡಿ, ಭದ್ರಾವತಿ ವಿಧಾನಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಕಳೆದ ಸುಮಾರು 50 ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ ಎಂದರು.ನಗರಸಭೆ ವ್ಯಾಪ್ತಿಯ ಸರ್ವೆ ನಂ. 112ರ ಹೊಸಮನೆ ತಮ್ಮಣ್ಣ ಕಾಲೋನಿ ಸಮೀಪವಿರುವ ಸುಮಾರು 800 ವರ್ಷಗಳ ಇತಿಹಾಸವಿರುವ 50 ಎಕರೆ 20 ಗುಂಟೆ ವಿಸ್ತೀರ್ಣವುಳ್ಳ ಸರ್ಕಾರಿ ಹಿರೇಕೆರೆ ಹಾಗೂ ಹಳೇನಗರದ ಪುರಾಣ ಪ್ರಸಿದ್ಧ ಕ್ಷೇತ್ರಪಾಲಕ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ, ಕಲ್ಲಹಳ್ಳಿ ಗ್ರಾಮ ಪಂಚಾಯತಿ ಸಿರಿಯೂರು ಗ್ರಾಮದಲ್ಲಿರುವ ಸಿರಿಯೂರು ಸರ್ಕಾರಿ ಕೆರೆ, ನಾಗತಿಬೆಳಗಲು ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಸ್ಥಾನ ಸಮೀಪವಿರುವ ಸರ್ಕಾರಿ ಕೆರೆ ಮತ್ತು ಅರಳಿಕೊಪ್ಪ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗೊಂದಿ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ ಸಮೀಪವಿರುವ ವಿಶಾಲವಾದ ಖಾಲಿ ಜಾಗ ಆಕರ್ಷಣೀಯ ಪ್ರವಾಸಿಗರ ತಾಣವನ್ನಾಗಿಸುವ ಬಗ್ಗೆ ಮನವಿ ಸಲ್ಲಿಸಲಾಗಿದೆ. ಗೊಂದಿ ಜಲಾಶಯ ಆಕರ್ಷಣೀಯ ಪ್ರವಾಸಿಗರ ತಾಣವನ್ನಾಗಿಸುವ ಜೊತೆಗೆ ಭದ್ರಾ ಜಲಾಶಯ ಕೆಳಭಾಗದಲ್ಲಿರುವ ನೂರಾರು ಎಕರೆ ವಿಶಾಲವಾದ ಖಾಲಿ ಜಾಗದಲ್ಲಿ ಕೆಆರ್ಎಸ್ ಮಾದರಿ ಅಣೆಕಟ್ಟು ಹಾಗು ಬಿಳಕಿ ಗ್ರಾಮಪಂಚಾಯತಿ ವ್ಯಾಪ್ತಿಯ ಬೆಳಕಿ ಸರ್ಕಾರಿ ಕೆರೆಯನ್ನು ಪ್ರವಾಸಿಗರ ತಾಣವನ್ನಾಗಿ ಮಾಡಲು ಅಗತ್ಯವಿರುವ ಆರ್ಥಿಕ ನೆರವು ರಾಜ್ಯ ಸರ್ಕಾರದಿಂದ ಬಿಡುಗಡೆಗೊಳಿಸಿಕೊಡುವಂತೆ ಇತ್ತೀಚಿಗೆ ಸಂಸದರಿಗೆ ಸುವರ್ಣ ಮಹಿಳಾ ವೇದಿಕೆ ಮನವಿ ಸಲ್ಲಿಸಿಸಿತ್ತು. ಮನವಿಗೆ ಸ್ಪಂದಿಸಿರುವ ಸಂಸದರು, ಎಚ್.ಕೆ. ಪಾಟೀಲ್ರವರಿಗೆ ಪತ್ರ ಬರೆದು ಭದ್ರಾವತಿ ವಿಧಾನಸಭಾ ಕ್ಷೇತ್ರವನ್ನು ಕೇಂದ್ರ ಸರ್ಕಾರದಿಂದ ಪ್ರವಾಸಿ ತಾಣವನ್ನಾಗಿಸಲು ಕ್ರಮವಹಿಸಲಾಗಿದೆ. ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರದಿಂದಲೂ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಬಿ.ವಿ. ಗಿರಿನಾಯ್ಡು ತಿಳಿಸಿದ್ದಾರೆ.