ಸಾರಾಂಶ
ಹಾವೇರಿ: ನಗರದ ದೇವಗಿರಿ- ಯಲ್ಲಾಪುರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯ ನಂ. 3ಕ್ಕೆ ಮೂಲ ಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿ ಎಸ್ಎಫ್ಐ ಜಿಲ್ಲಾ ಘಟಕದ ನೇತೃತ್ವದಲ್ಲಿ ವಸತಿನಿಲಯದ ಎದುರು ಪ್ರತಿಭಟನೆ ನಡೆಸಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಪ್ರತಿಭಟನಾ ವಿದ್ಯಾರ್ಥಿಗಳು ಮಾತನಾಡಿ, ವಸತಿನಿಲಯ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯಗಳಿಲ್ಲದೆ ನರಳುವಂತಹ ಸ್ಥಿತಿ ನಿರ್ಮಾಣವಾಗಿದೆ. ವಸತಿನಿಲಯದಲ್ಲಿ ಸ್ವಚ್ಛತೆ ಸಮಸ್ಯೆ ವಿಪರೀತವಾಗಿದ್ದು, ಕೆಲವೊಮ್ಮೆ ವಿದ್ಯಾರ್ಥಿಗಳಿಗೆ ಊಟದ ಸಮಸ್ಯೆ ಎದುರಾಗಿದೆ. ಶಿಕ್ಷಣದ ಕನಸು ಹೊತ್ತು ಬಂದ ವಿದ್ಯಾರ್ಥಿಗಳು ಗುಣಮಟ್ಟದ ಆಹಾರ ಸಿಗದೆ ಕಾಲೇಜಿಗೆ ತೆರಳುವ ವಾತಾವರಣ ನಿರ್ಮಾಣವಾಗಿದೆ.
ವಸತಿನಿಲಯದ ವಿದ್ಯಾರ್ಥಿಗಳಿಗೆ ಪುಸ್ತಕ ದೊರೆತಿಲ್ಲ. ₹166 ವೆಚ್ಚದಲ್ಲಿ ನೀಡಬೇಕಾದ ಶುಚಿ ಸಂಭ್ರಮ ಕಿಟ್ ಕಡಿತ ಮಾಡಿರುವುದು ಸರಿಯಲ್ಲ. ಇಲ್ಲಿಯವರೆಗೆ ನೀಡುತ್ತಿದ್ದ ಕಿಟ್ಅನ್ನು ಮುಂದುವರಿಸಬೇಕು. ಅನುದಾನದ ನೆಪ ಹೇಳಿ ಕಡಿತ ಮಾಡುವುದು ನಿಲ್ಲಿಸಬೇಕು. ಯಾವುದೇ ಕ್ರೀಡಾ ಸಾಮಗ್ರಿಗಳನ್ನು ವಿತರಣೆ ಮಾಡಿಲ್ಲವೆಂದು ವಿದ್ಯಾರ್ಥಿಗಳು ಆರೋಪಿಸಿದರು. ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್. ಮಾತನಾಡಿ, ಕೂಡಲೇ ಹಾಸ್ಟೆಲ್ನಲ್ಲಿರುವ ಅವ್ಯವಸ್ಥೆಯನ್ನು ಸರಿಪಡಿಸಿ, ವಿದ್ಯಾರ್ಥಿಗಳ ಎಲ್ಲ ಬೇಡಿಕೆಗಳನ್ನು ಪೂರೈಸಲು ಇಲಾಖೆ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕು. ಕಿಟ್ ವಿತರಣೆ ತಾರತಮ್ಯ ಪರಿಹರಿಸಬೇಕು. ಆಯಾ ತಿಂಗಳ ಕಿಟ್ಅನ್ನು ಅದೇ ತಿಂಗಳಲ್ಲೇ ವಿತರಣೆ ಮಾಡಬೇಕು. ಯಾವುದೇ ಹಾಸ್ಟೆಲ್ಗಳಲ್ಲಿ ಬಾಕಿ ಇಟ್ಟುಕೊಳ್ಳಲು ಅವಕಾಶ ನೀಡಬಾರದು. ಕಿಟ್ ವಿತರಣೆಯಲ್ಲಿ ಲಕ್ಷಾಂತರ ರು. ಹಗರಣವಾಗಿದೆ ಎಂಬ ಅನುಮಾನ ಮೂಡುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ದೂರ ದಾಖಲಿಸಿಕೊಂಡು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.ಎಸ್ಎಫ್ಐ ಮುಖಂಡ ರೇವಣ್ಣಸಿದ್ದೇಶ, ಹಾಸ್ಟೆಲ್ ಘಟಕ ಅಧ್ಯಕ್ಷ ದಯಾನಂದ ಮಾತನಾಡಿದರು. ಈ ಸಂದರ್ಭದಲ್ಲಿ ಎಸ್ಎಫ್ಐ ಘಟಕ ಕಾರ್ಯದರ್ಶಿ ಅರವಿಂದ ಆಡೂರ, ಜಯೇಶ, ನಂದೀಶ ಬಿ., ಗಣೇಶ ಎಚ್., ಸುದರ್ಶನ್ ಕೆ., ಕಿರಣ್ ಬಿ. ಸೇರಿದಂತೆ ಇತರರು ಇದ್ದರು. ಹಾವು ಕಡಿದು ಮೃತಪಟ್ಟ ವಿದ್ಯಾರ್ಥಿಗಳ ಮನೆಗೆ ಬಿಇಒ ಭೇಟಿಹಾವೇರಿ: ತಾಲೂಕಿನ ಮೇವುಂಡಿ ಗ್ರಾಮದಲ್ಲಿ ಹಾವು ಕಡಿತದಿಂದ ಮೃತಪಟ್ಟ 5ನೇ ತರಗತಿ ವಿದ್ಯಾರ್ಥಿನಿ ಭಾರತಿ ಸಿದ್ದಪ್ಪ ಮಾಳಪ್ಪನವರ ಹಾಗೂ ಅಕಾಲಿಕವಾಗಿ ಮೃತಪಟ್ಟ ತೆರೆದಹಳ್ಳಿ ಗ್ರಾಮದ 10ನೇ ತರಗತಿ ವಿದ್ಯಾರ್ಥಿ ಬಸವರಾಜ ಕರಿಯಪ್ಪ ಚಿಟಿಗಿ ಅವರ ಮನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ಪಾಟೀಲ ಅವರು ಭೇಟಿ ನೀಡಿ, ಪಾಲಕರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಮೇವುಂಡಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವಿ.ಎಂ. ಗಡ್ಡದೇವರಮಠ ಹಾಗೂ ತೆರೆದಳ್ಳಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಮಲ್ಲಾಡದ, ಶಿಕ್ಷಣ ಸಂಯೋಜಕರಾದ ಹನುಮಗೌಡ್ರ ಹಾಗೂ ಭಗವಂತಗೌಡ್ರ ಮತ್ತು ಬಸವರಾಜ ಪೂಜಾರ ಇತರರು ಇದ್ದರು.