ಬಡವರಿಗೆ ಸೂರು ಸೇರಿದಂತೆ ಇತರೆ ಯೋಜನೆಗಳಿಗೆ ಅಗತ್ಯ ಅನುದಾನ ಮೀಸಡಲಿಡಬೇಕು

ಹೊಸಪೇಟೆ: ನಗರಸಭೆಯ 2026-​27ನೇ ಸಾಲಿನ ಆಯವ್ಯಯದಲ್ಲಿ ಆರೋಗ್ಯ, ಶಿಕ್ಷಣ, ಉದ್ಯೋಗ, ಬಡವರಿಗೆ ಸೂರು ಸೇರಿದಂತೆ ಇತರೆ ಯೋಜನೆಗಳಿಗೆ ಅಗತ್ಯ ಅನುದಾನ ಮೀಸಡಲಿಡಬೇಕು ಎಂದು ಒತ್ತಾಯಿಸಿ ಸ್ಲಂ ಜನರ ಸಂಘಟನೆ ಕರ್ನಾಟಕ ವಿಜಯನಗರ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಪೌರಾಯುಕ್ತ ಶಿವುಕುಮಾರ್ ಎರಗುಡಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.ನಗರಸಭೆಯ 2026-​27ನೇ ಸಾಲಿನ ಆಯವ್ಯಯ ತಯಾರಿಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ ಸ್ಲಂ ಜನರ ಸಂಘಟನೆ ಕರ್ನಾಟಕ ವಿಜಯನಗರ ಜಿಲ್ಲಾ ಸಮಿತಿಯ ಪದಾಧಿಕಾರಿಗಳು, ನಗರಸಭೆಯ ಬಜೆಟ್ ಗೆ ಸಂಬಂಧಿಸಿದಂತೆ ಕೆಲವೊಂದು ಸಲಹೆ ಸೂಚನೆಗಳನ್ನು ನೀಡಿದರು.

ಮಾರಣಾಂತಿಕ ಕಾಯಿಲೆಗಳಾದ ಹೃದಯ ಕಾಯಿಲೆ, ಕ್ಯಾನ್ಸರ್, ಕಿಡ್ನಿ, ಲಿವರ್ ಸಮಸ್ಯೆ ಇತ್ಯಾದಿಗಳ ಚಿಕಿತ್ಸೆಗೆ ಸಹಾಯಧನ ಮೀಸಲಿಡಬೇಕು. ಆಕಸ್ಮಿಕ ಅಗ್ನಿ ಅವಘಡಗಳು, ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಪ್ರಾಣ ಹಾನಿ, ಗಾಯ, ಮನೆಗಳಿಗೆ ಹಾನಿಗಳಾದ ಸಂದರ್ಭದಲ್ಲಿ ಅನುದಾನ ಮೀಸಲಿಡಬೇಕು. ಎಂ.ಪಿ ಪ್ರಕಾಶ ಕಲಾಮಂದಿರವನ್ನು ಪುನಶ್ಚೇತನಗೊಳಿಸಿ ನಾಗರಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಶುಲ್ಕ ನಿಗದಿಪಡಿಸಿ ಲೋಕಾರ್ಪಣೆಗೊಳಿಸಬೇಕು. ನಿವೇಶನ ಹಾಗೂ ವಸತಿ ರಹಿತರಿಗೆ ಸೂರು ಕಲ್ಪಿಸಲು ಅನುದಾನ ಮೀಸಲಿಡಬೇಕು. ಬಸವಣ್ಣ ಕಾಲುವೆಯ ಸ್ವಚ್ಛತೆ ಮತ್ತು ತ್ಯಾಜ್ಯ ಹಾಕದಂತೆ ಕ್ರಮ ವಹಿಸಬೇಕು ಎಂದರು.

ಘೋಷಿತವಾದ ಖಾಸಗಿ ಸ್ಲಂಗಳನ್ನು ನಗರಸಭೆ ಸುಪರ್ದಿಗೆ ತೆಗೆದುಕೊಂಡು ಅಭಿವೃದ್ಧಿಪಡಿಸಬೇಕು. ಕಸ ವಿಂಗಡಣೆ ಹಾಗೂ ರಿಸೈಕ್ಲಿಂಗ್ ಬಗ್ಗೆ ನೂತನ ತಂತ್ರಜ್ಞಾನ ಅಳವಡಿಸಲು ಕ್ರಮ ವಹಿಸಬೇಕು. ಡಾ.ಪುನೀತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣವನ್ನು ಅಭಿವೃದ್ಧಿಗೊಳಿಸಿ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಕ್ರಮ ವಹಿಸಬೇಕು ಎಂದರು.

ನಿರುದ್ಯೋಗ ಯುವಕ, ಯುವತಿಯರು ಹಾಗೂ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿಗೆ ಉದ್ಯೋಗಾವಕಾಶಗಳನ್ನು ರೂಪಿಸಬೇಕು. ನಗರದ ಜನಸಂಖ್ಯೆಗನುಣವಾಗಿ ಡಿ ಗ್ರೂಪ್ ನೌಕರರನ್ನು ನೇಮಿಸಬೇಕು. ಸ್ಲಂಗಳ ಸರ್ವತೋಮುಖ ಅಭಿವೃದ್ಧಿಗೆ ಮೂಲ ಸೌಕರ್ಯಗಳಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದರು.

ಸಮಿತಿ ಮುಖಂಡರಾದ ತನ್ವೀರ್ ಅಹಮದ್, ಎನ್. ವೆಂಕಟೇಶ್, ಗುತ್ತಿ ಕೈಲಾಸ್, ಶೇಖ್ ಮೆಹಬೂಬ್ ಬಾಷಾ, ಕಾಗಿ ಉಮೇಶ್, ಇಸ್ಮಾಯಿಲ್, ವಕೀಲರಾದ ಸಾದಿಕ್ ಬಾಷಾ, ನೂರ್ ಜಹಾನ್, ಜಾಫ್ರೀನ್, ಲತಾ ಹಾಗೂ ಸುಧಾಬಾಯಿ ಇದ್ದರು.