ರಾಮನಗುಡ್ಡ ಕೆರೆಗೆ ಕಾವೇರಿ ನದಿಯಿಂದ ಪೈಪ್ ಲೈನ್ ಮೂಲಕ ನೀರು ತುಂಬುತ್ತಿರುವುದರಿಂದ ರೈತರು ನಾಲೆಯ ರಾಡಿ ಮತ್ತು ಗಿಡಗಂಟಿಗಳನ್ನು ಸ್ವಚ್ಛಗೊಳಿಸಿ ಶಿವರಾತ್ರಿ ಹಬ್ಬಕ್ಕೆ ನಾಲೆಗೆ ನೀರು ಬಿಡುಗಡೆಗೊಳಿಸುವಂತೆ ಒತ್ತಾಯಿಸಿದ್ದಾರೆ.
ಕನ್ನಡಪ್ರಭ ವಾರ್ತೆ, ಹನೂರು
ರಾಮನಗುಡ್ಡ ಕೆರೆಗೆ ಕಾವೇರಿ ನದಿಯಿಂದ ಪೈಪ್ ಲೈನ್ ಮೂಲಕ ನೀರು ತುಂಬುತ್ತಿರುವುದರಿಂದ ರೈತರು ನಾಲೆಯ ರಾಡಿ ಮತ್ತು ಗಿಡಗಂಟಿಗಳನ್ನು ಸ್ವಚ್ಛಗೊಳಿಸಿ ಶಿವರಾತ್ರಿ ಹಬ್ಬಕ್ಕೆ ನಾಲೆಗೆ ನೀರು ಬಿಡುಗಡೆಗೊಳಿಸುವಂತೆ ಒತ್ತಾಯಿಸಿದ್ದಾರೆ.ತಾಲೂಕಿನ ರಾಮನಗುಡ್ಡ ಕೆರೆಗೆ ಜನವರಿ 16ರಂದು ಶಾಸಕ ಎಂ.ಆರ್. ಮಂಜುನಾಥ್ ಕಾವೇರಿ ನದಿಯಿಂದ ಪೈಪ್ ಲೈನ್ ಮೂಲಕ ಬೂದು ಬಾಳು ಗ್ರಾಮದ ಬಳಿ ಚಾಲನೆ ನೀಡಿ ಗ್ರಾಮದಿಂದ ಎರಡೂವರೆ ಕಿಲೋಮೀಟರ್ 24 ಚೆಕ್ ಡ್ಯಾಮ್ ಗಳು ತುಂಬಿ ರಾಮನಗುಡ್ಡ ಕೆರೆಗೆ ನೀರು ಹರಿದು ಬಂದು ಶೇಕಡ 40ರಷ್ಟು ಕೆರೆಯಲ್ಲಿ ನೀರು ಸಂಗ್ರಹವಾಗಿದೆ.
ಮಹಾಶಿವರಾತ್ರಿ ಹಬ್ಬಕ್ಕೆ ಕೆರೆಯ ನೀರನ್ನು ನಾಲೆಯ ಮೂಲಕ ನೀರು ಬಿಟ್ಟು ರೈತರ, ಜನ ಜಾನುವಾರುಗಳಿಗೆ ಅನುಕೂಲವಾಗಲಿ ಎಂದು ರೈತರು ಶಾಸಕ ಎಂಆರ್ ಮಂಜುನಾಥ್ ಅವರನ್ನು ನೀರು ಬಿಡಲು ಮನವಿ ಮಾಡಿದ್ದಾರೆ.ಈ ಹಿನ್ನೆಲೆ ನಾಲಾ ಸ್ವಚ್ಛತೆಗೆ ರೈತರೇ ಸ್ವತಹ ಸ್ವಯಂ ಪ್ರೇರಣೆಯಿಂದ ರಾಮನಗುಡ್ಡ ಕೆರೆ ತಳಭಾಗದಲ್ಲಿ ಬರುವ 40 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿರುವ ನಾಲೆಯನ್ನು ಸ್ವಚ್ಛಗೊಳಿಸಲು ಮುಂದಾಗಿದ್ದು ಈ ಭಾಗದ ಯಡರಹಳ್ಳಿ ದೊಡ್ಡಿ, ಚಿಂಚಳ್ಳಿ, ಮಣಗಳ್ಳಿ ಹಾಗೂ ತೋಮಿಯಾರ್ ಪಾಳ್ಯ, ಬೈರನತ್ತ, ಹಣಗಳ್ಳಿ ದೊಡ್ಡಿ ಸೇರಿದಂತೆ ವಿವಿಧ ಗ್ರಾಮಗಳಿಗೆ ನಾಲೆಯಲ್ಲಿ ನೀರು ಹರಿದರೆ ಅನುಕೂಲದಾಯಕವಾಗಲಿದೆ.
ಕಳೆದ 40 ವರ್ಷಗಳಿಂದ ಬರಿದಾಗಿದ್ದ ರಾಮನಗುಡ್ಡ ಕೆರೆ ಬೀರು ತುಂಬಿತ್ತಿರುವುದರಿಂದ ಈ ಭಾಗದ ರೈತರ ಕನಸು ನನಸಾಗಿದೆ ಜೊತೆಗೆ ರೈತರ ದಶಕಗಳ ಬೇಡಿಕೆ ಈಡೇರಿದಂತಾಗಿದ್ದು ನೀರಾವರಿ ಕಲ್ಪಿಸಲು ಶಾಸಕ ಎಂ.ಆರ್ ಮಂಜುನಾಥ್ ಅವರು ಪರಿಶ್ರಮದಿಂದ ಈ ಭಾಗದ ರೈತರಿಗೆ ಅನುಕೂಲದಾಯಕವಾಗಿದೆ ಎಂದು ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.