ಸಾರಾಂಶ
ಕೇಂದ್ರ ಸರ್ಕಾರ ಮೆಕ್ಕೆಜೋಳ ಬೆಳೆಗೆ ಬೆಂಬಲ ಬೆಲೆಯಾಗಿ ₹ 2400 ನಿಗದಿ ಮಾಡಬೇಕು ಮತ್ತು ರಾಜ್ಯ ಸರ್ಕಾರದ ವಂತಿಗೆ ₹ 600 ಸೇರಿಸಿ ಒಟ್ಟು ₹ 3 ಸಾವಿರ ದರ ನಿಗದಿಪಡಿಸಿ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದಿಂದ ರೈತರು ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಸೋಮವಾರ ಮನವಿ ಸಲ್ಲಿಸಿದರು.
ಹಾವೇರಿ: ಕೇಂದ್ರ ಸರ್ಕಾರ ಮೆಕ್ಕೆಜೋಳ ಬೆಳೆಗೆ ಬೆಂಬಲ ಬೆಲೆಯಾಗಿ ₹ 2400 ನಿಗದಿ ಮಾಡಬೇಕು ಮತ್ತು ರಾಜ್ಯ ಸರ್ಕಾರದ ವಂತಿಗೆ ₹ 600 ಸೇರಿಸಿ ಒಟ್ಟು ₹ 3 ಸಾವಿರ ದರ ನಿಗದಿಪಡಿಸಿ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದಿಂದ ರೈತರು ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಸೋಮವಾರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡ ದಿಳ್ಳೆಪ್ಪ ಮಣ್ಣೂರ ಮಾತನಾಡಿ, ಕಳೆದ ಮೂರು ನಾಲ್ಕು ವರ್ಷಗಳಿಂದ ಬೆಳೆಗಳು ರೈತರ ಕೈಗೆ ಸಿಗದಂತಾಗಿವೆ. ಬೀಜ, ಗೊಬ್ಬರ, ಟ್ರ್ಯಾಕ್ಟರ್ ಮತ್ತು ಕೃಷಿ ಕಾರ್ಮಿಕರ ಕೂಲಿ ದರ ಹೆಚ್ಚಳವಾಗಿದೆ. ಅಲ್ಪಸ್ವಲ್ಪ ಬೆಳೆದ ಗೋವಿನಜೋಳ ಕ್ವಿಂಟಲ್ಗೆ 1600- 1700 ರು. ದರವಿದ್ದು, ಇದರಿಂದ ರೈತರು ಆರ್ಥಿಕವಾಗಿ ನಷ್ಟ ಅನುಭವಿಸುವಂತಾಗಿದೆ. ಕಳೆದ ವರ್ಷ ಪ್ರತಿ ಕ್ವಿಂಟಲ್ ಮೆಕ್ಕೆಜೋಳಕ್ಕೆ ರು.2400 -2800 ಬೆಲೆ ಸಿಕ್ಕಿತ್ತು. ಈ ವರ್ಷ ರೈತರ ಸ್ಥಿತಿ ಚಿಂತಾಜನಕವಾಗಿದೆ. ರೈತರ ಆರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಸರ್ಕಾರ ಪ್ರತಿ ತಾಲೂಕಿನಲ್ಲಿ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಒತ್ತಾಯಿಸಿದರು.ಇನ್ನೋರ್ವ ರೈತ ಮುಖಂಡ ಶಿವಯೋಗಿ ಹೊಸಗೌಡ್ರ ಮಾತನಾಡಿ, ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿದ್ದು, ಅಳಿದುಳಿದ ಬೆಳೆ ಕೈಗೆ ಬರುವ ವೇಳೆಗೆ ದರ ಕುಸಿತವಾಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ, ಇದರಿಂದ ರೈತರು ಬೇಸತ್ತಿದ್ದೇವೆ. ನ.24ರ ಒಳಗಾಗಿ ರೈತರ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಅನಿವಾರ್ಯವಾಗಿ ರಸ್ತೆ ತಡೆ, ಹೆದ್ದಾರಿ ಬಂದ್ನಂತಹ ವಿವಿಧ ರೀತಿಯ ಪ್ರತಿಭಟನೆಗಳನ್ನು ಮಾಡಬೇಕಾಗುತ್ತದೆ. ಅಂದು ಜಿಲ್ಲೆಯ ಲಕ್ಷಾಂತರ ರೈತರು ಹಾವೇರಿಯ ಡಿಸಿ ಕಚೇರಿ ಮುಂದೆ ಅಹೋರಾತ್ರಿ ಅನಿರ್ದಿಷ್ಟಾವಧಿ ರೈತಾಂದೋಲನ ಚಳುವಳಿ ನಡೆಸುತ್ತೇವೆ ಎಂದು ಎಚ್ಚರಿಸಿದರು.ಮನವಿ ಸಲ್ಲಿಕೆ ವೇಳೆ ರಾಜು ತರ್ಲಗಟ್ಟ, ಶಿವಬಸಪ್ಪ ಗೋವಿ, ಈರಣ್ಣ ಚಕ್ರಸಾಲಿ, ಹರ್ಷ ಕಡೇಮನಿ, ಹರೀಶ ಪಾಟೀಲ, ಶಿವನಗೌಡ ಕರೇಗೌಡ್ರ, ಬೀರಪ್ಪ ಮನ್ನಂಗಿ, ಪುಟ್ಟಪ್ಪ ಕೂರಗುಂದ, ಯಲ್ಲಪ್ಪ ಮಲ್ಲೂರು ಮುಂತಾದವರು ಇದ್ದರು. ಮನವಿಯನ್ನು ಹಾವೇರಿ ಶಿರಸ್ತೇದಾರ ನಾಗರಾಜ ಕನವಳ್ಳಿ ಸ್ವೀಕರಿಸಿದರು.
;Resize=(128,128))
;Resize=(128,128))
;Resize=(128,128))