ಶಿಗ್ಗಾಂವಿ: ಹುಬ್ಬಳಿ-ಶಿರಸಿ-೪ ಮಾರ್ಗ ಮಧ್ಯದಲ್ಲಿ ಬರುವ ತಾಲೂಕಿನ ತಡಸ ಗ್ರಾಮದಲ್ಲಿನ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗ ಪದಾಧಿಕಾರಿಗಳು - ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರಗೆ ಮನವಿ ಸಲ್ಲಿಸಿದರು.

ತಾಲೂಕಿನ ತಡಸ ಗ್ರಾಮದಲ್ಲಿ ಅನೇಕ ಹೋರಾಟಗಳಿಂದ ಹುಬ್ಬಳ್ಳಿ - ಶಿರಸಿ ರಸ್ತೆ ಕಾಮಗಾರಿ ಮಂಜೂರಾಗಿ ಚಾಲನೆಗೊಂಡು ವರ್ಷ ಕಳೆದಿದೆ. ರಸ್ತೆ ಪಕ್ಕದಲ್ಲಿ ಫುಟ್‌ಪಾತ್ ನಿರ್ಮಾಣ ಆಗಿಲ್ಲ. ಬೀದಿದೀಪಗಳನ್ನೂ ಅಳವಡಿಸಲಾಗಿಲ್ಲ. ಇದರಿಂದ ಪಾದಚಾರಿಗಳಿಗೆ ಬಹಳ ತೊಂದರೆಗಳಾಗುತ್ತಿದೆ. ಈ ಬಗ್ಗೆ ಹಲವು ಬಾರಿ ನಮ್ಮ ಸಂಘಟನೆಯಿಂದ ಮೌಖಿಕ ಹಾಗೂ ಲಿಖಿತವಾಗಿ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಗುತ್ತಿಗೆದಾರನ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿಗ್ಗಾಂವಿ ತಾಲೂಕಿನ ತಡಸ ಗ್ರಾಮದಲ್ಲಿ ಹಾಯ್ದು ಹೋಗಿರುವ ಹುಬ್ಬಳ್ಳಿ - ಶಿರಸಿ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿ ಕರವೇ ಸ್ವಾಭಿಮಾನಿ ಬಳಗದ ಪದಾಧಿಕಾರಿಗಳು ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಅವರಿಗೆ ಮನವಿ ಸಲ್ಲಿಸಿ ಕಾಮಗಾರಿ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇನ್ನು ೧೫ ದಿನಗಳ ಒಳಗೆ ಕಾಮಗಾರಿ ಆರಂಭಗೊಳ್ಳದೇ ಇದ್ದರೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗದಿಂದ ತಮ್ಮ ಕಾರ್ಯಾಲಯದ ಎದುರು ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಬಳಗದ ತಾಲೂಕು ಘಟಕದ ಅಧ್ಯಕ್ಷ ಶಂಕರ ಬಡಿಗೇರ, ಜಿಲ್ಲಾ ಘಟಕದ ಅಧ್ಯಕ್ಷ ಯಲ್ಲಪ್ಪ ಮರಾರಿ, ಯೂಸುಫ್ ಸೈಕಲಗಾರ, ಶಿವು ಕಮ್ಮಾರ, ಸಿದ್ದಯ್ಯ ಹಿರೇಮಠ, ರಾಜಾಭಕ್ಷ ಮಾನೇಗಾರ, ದೇವರಾಜ ಈಳಿಗೇರ, ಮಹಾವೀರ ಹಳ್ಳಿಯವರ, ರಾಮಣ್ಣ ಕಮ್ಮಾರ, ಮೌಲಾಲಿ ಹುಚ್ಚುಸಾಬನವರ, ಪರಶುರಾಮ ತಿಮ್ಮಾಪುರ, ಮಾಲತೇಶ ಮಳೆಗಟ್ಟಿ, ನಾಗರಾಜ ಕರೆಕನ್ನಮ್ಮನವರ ಇದ್ದರು.