ಬ್ಯಾಡಗಿಯಲ್ಲಿ ಮುಖ್ಯರಸ್ತೆ ಅಗಲೀಕರಣ ಹಿನ್ನೆಲೆಯಲ್ಲಿ ಬಸ್ ನಿಲ್ದಾಣಗಳು ದೂರವಾಗಿದ್ದು, ಕೂಡಲೇ ಪಟ್ಟಣದ ವ್ಯಾಪ್ತಿಯಲ್ಲಿ 2 ಸ್ಟೇಜ್‌ಗೆ ಬಸ್ ಸಾರಿಗೆ ಬಸ್ ವ್ಯವಸ್ಥೆ ಜಾರಿಗೊಳಿಸುವಂತೆ ಆಗ್ರಹಿಸಿ ಪಟ್ಟಣದ ಹೆಸ್ಕಾಂ ವಿದ್ಯುತ್ ಸಲಹಾ ಸಮಿತಿ ಸದಸ್ಯರು ಸೋಮ ವಾರ ಸಾರಿಗೆ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.

ಬ್ಯಾಡಗಿ: ಮುಖ್ಯರಸ್ತೆ ಅಗಲೀಕರಣ ಹಿನ್ನೆಲೆಯಲ್ಲಿ ಬಸ್ ನಿಲ್ದಾಣಗಳು ದೂರವಾಗಿದ್ದು, ಕೂಡಲೇ ಪಟ್ಟಣದ ವ್ಯಾಪ್ತಿಯಲ್ಲಿ 2 ಸ್ಟೇಜ್‌ಗೆ ಬಸ್ ವ್ಯವಸ್ಥೆ ಜಾರಿಗೊಳಿಸುವಂತೆ ಆಗ್ರಹಿಸಿ ಪಟ್ಟಣದ ಹೆಸ್ಕಾಂ ವಿದ್ಯುತ್ ಸಲಹಾ ಸಮಿತಿ ಸದಸ್ಯರು ಸೋಮವಾರ ಸಾರಿಗೆ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. ಬಳಿಕ ಮಾತನಾಡಿದ ಸದಸ್ಯ ಹೈದರಲಿ ಪಟ್ಟಣದಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದ್ದು ದಿನದಿಂದ ದಿನಕ್ಕೆ ಪಟ್ಟಣ ವಿಸ್ತಾರವಾಗುತ್ತಿದೆ. ಆದರೆ ಇಷ್ಟೊಂದು ಜನಸಂಖ್ಯೆ ಹೊಂದಿರುವ ಪಟ್ಟಣದಲ್ಲಿ ಇಂದಿಗೂ ಸಂಚಾರಿ ಬಸ್ ವ್ಯವಸ್ಥೆ ಇಲ್ಲದಿರುವುದು ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟು ಮಾಡುತ್ತಿದೆ ಎಂದರು.2 ಸ್ಟೇಜ್‌ಗೆ ಬಸ್ ಓಡಿಸಿ: ಸುಮಾರು 12 ಕಿ.ಮೀ.ವ್ಯಾಪ್ತಿಗೆ ಸೀಮಿತಗೊಳಿಸಿ ಪಟ್ಟಣದ ವಿವಿಧ ಬಡಾವಣೆಗಳು, ಸರ್ಕಾರಿ ಕಚೇರಿಗಳು, ಆಸ್ಪತ್ರೆಗಳು ಹಾಗೂ ವಾಣಿಜ್ಯ ಪ್ರದೇಶಗಳು ರೈಲ್ವೆ ನಿಲ್ದಾಣ ಒಂದೂವರೆ ಕಿಲೋಮೀಟರ್ ಅಂತರದಲ್ಲಿದ್ದು, ವಯೋ ವೃದ್ಧರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಪ್ರತಿದಿನ ಸಂಚಾರಕ್ಕೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ನಗರ ಸಾರಿಗೆ ಬಸ್ ಆರಂಭಿಸಿದರೆ ಜನಸಾಮಾನ್ಯರಿಗೆ ಬಹಳ ಅನುಕೂಲವಾಗಲಿದೆ ಎಂದರು.ವಿದ್ಯಾರ್ಥಿಗಳಿಗೆ ಸುರಕ್ಷಿತ ಪ್ರಯಾಣವಾಗುತ್ತಿಲ್ಲ: ಸದಸ್ಯ ಮಂಜುನಾಥ ಹಂಜಗಿ ಮಾತನಾಡಿ, ಪಟ್ಟಣದ ಬಸ್ ನಿಲ್ದಾಣದಿಂದ ವಿವಿಧ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ, ನಗರ ಸಂಚಾರ ಬಸ್ ಸೇವೆ ಆರಂಭಿಸಿದರೆ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ಸುರಕ್ಷಿತ ಪ್ರಯಾಣ ಸೌಲಭ್ಯ ದೊರೆಯಲಿದೆ. ಅಲ್ಲದೇ ಪಟ್ಟಣದಿಂದ ಸುಮಾರು 3.5 ಕಿಲೋಮೀಟರ್ ದೂರದಲ್ಲಿರುವ ರೈಲ್ವೆ ನಿಲ್ದಾಣಕ್ಕೆ ಹೋಗಲು ವಯೋವೃದ್ಧರು, ಅನಾರೋಗ್ಯ ಪೀಡಿತರು, ಮಹಿಳೆಯರು ಹಾಗೂ ಮಕ್ಕಳಿಗೆ ಬಹಳ ಕಷ್ಟವಾಗುತ್ತಿದೆ. ಪಟ್ಟಣ ಸಾರಿಗೆ ವ್ಯವಸ್ಥೆ ಜಾರಿಯಾದರೆ ಸಾರ್ವಜನಿಕರ ಬಹುದಿನಗಳ ಬೇಡಿಕೆ ಈಡೇರಿದಂತಾಗುತ್ತದೆ. ಪಟ್ಟಣದಲ್ಲಿ ದಿನೇದಿನೇ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು, ಟ್ರಾಫಿಕ್ ಸಮಸ್ಯೆಯೂ ಹೆಚ್ಚಾಗುತ್ತಿದೆ. ಪರಿಸರ ಸ್ನೇಹಿ ಹಾಗೂ ಜನಪರ ದೃಷ್ಟಿಯಿಂದ ನಗರ ಸಾರಿಗೆ ಬಸ್ ವ್ಯವಸ್ಥೆ ಅಗತ್ಯವಾಗಿದೆ ಎಂದರು. ಈ ವೇಳೆ ಸಮಿತಿ ಸದಸ್ಯರಾದ ಮಾಲತೇಶ ಆಡಿನವರ, ಮಾಲತೇಶ ಶಿಡ್ಲಣ್ಣನವರ ಇದ್ದರು.