ಮಹ್ಮದ ಯುಸುಫ ನಮಾಜಿ ಮಾತನಾಡಿ, ನಗರದ ಹೊರವಲಯದ ಕಾರವಾರ- ಬಳ್ಳಾರಿ ರಸ್ತೆಯ ಖಬರಸ್ತಾನ ಜಾಗದ ಕಟ್ಟಡದಲ್ಲಿ ಮಹಿಳಾ ಕಾಲೇಜನ್ನು ಪ್ರಾರಂಭಿಸಲು ಅಧಿಕಾರಿಗಳು ಉದ್ದೇಶಿಸಿದ್ದು, ಇದು ಸರಿಯಲ್ಲ ಎಂದರು.
ಗದಗ: ಸುರಕ್ಷಿತ ಕಟ್ಟಡದಲ್ಲಿ ಅಲ್ಪಸಂಖ್ಯಾತರ ಮಹಿಳಾ ಕಾಲೇಜು ಪ್ರಾರಂಭಿಸಲು ಆಗ್ರಹಿಸಿ ಮುಸ್ಲಿಂ ಸಮಾಜದ ವೇದಿಕೆಯಿಂದ ನಗರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಲಾಯಿತು.
ರಾಜ್ಯ ಸರ್ಕಾರದಿಂದ ಗದುಗಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೂಲಕ ಅಲ್ಪಸಂಖ್ಯಾತರ ವಿದ್ಯಾರ್ಥಿನಿಯರಿಗೆ ಶೈಕ್ಷಣಿಕ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಸರ್ಕಾರಿ ಅಲ್ಪಸಂಖ್ಯಾತರ ಮಹಿಳಾ ಕಾಲೇಜನ್ನು ಮಂಜೂರು ಮಾಡಿರುವುದನ್ನು ಸ್ವಾಗತಿಸುತ್ತೇವೆ.ಆದರೆ ನಗರದ ಹೊರವಲಯದಲ್ಲಿ ಹಾಗೂ ಕಾಲೇಜಿಗೆ ಹೋಗಲು ವಾಹನಗಳ ವ್ಯವಸ್ಥೆ ಇಲ್ಲದ ಪ್ರದೇಶದಲ್ಲಿ ನೂತನ ಮಹಿಳಾ ಅಲ್ಪಸಂಖ್ಯಾತರ ಕಾಲೇಜನ್ನು ಪ್ರಾರಂಭಿಸಲು ಉದ್ದೇಶಿಸಿರುವ ಅಧಿಕಾರಿಗಳ ಕ್ರಮವನ್ನು ಕೈಬಿಟ್ಟು ಸುರಕ್ಷಿತ ಕಟ್ಟಡದಲ್ಲಿ ಅಲ್ಪಸಂಖ್ಯಾತರ ಮಹಿಳಾ ಕಾಲೇಜು ಪ್ರಾರಂಭಿಸಲು ಒತ್ತಾಯಿಸಲಾಯಿತು.
ಈ ವೇಳೆ ವೇದಿಕೆ ಅಧ್ಯಕ್ಷ ಮಹ್ಮದ ಯುಸುಫ ನಮಾಜಿ ಮಾತನಾಡಿ, ನಗರದ ಹೊರವಲಯದ ಕಾರವಾರ- ಬಳ್ಳಾರಿ ರಸ್ತೆಯ ಖಬರಸ್ತಾನ ಜಾಗದ ಕಟ್ಟಡದಲ್ಲಿ ಮಹಿಳಾ ಕಾಲೇಜನ್ನು ಪ್ರಾರಂಭಿಸಲು ಅಧಿಕಾರಿಗಳು ಉದ್ದೇಶಿಸಿದ್ದು, ಇದು ಸರಿಯಲ್ಲ. ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಯಾವುದೇ ಕಾರಣಕ್ಕೂ ನೂತನ ಮಹಿಳಾ ಕಾಲೇಜನ್ನು ಅಸುರಕ್ಷಿತ ವಾತಾವರಣ ಇರುವ ಪ್ರದೇಶದಲ್ಲಿ ಪ್ರಾರಂಭಿಸಲು ಬಿಡುವುದಿಲ್ಲ ಎಂದರು.ನಗರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಅನೇಕ ವಸತಿ ಶಾಲೆಗಳನ್ನು ನಡೆಸಲಾಗುತ್ತಿದೆ. ನಗರದ ಮಧ್ಯಭಾಗದಲ್ಲಿರುವ ಯಾವುದಾದರೂ ಒಂದು ವಸತಿ ಶಾಲೆಯನ್ನು ಸ್ಥಳಾಂತರಿಸಿ ಈ ಕಟ್ಟಡದಲ್ಲಿ ಮಹಿಳಾ ಕಾಲೇಜನ್ನು ಪ್ರಾರಂಭಿಸಬೇಕೆಂದು ಒತ್ತಾಯಿಸಿದರು.
ಈ ವೇಳೆ ವೇದಿಕೆ ಕಾರ್ಯದರ್ಶಿ ಇಮ್ತಿಯಾಜ ಆರ್. ಮಾನ್ವಿ, ಮುಖಂಡರಾದ ಬಾಬಾಜಾನ ಬಳಗಾನೂರ, ಎಂ.ಎಂ. ಮಾಳೆಕೊಪ್ಪ, ಅನ್ವರ ಶಿರಹಟ್ಟಿ, ರಫೀಕ ಜಮಾಲಖಾನವರ, ಯುಸುಫಸಾಬ ಕೊಟ್ಟೂರ, ಮುನ್ನಾ ಶೇಖ, ಅಬ್ದುಲರಜಾಕ ಶಿರಹಟ್ಟಿ, ಎಂ.ಬಿ. ನದಾಫ, ಸುಲೇಮಾನ ಮಾಳೆಕೊಪ್ಪ, ಮೌಲಾಸಾಬ ಗಚ್ಚಿ, ಅಬ್ಬು ಅಣ್ಣಿಗೇರಿ, ಆಶೀಫ್ ದಂಡಿನ, ಮುಜಫರ ಮುಲ್ಲಾ, ಬಾಬಾಜಾನ ಕಿತ್ತೂರ, ಆರೀಫ್ ಹುನಗುಂದ, ಉಸ್ಮಾನ ಮಾಳೆಕೊಪ್ಪ, ಜಂದಿಸಾಬ ಢಾಲಾಯತ, ಖಾಜಾಸಾಬ ಬಳ್ಳಾರಿ ಹಾಗೂ ಪದಾಧಿಕಾರಿಗಳು ಇದ್ದರು.