ಒಳ ಮೀಲು ಜಾರಿ ಸಂಬಂದ ಕೇಂದ್ರದ ಮೇಲೆ ಒತ್ತಡ ಹಾಕುವಂತೆ ಆಗ್ರಹಿಸಿ ಸಿಪಿಎಂ ವತಿಯಿಂದ ಸಂಸದ ಗೋವಿಂದ ಎಂ.ಕಾರಜೋಳರವರ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮೀಸಲಾತಿ ಪ್ರಮಾಣ ಹೆಚ್ಚಳ ಜಾರಿಗೆ ಭಾರತ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮುತುವರ್ಜಿ ವಹಿಸುವಂತೆ ಭಾರತ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಲೋಕಸಭಾ ಸದಸ್ಯ ಎಂ.ಗೋವಿಂದ ಕಾರಜೋಳರವರ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿತು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೀಸಲಾತಿ ಪ್ರಮಾಣ ಹೆಚ್ಚಿಸುವ ಕರ್ನಾಟಕದ ತೀರ್ಮಾನಕ್ಕೆ ಕೇಂದ್ರ ಬಿಜೆಪಿ-ಎನ್‍ಡಿಎ ಸರ್ಕಾರ ಕೂಡಲೆ ಅನುಮೋದನೆ ನೀಡಬೇಕು. ಇದನ್ನು ಸಂವಿಧಾನದ ಷೆಡ್ಯೂಲ್-9ರಲ್ಲಿ ಸೇರಿಸಿ ಕೇಂದ್ರದಲ್ಲಿ ಇರುವಂತೆ ಶೇ.17 ಮತ್ತು ಶೇ.7ರ ಜಾರಿಗೆ ಅನುವು ಮಾಡಿಕೊಡಬೇಕು. ಇದಕ್ಕಾಗಿ ರಾಜ್ಯದ ಸಂಸದರು ಕೇಂದ್ರದ ಮೇಲೆ ಒತ್ತಡದ ಹಾಕಬೇಕು ಎಂದು ಆಗ್ರಹಿಸಿದರು.

ಷೆಡ್ಯೂಲ್-9 ಕ್ಕೆ ಸೇರ್ಪಡೆಗೊಳಿಸದಿರುವುದು ಇಂದಿನ ಒಟ್ಟು ಸಮಸ್ಯೆಯ ಒಂದು ಪ್ರಧಾನ ಅಂಶವಾಗಿದೆ ಎನ್ನುವುದನ್ನು ಗಂಭೀರವಾಗಿ ಪರಿಗಣಿಸಬೇಕು. ನಿರುದ್ಯೋಗ ಸಮಸ್ಯೆಯನ್ನು ಅರ್ಥಮಾಡಿಕೊಂಡು ಒಕ್ಕೂಟ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ ಮಾಡಬೇಕು. ಬ್ಯಾಕ್‍ಲಾಗ್ ಹುದ್ದೆಗಳನ್ನು ಯಾವುದೇ ಸಂದರ್ಭದಲ್ಲಿ ಸಾಮಾನ್ಯ ಗುಂಪಿಗೆ ವರ್ಗಾಯಿಸಬಾರದು. ಹಾಗೆಯೇ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಮೂರು ಲಕ್ಷ ಉದ್ಯೋಗಗಳನ್ನು ತುಂಬಬೇಕು ಎಂದುಒತ್ತಾಯಿಸಿದರು

ಇತ್ತೀಚಿನ ವರ್ಷಗಳಲ್ಲಿ ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳು ಮತ್ತು ಸಂಸ್ಥೆಗಳಲ್ಲಿ ಖಾಯಂ ನೇಮಕಾತಿ ಸ್ಥಗಿತಗೊಂಡಿದೆ. ಇದರಿಂದ ವಾಸ್ತವವಾಗಿ ಮೀಸಲಾತಿಯೇ ಇಲ್ಲದಂತಾಗಿ ಎಲ್ಲಾ ಸಾರ್ವಜನಿಕ ರಂಗಗಳಲ್ಲು ಖಾಯಂ ಉದ್ಯೋಗಗಳನ್ನು ಭರ್ತಿ ಮಾಡಿ ಮೀಸಲಾತಿಯನ್ನು ರಕ್ಷಿಸುವಂತೆ ಪ್ರತಿಭಟನಾನಿರತರು ಒತ್ತಾಯಿಸಿದರು. ರೋಸ್ಟರ್ ಬಿಂದುವಿನಲ್ಲಿರುವ ಲೋಪದೋಷಗಳನ್ನು ಮೊದಲು ಸರಿಪಡಿಸಿ ಎಲ್ಲಾ ಜಾತಿಯವರಿಗೂ ಒಳ ಮೀಸಲಾತಿಯಡಿ ಅನ್ವಯವಾಗುವಂತೆ ನೇರ ನೇಮಕಾತಿಯಾಗಬೇಕೆಂದು ಆಗ್ರಹಿಸಿದರು.

ಸಂಘಟನೆಯ ಡಿ.ಎಂ.ಮಲಿಯಪ್ಪ, ಟಿ.ತಿಪ್ಪೇಸ್ವಾಮಿ, ಟಿ.ನಿಂಗಣ್ಣ, ಎಚ್.ಒ.ನಾಗರಾಜ್, ಸಿ.ಕೆ.ಗೌಸ್‍ಪೀರ್, ನೇರ್ಲಹಳ್ಳಿ ನಾಗರಾಜ್, ಹೆಚ್.ಓ.ನಾಗರಾಜ್, ಶಿವಮ್ಮ, ವೆಂಕಟೇಶ್, ಪ್ರಭು ಕೆ.ನಾಗರಾಜ್, ಜಯಣ್ಣ ಪ್ರತಿಭಟನೆ ನೇತೃತ್ವ ವಹಿಸಿದ್ದರು.