ಹೊಸಪೇಟೆ: ಖನಿಜ ನಿಧಿ ಹಂಚಿಕೆಯಲ್ಲಿ ವಿಜಯನಗರ ಜಿಲ್ಲೆ ಬಗ್ಗೆ ಸರ್ಕಾರವು ಮಲತಾಯಿ ಧೋರಣೆ ತಳೆದಿದ್ದು, ಜಿಲ್ಲೆಗೂ ಸಮರ್ಪಕವಾಗಿ ಜಿಲ್ಲಾ ಖನಿಜ ನಿಧಿಯನ್ನು ಬಳಸಬೇಕು ಎಂದು ಒತ್ತಾಯಿಸಿ ವಿಜಯನಗರ ಜಿಲ್ಲೆ ಪ್ರಜಾಜಾಗೃತಿ ವೇದಿಕೆಯ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.ಜಿಲ್ಲಾ ಖನಿಜ ನಿಧಿ ಎಂಬುವುದು ಖನಿಜ ಸಂಪತ್ತಿನ ಗಣಿಗಾರಿಕೆಯಿಂದ ಪರಿಣಾಮಕ್ಕೆ ಒಳಗಾಗುವ ಪ್ರದೇಶಗಳ ಅಭಿವೃದ್ಧಿಗಾಗಿ ರಚಿಸಲಾದ ವಿಶೇಷ ನಿಧಿಯಾಗಿದೆ. ಗಣಿಗಾರಿಕೆ ಲೀಸ್ ಹೊಂದಿರುವ ಕಂಪನಿಗಳು ಹಾಗೂ ಮಾಲೀಕರು ಸರ್ಕಾರಕ್ಕೆ ಪಾವತಿಸುವ ರಾಜಸ್ವದ ಮೇಲೆ ವಿಧಿಸುವ ಹೆಚ್ಚುವರಿ ತೆರಿಗೆಯಿಂದ ಜಿಲ್ಲಾ ಖನಿಜ ನಿಧಿಯನ್ನು ಸೃಷ್ಟಿಸಲಾಗಿದೆ. ಖನಿಜ ನಿಧಿ ಹಂಚಿಕೆಯಲ್ಲಿ ವಿಜಯನಗರ ಜಿಲ್ಲೆ ಬಗ್ಗೆ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದರು.

ನೂತನವಾಗಿ ವಿಜಯನಗರ ಜಿಲ್ಲೆ ರಚನೆಯಾಗಿ 5 ವರ್ಷಗಳಾದರೂ ಜಿಲ್ಲೆಗೆ ಅತ್ಯಲ್ಪ ಪ್ರಮಾಣದ ಖನಿಜ ನಿಧಿ ಹಂಚಿಕೆಯಾಗುತ್ತಿದೆ. ಭೌಗೋಳಿಕವಾಗಿ ಸಂಡೂರು ತಾಲೂಕಿನ ಗಣಿ ಅದಿರು ಬೆಟ್ಟಗಳು ಹಾಗೂ ಹೊಸಪೇಟೆ ತಾಲೂಕಿನ ಬೆಟ್ಟಗಳು ಪರಸ್ಪರ ಬೆಸೆದುಕೊಂಡಿರುವುದರಿಂದ ವಿಜಯನಗರ ಜಿಲ್ಲೆಗೆ ಹೆಚ್ಚಿನ ಅನುದಾನ ನೀಡಬೇಕಿದೆ. ಜಿಲ್ಲಾ ಖನಿಜ ನಿಧಿಯ ಅನುದಾನವನ್ನು ರಸ್ತೆ ನಿರ್ಮಾಣಗಳ ಜೊತೆಗೆ ಪರಿಸರ ಸಂರಕ್ಷಣೆ, ಶಿಕ್ಷಣ, ಆರೋಗ್ಯ, ವಸತಿ, ಹಾಸ್ಟೆಲ್‌ಗಳ ನಿರ್ಮಾಣ ಹೀಗೆ ಮಾನವ ಸಂಪನ್ಮೂಲದ ಗುಣಮಟ್ಟ ಹೆಚ್ಚಿಸುವ ಮತ್ತು ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕ ಬೆಳವಣಿಗೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲಾ ಖನಿಜ ನಿಧಿಯನ್ನು ಜಿಲ್ಲೆಯೂ ಬಳಸಬೇಕು ಎಂದು ಜಿಲ್ಲೆ ಪ್ರಜಾ ಜಾಗೃತಿ ವೇದಿಕೆ ಅಧ್ಯಕ್ಷ ಯು.ಆಂಜನೇಯಲು, ವೇದಿಕೆಯ ಪ್ರಧಾನ ಕಾರ್ಯದರ್ಶಿ ವೈ.ಯಮುನೇಶ್, ವೇದಿಕೆಯ ಪ್ರಮುಖರಾದ ಈ.ಪ್ರಶಾಂತ್, ನಜೀರ್‌ಸಾಬ್, ಪಿ.ನಾಗರಾಜ್, ಎನ್.ವಾಸುದೇವಪ್ಪ, ಡಿ.ವಿಶ್ವನಾಥ, ಕಾಶಿನಾಥ ಕುಲ್ಕರ್ಣಿ, ಎ.ಭೀಮಪ್ಪ, ಎಂ.ಶಂಕ್ರಪ್ಪ, ಕೆ.ವಿ. ರಾಮಲಿ, ಟಿ.ನಾಗೇಂದ್ರಪ್ಪ, ಎಂ.ರಾಜಶೇಖರ, ಶಾಂತಪ್ಪ, ಮಲ್ಲಿಕಾರ್ಜುನ, ಬಿ.ವಿರುಪಾಕ್ಷಪ್ಪ, ಶೇಖ್‌ಮೆಹಬೂಬ್‌ಬಾಷ, ರಂಗಣ್ಣ, ಜಿ.ರಾಘವೇಂದ್ರ, ಜಿ.ರಾಮಚಂದ್ರ, ಜೆ.ಪಿ.ಬೆನ್ನೂರು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಹೊಸಪೇಟೆಯ ವಿಜಯನಗರ ಜಿಲ್ಲೆ ಪ್ರಜಾಜಾಗೃತಿ ವೇದಿಕೆಯ ಪದಾಧಿಕಾರಿಗಳು ವಿಜಯನಗರ ಜಿಲ್ಲೆಗೂ ಸಮರ್ಕವಾಗಿ ಜಿಲ್ಲಾ ಖನಿಜ ನಿಧಿಯನ್ನು ಬಳಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.