ಸಾರಾಂಶ
ಶಿವಮೊಗ್ಗ: ನಾಮಫಲಕದಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಬಳಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದಿಂದ ಮಾ.5ರಂದು ಶಿವಮೊಗ್ಗ ನಗರದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಕರವೇ ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷೆ ಜ್ಯೋತಿ ಸೋಮಶೇಖರ್ ಹೇಳಿದರು.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಡ್ಡಾಯ ಕನ್ನಡ ನಾಮಫಕದ ಬಗ್ಗೆ ಮಾ.5ರಂದು ರಾಜ್ಯಾದಾದ್ಯಂತ ಹೋರಾಟ ಮಾಡಬೇಕು ಎಂಬ ಟಿ.ಎ.ನಾರಾಯಗೌಡ ಅವರ ಸೂಚನೆಯಂತೆ ಶಿವಮೊಗ್ಗದಲ್ಲೂ ಪ್ರತಿಭಟನೆ ನಡೆಯಲಿದೆ. ಅಂದು ಬೆಳಗ್ಗೆ ಶಿವಪ್ಪ ನಾಯಕ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರಗೆ ಕರವೇ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ ಎಂದರು. ಈ ವೇಳೆ ಅಂಗಡಿ ಮುಂಗ್ಗಟ್ಟುಗಳಲ್ಲಿ ಕನ್ನಡ ನಾಮಫಲಕದಲ್ಲಿ ಶೇ.60 ರಷ್ಟು ಕನ್ನಡ ಭಾಷೆ ಅಳವಡಿಸಿರಬೇಕು. ಇಲ್ಲವಾದಲ್ಲಿ ಅಂತಹ ನಾಮಫಲಕವನ್ನು ಕಿತ್ತು ಹಾಕಲಾಗುವುದು, ಮಸಿ ಬಳಿಯುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.ನಮ್ಮ ನಾಡಿಗೆ ಬಂದು ಇಲ್ಲೆ ಬದುಕಿ, ಇಲ್ಲಿಯ ಅನ್ನ ತಿಂದು, ನೀರು ಕುಡಿದು ವ್ಯವಹಾರ ಮಾಡಿಕೊಂಡು ಲಾಭ ಮಾಡಿಕೊಂಡರೂ ಕನ್ನಡ ಬಳಸಲು ಆಗಲ್ಲ ಎಂದರೆ ನಿಮ್ಮ ರಾಜ್ಯಕ್ಕೆ ಹೋಗಿ, ನಾಡ ದ್ರೋಹಿಗಳಿಗೆ ಇಲ್ಲಿ ಅವಕಾಶ ಇಲ್ಲ. ಇದರ ವಿರುದ್ಧ ಎಲ್ಲ ರೀತಿಯ ಹೋರಾಟ ಮಾಡುತ್ತೇವೆ. ಕನ್ನಡಕ್ಕಾಗಿ ಜೈಲಿಗೆ ಹೋಗಲು ನಾವು ಸಿದ್ದ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕರಾವೇ ಜಿಲ್ಲಾಧ್ಯಕ್ಷ ಎಚ್.ಮಂಜುನಾಥ್, ಪ್ರಮುಖರಾದ ಪ್ರಶಾಂತ್, ಪ್ರತಾಪ್, ನೀಲಾ ವಿರುಪಾಕ್ಷ, ಜಾನವಿ, ಗೀತಾ, ನಿರ್ಮಲ ಮತ್ತಿತರು ಇದ್ದರು.
- - - (-ಸಾಂದರ್ಭಿಕ ಚಿತ್ರ)