ಸಾರಾಂಶ
ಹಿರಿಯೂರು ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ನಾಗತಿಹಳ್ಳಿ ರಮೇಶ್ ಅವರಿಗೆ ಬುದ್ಧ ಪ್ರಜ್ಞೆ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕನ್ನಡಪ್ರಭ ವಾರ್ತೆ ಹಿರಿಯೂರು
ಬಂಡವಾಳ ಶಾಹಿಗಳ ಹಿಡಿತದಲ್ಲಿ ಪ್ರಜಾಪ್ರಭುತ್ವದ ಕನಸುಗಳು ಸಾಯುತ್ತಿವೆ ಎಂದು ನಾಗತಿಹಳ್ಳಿ ರಮೇಶ್ ಅಭಿಪ್ರಾಯಪಟ್ಟರು.ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ನಡೆದ ಬುದ್ಧ ಪ್ರಜ್ಞೆ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ- 2025ರ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಕರ್ನಾಟಕದ ರಾಜಕಾರಣದಲ್ಲಿ ಈ ಹಿಂದೆ ಇದ್ದಂತ ಧೀಮಂತ ನಾಯಕರ ನಡೆನುಡಿಗಳನ್ನು ಮರೆತಿರುವ ಇಂದಿನ ಬಂಡವಾಳಶಾಹಿ ರಾಜಕಾರಣಿಗಳು ವಂಶಾವಳಿ ರಾಜಕಾರಣವನ್ನು ಮುನ್ನೆಲೆಗೆ ತಂದಿದ್ದಾರೆ. ಸ್ವಾರ್ಥಕ್ಕೆ ಬಿದ್ದು ಆಸ್ತಿ ಹಣ ಮಾಡುವುದರಲ್ಲಿ ಮುಳುಗಿ ಹೋಗಿದ್ದಾರೆ. ಬಂಡವಾಳಶಾಹಿಗಳ ಹಿಡಿತದಲ್ಲಿ ಪ್ರಜಾಪ್ರಭುತ್ವದ ಆದರ್ಶದ ಕನಸುಗಳು ಸಾಯುತ್ತಿವೆ. ಕೆ.ಎಚ್.ರಂಗನಾಥ್, ನಜೀರ್ ಸಾಬ್, ಲಕ್ಷ್ಮಿಸಾಗರ್, ಶಾಂತವೇರಿ ಗೋಪಾಲಗೌಡ ರಂತಹ ಆದರ್ಶ ರಾಜಕಾರಣಿಗಳು ಇಂದು ಸೃಷ್ಟಿಯಾಗುತ್ತಿಲ್ಲ. ನಾನು ಸಮಾಜವಾದಿ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯನವರು ಒಬ್ಬ ಕರ್ತವ್ಯನಿರತ ಅಧಿಕಾರಿಯ ಮೇಲೆ ಕೈ ಎತ್ತುವಷ್ಟು ಸಮಾಜವಾದಿಯಾಗಿದ್ದಾರೆ. ಇಂದು ಬರೀ ಜಾತಿ ರಾಜಕಾರಣ ಮತ್ತು ವ್ಯಕ್ತಿ ಪೂಜೆಯ ಗುಂಪುಗಾರಿಕೆ ರಾಜಕಾರಣ ಮುನ್ನೆಲೆಗೆ ಬಂದು ಮೇಲ್ಜಾತಿ ರಾಜಕಾರಣಿಗಳು ದಲಿತ ಮತ್ತು ಹಿಂದುಳಿದವರ ಹೆಸರೇಳಿಕೊಂಡು ತಮ್ಮ ಬದುಕು ಭದ್ರ ಮಾಡಿಕೊಳ್ಳುತ್ತಿದ್ದಾರೆ. ಸಮಾಜದ ಕೊನೆಯ ಪೈರಿಗೆ ನೀರುಣಿಸುವ ಕಾರ್ಯಕ್ರಮಗಳು ಕಡಿಮೆಯಾಗುತ್ತಿವೆ. ಯಾವಾಗ ರಾಜಕಾರಣದಲ್ಲಿ ಆದರ್ಶ ಮಾನವೀಯತೆ ಕಾಣೆಯಾಗುವುದೋ ಆಗ ರಾಜಕಾರಣ ಒಂದು ಹಣ ಮಾಡುವ ದಂಧೆ ಆಗಿಬಿಡುತ್ತದೆ ಎಂದರು.ಕಾರ್ಯಕ್ರಮದಲ್ಲಿ 25 ಸಾಧಕರಿಗೆ ಜೀವನಾಡಿ ಪ್ರಶಸ್ತಿಯನ್ನು ಹಾಗೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಈ ಸಂದರ್ಭದಲ್ಲಿ ಸಚಿವ ಡಿ. ಸುಧಾಕರ್,ಮಾಜಿ ಸಚಿವೆ ಮೋಟಮ್ಮ, ನರಸಿಂಹಮೂರ್ತಿ,ಎಸ್. ವಿಜಯ ಕುಮಾರ್, ಎಂ ರೇವಣ ಸಿದ್ದಪ್ಪ, ಡಿ. ಹನುಮಂತರಾಯ, ಕೃಷ್ಣರೆಡ್ಡಿ,ಎನ್. ನರಸಿಂಹಮೂರ್ತಿ, ಹೆಚ್ ಅರ್ ಗೋದಾವರಿ,ಖಾದಿ ರಮೇಶ್, ಶಿವರಂಜಿನಿ ಮುಂತಾದವರು ಹಾಜರಿದ್ದರು.