ಮಂಗಳೂರು: ಮಾದಕ ವಸ್ತುಗಳ ನಿರ್ಮೂಲನೆಗೆ ಪೊಲೀಸ್ ಇಲಾಖೆಯ ಜತೆ ಸಾರ್ವಜನಿಕ ಸಹಭಾಗಿತ್ವ ಅಗತ್ಯ. ವಿದ್ಯಾರ್ಥಿಗಳು ಮಾದಕ ವ್ಯಸನದ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ರಾಯಭಾರಿಗಳಾಗಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ.ಖಾದರ್ ಹೇಳಿದರು.
ಅವರು ಗುರುವಾರ ಮಂಗಳೂರು ನಗರ ಪೊಲೀಸ್ ಮತ್ತು ದ.ಕ. ಜಿಲ್ಲಾ ಪೊಲೀಸ್ ವತಿಯಿಂದ ನಗರದ ಫಾದರ್ ಮುಲ್ಲರ್ ಸಭಾಂಗಣದಲ್ಲಿ ಆಯೋಜಿಸಲಾದ ಮಾದಕ ವಸ್ತು ವಿರುದ್ಧದ ‘ಆಪರೇಷನ್ ರೈಸ್’ ಮತ್ತು ‘ಬೇಡ ಬ್ರೋ’ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ದೇಶದ ಜನಸಂಖ್ಯೆಯಲ್ಲಿ ಶೇ.70ರಷ್ಟು ಯುವ ಸಮುದಾಯವಿದೆ. ಈ ಸಮುದಾಯವನ್ನು ಮಾದಕ ಜಾಲಕ್ಕೆ ಬೀಳಿಸಿದರೆ ದೇಶವನ್ನೇ ನಾಶ ಪಡಿಸಬಹುದು ಎಂದು ಕೆಲವೊಂದು ಶಕ್ತಿಗಳು ಪ್ರಯತ್ನಿಸುತ್ತಿವೆ. ಹಾಗಾಗಿ ಇದರ ವಿರುದ್ಧ ಸಂಘಟಿತ ಹೋರಾಟದ ಅಗತ್ಯವಿದೆ ಎಂದರು.
ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮಾತನಾಡಿ, ಈ ವರ್ಷ ಮಾದಕ ವಸ್ತು ಸೇವನೆ ತಪಾಸಣೆಗೆ ಒಳಪಡಿಸಲಾಗಿರುವ ವಿದ್ಯಾರ್ಥಿ ಪೈಕಿ ಶೇ.0.5ರಷ್ಟು ಮಂದಿಯಲ್ಲಿ ಪಾಸಿಟಿವ್ ಬಂದಿದೆ. ಶೈಕ್ಷಣಿಕ ವರ್ಷದ ಅಂತ್ಯದ ವೇಳೆ ಶೇ.50ರಷ್ಟು ಕ್ಯಾಂಪಸ್ ಗಳನ್ನು ಮಾದಕ ವಸ್ತು ಮುಕ್ತ ಮಾಡುವ ಗುರಿ ಹೊಂದಲಾಗಿದೆ ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ., ಜಿಪಂ ಸಿಇಒ ನರ್ವಾಡೆ ವಿನಾಯಕ ಕರ್ಬಾರಿ, ಮನಪಾ ನೂತನ ಆಯುಕ್ತ ರಾಹುಲ್ ರತ್ನಂ ಪಾಂಡೆ, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ರವಿಶಂಕರ್ ಕೆ., ಸಿಎಆರ್ ಡಿಸಿಪಿ ಉಮೇಶ್ ಪಿ., ಪ್ರೊಬೆಷನರಿ ಐಎಎಸ್ ಅಧಿಕಾರಿ ಅರ್ಚಿತ್ ಡೋಂಗ್ರೆ, ಎಸಿಪಿಗಳಾದ ನಜ್ಮಾ ಫಾರೂಕಿ, ರವೀಶ್ ನಾಯಕ್, ಗೀತಾ ಕುಲಕರ್ಣಿ, ವಿಜಯ ಕ್ರಾಂತಿ ಇದ್ದರು.
ಉಪ ಪೊಲೀಸ್ ಆಯುಕ್ತ ಕಾನೂನು ಸುವ್ಯವಸ್ಥೆ ಮಿಥುನ್ ಎಚ್.ಎನ್. ಸ್ವಾಗತಿಸಿದರು. ಅನುರಾಗ್ ನಿರೂಪಿಸಿದರು.