ಸಾರಾಂಶ
ನಮ್ಮ ಸುತ್ತಮುತ್ತಲಿನ ಸ್ವಚ್ಛತೆಯೇ ಡೆಂಘೀ ನಿಯಂತ್ರಣಕ್ಕೆ ಪರಿಣಾಮಕಾರಿ ಮಾರ್ಗ. ಡೆಂಘೀ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು
ಯಲ್ಲಾಪುರ: ನಮ್ಮ ಸುತ್ತಮುತ್ತಲಿನ ಸ್ವಚ್ಛತೆಯೇ ಡೆಂಘೀ ನಿಯಂತ್ರಣಕ್ಕೆ ಪರಿಣಾಮಕಾರಿ ಮಾರ್ಗ. ಡೆಂಘೀ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎಂದು ಕಾರವಾರದ ಜಿಲ್ಲಾ ಸಾಂಕ್ರಾಮಿಕ ರೋಗ ನಿಯಂತ್ರಣಾಧಿಕಾರಿ ಡಾ. ಕ್ಯಾಪ್ಟನ್ ರಮೇಶ ರಾವ್ ಹೇಳಿದರು.ಅವರು ಜೂ.೫ರಂದು ಪಟ್ಟಣದ ಸ.ಪ್ರ.ದ. ಕಾಲೇಜಿನಲ್ಲಿ ಡೆಂಗೀ ನಿರ್ಮೂಲನ ಜಾಗೃತಿ ದಿನದಂದು ಉಪನ್ಯಾಸ ನೀಡುತ್ತಿದ್ದರು.
ಡೆಂಘೀ ರೋಗವು ಈಡಿಸ್ ಈಜಿಪ್ತಿ ಸೊಳ್ಳೆಗಳಿಂದ ಹರಡುತ್ತದೆ. ಈ ಸೊಳ್ಳೆಗಳು ನಿಂತ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ನಮ್ಮ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಹಳೆಯ ಟೈರ್ಗಳು, ಪ್ಲಾಸ್ಟಿಕ್ ಬಾಟಲಿಗಳು, ಹೂವಿನ ಕುಂಡಗಳಲ್ಲಿ ನೀರು ಸಂಗ್ರಹವಾಗದಂತೆ ಎಚ್ಚರ ವಹಿಸುವುದು ಡೆಂಘೀ ನಿಯಂತ್ರಣಕ್ಕೆ ಅತ್ಯಂತ ಪರಿಣಾಮಕಾರಿಯಾಗಿದೆ ಎಂದರು.ಡೆಂಘೀ ರೋಗದ ಲಕ್ಷಣಗಳು, ಮುಂಜಾಗ್ರತಾ ಕ್ರಮಗಳು ಮತ್ತು ಚಿಕಿತ್ಸೆಯ ಬಗ್ಗೆಯೂ ವಿಸ್ತೃತವಾಗಿ ಮಾತನಾಡಿ, "ಜ್ವರ, ತಲೆನೋವು, ಕೀಲು ನೋವು, ಮೈ ಕೈ ನೋವು, ಕಣ್ಣುಗಳ ಹಿಂದೆ ನೋವು ಇವು ಡೆಂಗಿಯ ಪ್ರಮುಖ ಲಕ್ಷಣಗಳಾಗಿವೆ. ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು " ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಆರ್.ಡಿ ಜನಾರ್ಧನ್ ಮಾತನಾಡಿ, ಡೆಂಘೀ ನಿರ್ಮೂಲನೆ ಕೇವಲ ಆರೋಗ್ಯ ಇಲಾಖೆಯ ಜವಾಬ್ದಾರಿಯಲ್ಲ, ಅದು ಸಮಾಜದ ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ. ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಈ ಜಾಗೃತಿ ಕಾರ್ಯಕ್ರಮದ ಮೂಲಕ ಪಡೆದ ಮಾಹಿತಿಯನ್ನು ತಮ್ಮ ಮನೆ, ನೆರೆಹೊರೆಗೆ ತಲುಪಿಸುವ ಕಾರ್ಯ ಮಾಡಬೇಕು ಎಂದರು.ವೇದಾ ಭಟ್ಟ ಪ್ರಾರ್ಥಿಸಿದರು. ಗೀತಾ ಸಿದ್ದಿ ಸ್ವಾಗತಿಸಿದರು. ಕಾವ್ಯಶ್ರೀ ಮರಾಠಿ ನಿರ್ವಹಿಸಿದರು. ವೇದ ಕುಕ್ಕಲೂರು ವಂದಿಸಿದರು.
ಸ.ಪ್ರ.ದ. ಕಾಲೇಜಿನಲ್ಲಿ ಡೆಂಘೀ ನಿರ್ಮೂಲನ ಜಾಗೃತಿ ದಿನಾಚರಣೆ ನಡೆಯಿತು.