ಸಾರಾಂಶ
ಕನ್ನಡಪ್ರಭ ವಾರ್ತೆ ಚಿಂಚೋಳಿ
ತಾಲೂಕಿನಲ್ಲಿ ಪ್ರಸಕ್ತ ಸಾಲಿನ ಜನೇವರಿ ತಿಂಗಳಿಂದ ಜೂನ್ ತಿಂಗಳವರೆಗೆ ಒಟ್ಟು ೧೫೧ ಡೆಂಘೀ ಜ್ವರದ ಬಗ್ಗೆ ರೋಗಿಗಳ ರಕ್ತ ಮಾದರಿ ಪರೀಕ್ಷೆಯನ್ನು ಮಾಡಲಾಗಿದೆ. ಇದರಲ್ಲಿ ೧೦ ಜನರಿಗೆ ಡೆಂಘೀ ಜ್ವರ ಕಾಣಿಸಿಕೊಂಡಿದ್ದು ಎಲ್ಲ ರೋಗಿಗಳಿಗೆ ಕಲಬುರಗಿ ಜೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಿಸಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಮಹಮ್ಮ ಗಫಾರ ಅಹೆಮದ ತಿಳಿಸಿದ್ದಾರೆ.ಅವರು ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ರಕ್ತ ಮಾದರಿ ಸಂಗ್ರಹಣೆ ಮಾಡಿ ಅದನ್ನು ಜಿಲ್ಲಾ ಪ್ರಯೋಗಾಲಯಕ್ಕೆ ಕಳಹಿಸಲಾಗಿದೆ. ಕುಂಚಾವರ ೩, ಕೋಡ್ಲಿ ಸೇರಿತಾಂಡಾ ೧, ಹೂವಿನಹಳ್ಳಿ ೧, ಚಿಮ್ಮನಚೋಡ ೧, ಮೋಘಾ ೧, ರಾಯಕೋಡ ೨, ನಿಡಗುಂದಾ ಒಬ್ಬರಿಗೆ ಡೆಂಘೀ ಜ್ವರ ಕಾಣಿಸಿಕೊಂಡಿರುವುದರಿಂದ ಎಲ್ಲರಿಗೂ ಚಿಕಿತ್ಸೆ ನೀಡಲಾಗಿದೆ.
ಚಿಂಚೋಳಿ, ಚಂದಾಪೂರ ಅವಳಿ ನಗರದಲ್ಲಿ ೧೨ ಜನ ರೋಗಿಗಳ ರಕ್ತ ಮಾದರಿ ಪರೀಕ್ಷೆಯನ್ನು ಮಾಡಲಾಗಿದೆ ಅವುಗಳ ವರದಿ ಬರಬೇಕಾಗಿದೆ. ಹಳ್ಳಿಗಳಲ್ಲಿ ಜನರಿಗೆ ಸೊಳ್ಳೆಗಳ ನಾಶಪಡಿಸುವುದಕ್ಕಾಗಿ ಧೂಮೀಕರಣಗೊಳಿಸಲು ಮತ್ತು ಚರಂಡಿ ಶುಚಿಗೊಳಿಸುವುದು ಮತ್ತು ತೆಗ್ಗು ಪ್ರದೇಶದಲ್ಲಿ ಹೊಲಸ ನೀರು ನಿಲ್ಲದೇ ಜಾಗೃತಿಗೊಳಿಸಲಾಗುತ್ತಿದೆ ಎಂದು ಹೇಳಿದರು.ಸಾಲೇಬೀರನಳ್ಳಿ, ಚಿಮ್ಮನಚೋಡ, ಐನಾಪೂರ, ಚಂದನಕೇರಾ, ಮೋಘಾ, ಕೋಡ್ಲಿ, ರುದನೂರ, ನಿಡಗುಂದಾ, ಮಿರಿಯಾಣ, ರಟಕಲ ಪ್ರಾಥಮಿಕ ಆರೊಗ್ಯ ಕೇಂದ್ರ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಾದ ಸುಲೇಪೇಟ, ಕುಂಚಾವರಂ ಗಡಿಕೇಶ್ವರ ಕೇಂದ್ರಗಳ ಆರೋಗ್ಯ ನಿರೀಕ್ಷಣಾಧಿಕಾರಿಗಳು ಮತ್ತು ಆರೋಗ್ಯ ಸಂರಕ್ಷಣಾಧಿಕಾರಿಗಳು, ಆಶಾ ಕಾರ್ಯಕರ್ತರು ಪ್ರತಿಯೊಂದು ಮನೆಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸುತ್ತಿದ್ದಾರೆ. ತಿಂಗಳ ಮೊದಲ ಮತ್ತು ಕೊನೆಯ ಶುಕ್ರವಾರ ದಿವಸ ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ ಕುಡಿಯುವ ನೀರು, ಟೈರ್, ನೀರಿನ ಟ್ಯಾಂಕ ಪರಿಶೀಲನೆ ನಡೆಸಿ ಜನರಿಗೆ ಡೆಂಘೀ ಜ್ವರ ಮತ್ತು ಮಲೇರಿಯಾ, ಕಾಲರಾ, ವಾಂತಿಭೇಧಿ ರೋಗಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲಾಗಿದೆ ಎಂದು ಟಿಎಚ್ಒ ಹೇಳಿದರು.
ತಾಲೂಕಿನ ಪ್ರತಿಯೊಂದು ಗ್ರಾಪಂ ಪಿಡಿಓ, ಕಾರ್ಯದರ್ಶಿ, ಪಂಪ್ ಆಪರೇಟರ್, ಬಿಲ್ ಕಲೆಕ್ಟರ್ ಕಾರ್ಮಿಕರಿಗೆ ಆರೋಗ್ಯ ಇಲಾಖೆಯಿಂದ ಡೆಂಘೀ ಜ್ವರದ ಬಗ್ಗೆ ಮತ್ತು ಸೊಳ್ಳೆ ಉತ್ಪತ್ತಿ ಆಗದಂತೆ ನೋಡಿಕೊಳ್ಳುವುದು, ಅಲ್ಲದೇ ಶುದ್ಧ ನೀರು ಸೇವನೆ ಕುರಿತು ಆರೋಗ್ಯ ಇಲಾಖೆಯ ನಿಯಮಗಳನ್ನು ಜನರಿಗೆ ತಿಳಿಸಿಲಾಗಿದೆ ಎಂದು ಹೇಳಿದರು.