ಮಂಗಳೂರು: ದ.ಕ. ಜಿಲ್ಲೆಯಲ್ಲಿ ಭೋವಿ ಜನಾಂಗದವರಿಗೆ ಭೋವಿ ಜಾತಿ ಪ್ರಮಾಣ ಪತ್ರ ನಿರಾಕರಿಸಿದ್ದನ್ನು ವಿರೋಧಿಸಿ ಭೋವಿ ಯುವ ಮುಖಂಡ ಪವನ್ ಕುಮಾರ್ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಇತ್ತೀಚೆಗೆ ಮನವಿ ಸಲ್ಲಿಸಿ, ಮಧ್ಯಪ್ರವೇಶ ಮಾಡುವಂತೆ ಆಗ್ರಹಿಸಿದರು.ಪ್ರಸ್ತುತ ಜಿಲ್ಲೆಯಲ್ಲಿ 30,000 ಮಂದಿ ಭೋವಿ ಜನಾಂಗದವರಿದ್ದಾರೆ, ಅದರಲ್ಲಿ ತಂದೆಗೆ ಜಾತಿ ಪ್ರಮಾಣ ಪತ್ರ ನೀಡಿದರೆ ಮಕ್ಕಳಿಗೆ ನೀಡುವುದಿಲ್ಲ. ಮಕ್ಕಳಿಗೆ ನೀಡಿದರೆ ತಂದೆಗೆ ನೀಡುತ್ತಿಲ್ಲ ಹಾಗೂ ಅಧಿಕಾರಿಗಳು ಸರಿಯಾದ ಹಿಂಬರಹ ನೀಡದೆ ಇರುವುದರಿಂದ ತಾವು ಮಧ್ಯ ಪ್ರವೇಶಿಸಿ ಈ ಸಮಸ್ಯೆಯನ್ನು ಅತೀ ಶೀಘ್ರ ಬಗೆಹರಿಸಿಕೊಡಬೇಕಾಗಿ ಭೋವಿ ಸಮಾಜದ ಯುವ ಮುಖಂಡ ಪವನ್ ಕುಮಾರ್ ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಅವರಿಗೆ ಮನವಿ ಸಲ್ಲಿಸಿದರು.

ಕರ್ನಾಟಕದ ಅವಿಭಾಜ್ಯ ಜಿಲ್ಲೆಯಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸುಮಾರು 70,000 ಮಂದಿ ವಾಸವಿದ್ದು ಸುಮಾರು 7-8 ವರ್ಷಗಳಿಂದ ಭೋವಿ ಜನಾಂಗದವರಿಗೆ ಈ ಎರಡು ಜಿಲ್ಲೆಯಲ್ಲಿ ಜಾತಿ ಪ್ರಮಾಣ ಪತ್ರ ನೀಡುವುದನ್ನು ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ. ಇಡೀ ಕರ್ನಾಟಕದಲ್ಲಿ 31 ಜಿಲ್ಲೆಯಲ್ಲಿ ಏಕರೂಪದ ಕಾನೂನು ಇರುವಾಗ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾತಿ ಪ್ರಮಾಣ ಪತ್ರ ನೀಡುವುದನ್ನು ನಿರಾಕರಿಸುವುದು ಖಂಡನಿಯ.ಜಾತಿ ಪ್ರಮಾಣ ಪತ್ರ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅಧಿಕಾರಿಗಳು ಸರಿಯಾದ ಹಿಂಬರಹ ನೀಡದೇ ಇರುವುದು ಸರಿಯಲ್ಲ. ಇದೇ ರೀತಿ ಜಿಲ್ಲೆಯಲ್ಲಿ ಸಮಸ್ಯೆ ಮುಂದುವರೆದರೆ ಮುಂದೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು. ಹೀಗಾಗಿ ಜಿಲ್ಲಾಧಿಕಾರಿಗಳು ತುರ್ತಾಗಿ ಮಧ್ಯಪ್ರವೇಶಿಸಿ ಈ ಸಮಸ್ಯೆಯನ್ನು ಶೀಘ್ರ ಪರಿಹರಿಸಬೇಕಾಗಿ ಪವನ್ ಕುಮಾರ್ ಮನವಿಯಲ್ಲಿ ಒತ್ತಾಯಿಸಿದ್ದಾರೆ.