ಕುಂದಗೋಳ ತಾಲೂಕಿನಲ್ಲಿ ತೀವ್ರ ಬರ ಪರಿಸ್ಥಿತಿಯಿದೆ. ಆರಂಭದ ಅಲ್ಪಸ್ವಲ್ಪ ಮಳೆಯನ್ನು ನಂಬಿ ರೈತರು ಸಾಲ-ಸೋಲ ಮಾಡಿ ಬಿತ್ತನೆ ಮಾಡಿದ್ದರು. ಆದರೆ, ನಂತರ ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ಬಹುತೇಕ ಬೆಳೆಗಳು ಒಣಗಿವೆ. ರೈತರಿಗೆ ಬಿತ್ತನೆ ಮಾಡಿದ ವೆಚ್ಚವೂ ಸಿಗದಂತಾಗಿದೆ.

ಕುಂದಗೋಳ:

ಕುಂದಗೋಳ ತಾಲೂಕನ್ನು ಸೆ. 15ರೊಳಗೆ ಬರಪೀಡಿತ ಎಂದು ಘೋಷಿಸದಿದ್ದಲ್ಲಿ 16ರಿಂದ ವಿವಿಧ ರೈತ ಸಂಘಟನೆಗಳೊಂದಿಗೆ ಸೇರಿ ಪಕ್ಷಾತೀತವಾಗಿ ಹೋರಾಟ ನಡೆಸಲಾಗುವುದು ಎಂದು ಶಾಸಕ ಎಂ.ಆರ್‌. ಪಾಟೀಲ ಎಚ್ಚರಿಕೆ ನೀಡಿದ್ದಾರೆ. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ತೀವ್ರ ಬರ ಪರಿಸ್ಥಿತಿಯಿದೆ. ಆರಂಭದ ಅಲ್ಪಸ್ವಲ್ಪ ಮಳೆಯನ್ನು ನಂಬಿ ರೈತರು ಸಾಲ-ಸೋಲ ಮಾಡಿ ಬಿತ್ತನೆ ಮಾಡಿದ್ದರು. ಆದರೆ, ನಂತರ ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ಬಹುತೇಕ ಬೆಳೆಗಳು ಒಣಗಿವೆ. ರೈತರಿಗೆ ಬಿತ್ತನೆ ಮಾಡಿದ ವೆಚ್ಚವೂ ಸಿಗದಂತಾಗಿದೆ ಎಂದರು.

ತಾಲೂಕಿನ ವಾಸ್ತವ ಪರಿಸ್ಥಿತಿಯ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು, ಕೃಷಿ ಸಚಿವರು ಹಾಗೂ ಮುಖ್ಯಮಂತ್ರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಆದರೂ ತಾಂತ್ರಿಕ ನೆಪಗಳನ್ನು ಮುಂದಿಟ್ಟುಕೊಂಡು ಎರಡನೇ ಪಟ್ಟಿಯಲ್ಲೂ ಕುಂದಗೋಳ ತಾಲೂಕನ್ನು ಕೈಬಿಟ್ಟಿದ್ದಾರೆ. ಇದು ತಾಲೂಕಿನ ರೈತರಿಗೆ ಸರ್ಕಾರ ಮಾಡಿರುವ ಅನ್ಯಾಯ ಎಂದು ಆರೋಪಿಸಿದರು. ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರವಿದ್ದಾಗ ಕೇಂದ್ರದತ್ತ ಮುಖ ಮಾಡದೆ ರಾಜ್ಯ ಸರ್ಕಾರದ ವತಿಯಿಂದಲೇ ರೈತರಿಗೆ ತಕ್ಷಣದ ಪರಿಹಾರ ವಿತರಿಸಲಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಕೇಂದ್ರದ ಕಡೆಗೆ ಬೊಟ್ಟು ಮಾಡುತ್ತಾ ಕಾಲಹರಣ ಮಾಡುತ್ತಿದೆ. ರಾಜ್ಯದ ಖಜಾನೆ ಖಾಲಿಯಾಗಿರುವುದರಿಂದಲೇ ಬರ ಘೋಷಣೆ ಮಾಡಲು ಸರ್ಕಾರ ಮೀನಮೇಷ ಎಣಿಸುತ್ತಿದೆ ಎಂದರು.

ರೈತರ ಸಂಕಷ್ಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಕೂಡಲೇ ಬರಪೀಡಿತ ತಾಲೂಕು ಎಂದು ಘೋಷಿಸಬೇಕು. ಸೆ.15ರೊಳಗೆ ಬರ ಘೋಷಣೆ ಮಾಡದಿದ್ದರೆ ಸೆ.16ರಿಂದ ಹೋರಾಟ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ನಾಗನಗೌಡ ಸಾತ್ಮಾರ, ಮುಖಂಡ ನಾಗರಾಜ ದೇಶಪಾಂಡೆ, ಪ್ರಕಾಶ ಕುಬಿಹಾಳ, ಭರಮಣ್ಣಮುಗಳಿ, ಉಮೇಶ ಹೆಬಸೂರ, ಡಿ.ವೈ. ಲಕ್ಕನಗೌಡ, ಮಾಲತೇಶ ಶ್ಯಾಗೋಟಿ, ದಾನಪ್ಪ ಗಂಗಾಯಿ, ಗುರು ಪಾಟೀಲ್, ಪೃಥ್ವಿರಾಜ್ ಕಾಳೆ, ಈರಪ್ಪ ಕಲಕುಟಕರ, ಬಸವರಾಜ ಕೊಪ್ಪದ ಸೇರಿದಂತೆ ಹಲವರಿದ್ದರು.