ಹಾವೇರಿ: ಕರ್ತವ್ಯನಿರತ ಸರ್ಕಾರಿ ಅಧಿಕಾರಿ ಹಾಗೂ ನೌಕರರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು. ಅಂತಹ ಬೇನಾಮಿ ಮುಖಂಡರನ್ನು ಕರ್ನಾಟಕ ಪೊಲೀಸ್ ಕಾಯಿದೆಯಡಿ ಗಡಿಪಾರು ಮಾಡುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕದ ಪದಾಧಿಕಾರಿಗಳು ಗುರುವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ತಾಲೂಕುಗಳ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ವೃಂದ ಸಂಘಗಳ ನೌಕರರು ಪಾಲ್ಗೊಂಡು ವಿವಿಧ 30ಕ್ಕೂ ಹೆಚ್ಚು ಇಲಾಖೆಗಳ ಅಧಿಕಾರಿಗಳ ಮೇಲೆ ಹಲ್ಲೆ ಮಾಡುವ, ದೌರ್ಜನ್ಯ ಎಸಗುವ, ಅವಾಚ್ಯ ಶಬ್ದಗಳಿಂದ ನಿಂದಿಸುವವರ ವಿರುದ್ಧ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒಕ್ಕೊರಲಿನ ಅಭಿಪ್ರಾಯವನ್ನು ಸಾಮೂಹಿಕವಾಗಿ ಘೋಷಣೆ ಕೂಗುವ ಮೂಲಕ ಮಂಡಿಸಿದರು.ಪ್ರತಿಭಟನೆ ನೇತೃತ್ವ ವಹಿಸಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶ ಕರಿಗಾರ ಮಾತನಾಡಿ, ರಾಜ್ಯ ಸರ್ಕಾರಿ ನೌಕರರ ಸಂಘವು ಜಿಲ್ಲೆಯ ಪ್ರತಿಯೊಬ್ಬ ಸರ್ಕಾರಿ ನೌಕರರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತದೆ. ಯಾವುದೇ ಅಧಿಕಾರಿ ಹಾಗೂ ನೌಕರರ ವರ್ಗದವರು ಯಾವ ಬೇನಾಮಿ ನಾಯಕರಿಗೂ ಹೆದರುವ ಅಗತ್ಯವಿಲ್ಲ, ಎಲ್ಲಾ ನೌಕರರ ಬೆನ್ನೆಲುಬಾಗಿ ಸಂಘ ಇರುತ್ತದೆ ಎಂದು ಅಭಯ ನೀಡಿದರು.ಮಾ. 2ರಂದು ಹಾವೇರಿ ಲೋಕೋಪಯೋಗಿ ಕಚೇರಿಯಲ್ಲಿ ಕಾರ್ಯನಿರತ ಅಧಿಕಾರಿ ಹಾಗೂ ನೌಕರರಿಗೆ ಎಂ.ಎನ್. ನಾಯಕ ಹಾಗೂ ಇತರರು ಏಕಾಏಕಿ ಕಚೇರಿಗೆ ನುಗ್ಗಿ ದಾಂಧಲೆ ಮಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ. ಜಿಲ್ಲೆಯಲ್ಲಿ ಇದೇ ರೀತಿಯ ವಿವಿಧ ಬೇನಾಮಿ ಸಂಘಟನೆ ಹೆಸರಿನಲ್ಲಿ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತರ ಸೋಗಿನಲ್ಲಿ ಕೆಲವೊಂದು ಜನರು ವಿವಿಧ ಇಲಾಖೆಗಳಿಗೆ ಹೋಗಿ ತೊಂದರೆ ನೀಡುತ್ತಿರುವುದು ಅತ್ಯಂತ ಖಂಡನೀಯ ಎಂದರು.ಸರ್ಕಾರಿ ನೌಕರರ ಕೆಲಸಕ್ಕೆ ಅಡ್ಡಿಪಡಿಸುವುದನ್ನು ನೌಕರರು ಸಂಘದ ಗಮನಕ್ಕೆ ತಂದಿದ್ದಾರೆ. ಇಂತಹ ಸನ್ನಿವೇಶಗಳಲ್ಲಿನೌಕರರಿಗೆ ಕೆಲಸ ಮಾಡಲು ಯಾವುದೇ ರಕ್ಷಣೆಯೇ ಇಲ್ಲದಂತಾಗಿದೆ. ನೌಕರರ ಕಾರ್ಯಕ್ಕೆ ಅಡ್ಡಿಪಡಿಸುವವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ನೌಕರರಿಗೆ ಸೂಕ್ತ ರಕ್ಷಣೆ ನೀಡಬೇಕು. ಜತೆಗೆ ಮಾಹಿತಿ ಹಕ್ಕು ಕೇಳುವ ನೆಪದಲ್ಲಿ ಹಣದ ಬೇಡಿಕೆ ಇಡುತ್ತಿರುವುದು ಕಂಡುಬರುತ್ತಿದ್ದು, ಅಂತಹವರ ವಿರುದ್ಧವೂ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.ಈ ವೇಳೆ ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿಗಳು ಮನವಿ ಸ್ವೀಕರಿಸಿದರು. ಈ ವೇಳೆ ಜಿಪಂ ಸಿಇಒ ರುಚಿ ಬಿಂದಲ್, ಡಿಎಚ್‌ಒ ಡಾ. ಜಯಾನಂದ, ಪ್ರತಿಭಟನೆಯಲ್ಲಿ ಸಂಘದ ಕಾರ್ಯದರ್ಶಿ ಜಿ.ಎಸ್. ಪಾಟೀಲ, ಖಜಾಂಚಿ ದಾವಲಸಾಬ ಕಮಗಾಲ, ರಾಜ್ಯ ಸಮಿತಿ ಸದಸ್ಯ ಮುನೀಶ್ವರ ಚೂರಿ, ಗುರುನಾಥ ಗಾವಣೇಕರ, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ. ಶಿಡೇನೂರ ಸೇರಿದಂತೆ ಎಲ್ಲಾ ತಾಲೂಕುಗಳ ಅಧ್ಯಕ್ಷರು, ವೃಂದ ಸಂಘಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ವಿವಿಧ ಸ್ವಯಂ ಘೋಷಿತ ಸಂಘಟನೆಗಳನ್ನು ಸೃಷ್ಟಿಸಿಕೊಂಡು ಅಧಿಕಾರಿಗಳ ಮೇಲೆ ದೌರ್ಜನ್ಯ ನಡೆಸಿ ತೊಂದರೆ ಕೊಡುವವರಿಗೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ತಕ್ಕಪಾಠ ಕಲಿಸಬೇಕು. ಲೋಕೋಪಯೋಗಿ ಕಚೇರಿಯಲ್ಲಿ ದಬ್ಬಾಳಿಕೆ ಮಾಡಿದ ಆರೋಪಿಗಳು ಹಾಗೂ ಇನ್ನುಮುಂದೆ ಅದೇ ರೀತಿ ಘಟನೆಗಳು ನಡೆದರೆ ಅಂತಹ ಆರೋಪಿಗಳನ್ನು ಬಂಧಿಸಿ, ಜಾಮೀನು ಮಂಜೂರು ಮಾಡದೇ ಗಡಿಪಾರು ಮಾಡಬೇಕು ಎಂದು ಸರ್ಕಾರಿ ನೌಕರ ಸಂಘದ ಹಾವೇರಿ ಜಿಲ್ಲಾಧ್ಯಕ್ಷ ಮಲ್ಲೇಶ ಕರಿಗಾರ ಹೇಳಿದರು.ಸಾರ್ವಜನಿಕ ಸೇವೆಯಲ್ಲಿರುವ ಸರ್ಕಾರಿ ನೌಕರರ ಹಿತರಕ್ಷಣೆಗೆ ಸಂಘವು ಉತ್ತಮ ಕೆಲಸ ಮಾಡುತ್ತಿದೆ. ಎಲ್ಲಾ ಇಲಾಖೆಗಳ ಅಧಿಕಾರಿ, ನೌಕರರು ಒಗ್ಗಟ್ಟಾಗಿರುವುದು ಸಂತಸ ತಂದಿದೆ. ಲೋಕೋಪಯೋಗಿ ಇಲಾಖೆಯಲ್ಲಾದ ಘಟನೆ ಹಾಗೂ ಇತ್ತೀಚೆಗೆ ಹಾನಗಲ್‌ನಲ್ಲಿ ನಡೆದ ಘಟನೆ ನಿಜಕ್ಕೂ ಕ್ಷಮಿಸಲಾರದ ಕೃತ್ಯವಾಗಿದೆ. ಈ ಬಗ್ಗೆ ಅಗತ್ಯಕ್ರಮ ಕೈಗೊಂಡು, ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ