ಸಾರಾಂಶ
ಬೆಂಗಳೂರು : ಜೆಡಿಎಸ್ನವರನ್ನು ಹೆದರಿಸಿ, ಬೆದರಿಸಿ ಪಾದಯಾತ್ರೆಗೆ ಸೇರಿಸಿಕೊಂಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆರೋಪಿಸಿರು.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾದಯಾತ್ರೆಯಿಂದ ಜೆಡಿಎಸ್ನವರಿಗೆ ತಮ್ಮ ಪ್ರಾಬಲ್ಯ ಕಳೆದುಕೊಳ್ಳುವ ಭೀತಿ ಇತ್ತು. ಹೀಗಾಗಿ, ಅವರು ಅದರಿಂದ ದೂರಾಗಲು ಪ್ರಯತ್ನಿಸಿದರು. ಆದರೆ, ಅವರನ್ನು ಬೆದರಿಸಿ ಸೇರಿಸಿಕೊಳ್ಳಲಾಗಿದೆ. ಮುಡಾ ನಿವೇಶನ ಹಂಚಿಕೆ ಹಗರಣ ಮತ್ತು ವಾಲ್ಮೀಕಿ ನಿಗಮ ಹಗರಣದ ನೆಪದಲ್ಲಿ ಬಿಜೆಪಿ-ಜೆಡಿಎಸ್ನವರು ನಮ್ಮ ಸರ್ಕಾರದ ವಿರುದ್ಧ ಮಾಡುತ್ತಿರುವ ಪಾದಯಾತ್ರೆಗೆ ಯಾವುದೇ ವಿಷಯ ಮತ್ತು ಅರ್ಥ ಇಲ್ಲ ಎಂದು ಹೇಳಿದರು.
ವಿಪಕ್ಷಗಳು ತಮ್ಮ ಅವಧಿಯ ಹಗರಣಗಳನ್ನು ಬಯಲಿಗೆ ಎಳೆಯಲು ಕೋರಿ ಪಾದಯಾತ್ರೆ ನಡೆಸುತ್ತಿರುವಂತಿದೆ. ಅದಕ್ಕಾಗಿ ನಾವು ಪ್ರತಿ ನಿತ್ಯ ಅವರ ಅವಧಿಯ ನಾಲ್ಕೈದು ಹಗರಣಗಳು, ವಿಷಯಗಳ ಕುರಿತು ಪ್ರಶ್ನೆಗಳನ್ನು ಕೇಳುತ್ತೇವೆ. ಅದಕ್ಕವರು ಉತ್ತರ ನೀಡಲಿ. ಅವರ ಪಾದಯಾತ್ರೆಗೆ ಪ್ರತಿಯಾಗಿ ನಾವು ಜನಾಂದೋಲನ ಮಾಡುತ್ತೇವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.