ಸಾರಾಂಶ
ಕೆಂಪೇಗೌಡರು ಶಿಸ್ತು ಮತ್ತು ಪ್ರಾಮಾಣಿಕತೆಗೆ ಹೆಸರಾಗಿದ್ದರು. ಕನ್ನಡ ನಾಡನ್ನು ಕಟ್ಟುವ ತುಡಿತ ಅವರಲ್ಲಿತ್ತು. ಹೋರಾಟದ ಮನೋಭಾವ ಮತ್ತು ಆದರ್ಶ ಜೀವನಶೈಲಿ ಎಲ್ಲರಿಗೂ ಮಾದರಿ.
ಕನ್ನಡಪ್ರಭ ವಾರ್ತೆ ಮೈಸೂರು
ವಿದ್ಯಾರ್ಥಿಗಳು ಚಿಕ್ಕಂದಿನಲ್ಲಿಯೇ ನಾಡಪ್ರಭು ಕೆಂಪೇಗೌಡರ ತತ್ವ ಮತ್ತು ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಎಸ್.ಟಿ. ಜವರೇಗೌಡ ತಿಳಿಸಿದರು.ತಮ್ಮ ಕಚೇರಿಯಲ್ಲಿ ಆಯೋಜಿಸಲಾಗಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಇಂದಿನ ಮಕ್ಕಳಲ್ಲಿ ನಾಡು, ನುಡಿಯ ಬಗ್ಗೆ ಅಭಿಮಾನ ಕಡಿಮೆಯಾಗುತ್ತಿರುವುದು ಬೇಸರದ ಸಂಗತಿ ಎಂದರು.
ಕೆಂಪೇಗೌಡರು ಶಿಸ್ತು ಮತ್ತು ಪ್ರಾಮಾಣಿಕತೆಗೆ ಹೆಸರಾಗಿದ್ದರು. ಕನ್ನಡ ನಾಡನ್ನು ಕಟ್ಟುವ ತುಡಿತ ಅವರಲ್ಲಿತ್ತು. ಹೋರಾಟದ ಮನೋಭಾವ ಮತ್ತು ಆದರ್ಶ ಜೀವನಶೈಲಿ ಎಲ್ಲರಿಗೂ ಮಾದರಿ. ಸಮಸ್ಯೆಗಳಿಗೆ ಹೆದರದೆ ಮುನ್ನುಗ್ಗುವ ಗುಣ ಇದ್ದುದರಿಂದಲೇ ಕೆಂಪೇಗೌಡರು ಸಾಧಿಸಲು ಸಾಧ್ಯವಾಯಿತು ಎಂದು ಅವರು ಹೇಳಿದರು.ಮಕ್ಕಳು ಶಾಲಾ ಹಂತದಲ್ಲಿಯೇ ಕೆಂಪೇಗೌಡರಂತೆ ನಾಯಕತ್ವ ಗುಣಗಳನ್ನು ರೂಢಿಸಿಕೊಳ್ಳಬೇಕು. ಕನ್ನಡ ಭಾಷೆ ಮತ್ತು ನೆಲ- ಜಲದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಸಮೃದ್ಧ ನಾಡನ್ನು ಕಟ್ಟಲು ಸಾಧ್ಯ ಎಂದು ಅವರು ತಿಳಿಸಿದರು.
ಶಿಕ್ಷಣಾಧಿಕಾರಿ ನಿರೂಪ ವೆಸ್ಲಿ, ಅನಂತರಾಜ, ಪುಷ್ಪಾ ಹಾಗೂ ಸಿಬ್ಬಂದಿ ಇದ್ದರು.