- ಬಣಜಾರ ಸಮುದಾಯದ ವಿವಿಧ ಬೇಡಿಕೆಗಳ ಈಡೇರಿಸಲು ಮುಖಂಡರಿಂದ ಮನವಿ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪಟ್ಟಣದ ತುಂಗಭದ್ರಾ ಸೇತುವೆ ಬಳಿಯಿರುವ ಸಂತ ಸೇವಾಲಾಲ್ ಉದ್ಯಾನವನದ ಸ್ಥಳಕ್ಕೆ ಉಪಸಭಾಪತಿ ರುದ್ರಪ್ಪ ಎಂ.ಲಮಾಣಿ ಗುರುವಾರ ಭೇಟಿ ನೀಡಿದರು. ಈ ವೇಳೆ ಬಣಜಾರ್ ಸಮುದಾಯದ ಮುಖಂಡರು ಬೇಡಿಕೆಗಳ ಈಡೇರಿಸುವಂತೆ ಮನವಿ ಸಲ್ಲಿಸಿದರು.

ಈ ಸಂದರ್ಭ ಬಣಜಾರ ಸಮುದಾಯ ಮುಖಂಡರು ಮಾತನಾಡಿ, ಸಂತ ಸೇವಾಲಾಲ್ ಉದ್ಯಾನವನಕ್ಕೆ ಹೊನ್ನಾಳಿಯ ಸರ್ವಜನಾಂಗದವರೂ ಸಹಕಾರ ನೀಡಿದ್ದಾರೆ. ಹೀಗಾಗಿ ತುಂಗಭದ್ರಾ ಸೇತುವೆ ಆರಂಭದಲ್ಲಿಯೇ ಈ ಜಾಗ ನಮಗೆ ಸಿಕ್ಕಿದೆ. ಆದ್ದರಿಂದ ಈ ವರ್ಷ ಬರುವ ಮಾಲಾಧಾರಿಗಳಿಗೆ ತಾತ್ಕಾಲಿಕ ವಿಶ್ರಾಂತಿ ಗೃಹಕ್ಕೆ ವ್ಯವಸ್ಥೆ ಮಾಡಿಕೊಡಬೇಕು. ಅನಂತರ ಶಾಶ್ವತ ವಿಶ್ರಾಂತಿ ಗೃಹ ನಿರ್ಮಾಣ ಮಾಡಿಕೊಡಬೇಕು. ಅದಕ್ಕಾಗಿ ಸ್ಥಳ ಪರಿಶೀಲನೆ ಮಾಡಬೇಕು ಎಂದರು.


ಸದ್ಯಕ್ಕೆ ನಾಳೆಯಿಂದ 3 ದಿನಗಳ ಕಾಲ ಮಾಲಾಧಾರಿಗಳಿಗೆ ಲಘು ಉಪಾಹಾರ ವ್ಯವಸ್ಥೆ ಮಾಡಿಕೊಡಬೇಕು. ಬರುವ ಪಾದಯಾತ್ರಿಗಳಿಗೆ ಹಾಗೂ ಮಾಲಾಧಾರಿಗಳಿಗೆ ವೈದ್ಯಕೀಯ ಸೌಲಭ್ಯ ವ್ಯವಸ್ಥೆ ಮಾಡಬೇಕು ಎಂದು ಮನವಿ ಸಲ್ಲಿಸಿದರು.

ಮನವಿ ಆಲಿಸಿದ ರುದ್ರಪ್ಪ ಲಮಾಣಿ ಅವರು, ಸಮುದಾಯದ ಬೇಡಿಕೆಯನ್ನು ಈಡೇರಿಸುವ ಸರ್ವಪ್ರಯತ್ನ ಸ್ಥಳೀಯ ಶಾಸಕ ಡಿ.ಜಿ. ಶಾಂತನಗೌಡ ಹಾಗೂ ಇತರೆ ಮುಖಂಡರೊಂದಿಗೆ ಸೇರಿ ಚರ್ಚೆ ಮಾಡಲಾಗುವುದು. ಸ್ಥಳ ಪರಿಶೀಲನೆ ಮಾಡಿದ ನಂತರ ಅನುದಾನ ಕೊಡುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ತಾಲೂಕು ಬಣಜಾರ್ ಸಮಾಜದ ಅಧ್ಯಕ್ಷ ಪ್ರಭುದೇವನಾಯ್ಕ, ಕಾರ್ಯಾಧ್ಯಕ್ಷ ಅಂಜುನಾಯ್ಕ, ಪ್ರಧಾನ ಕಾರ್ಯದರ್ಶಿ ಮಂಜ ನಾಯ್ಕ, ಜಿಪಂ ಮಾಜಿ ಸದಸ್ಯ ಸುರೇಂದ್ರ ನಾಯ್ಕ, ತಾಂಡ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಮಾರುತಿ ನಾಯ್ಕ, ಹಿರಿಯ ಮುಖಂಡ ಜಯನಾಯ್ಕ, ಕುಬೇರನಾಯ್ಕ, ಪುರಸಭೆ ಮುಖ್ಯಾಧಿಕಾರಿ ಟಿ. ಲೀಲಾವತಿ, ಎಂಜಿನಿಯರ್ ದೇವರಾಜ್, ಹೆಲ್ತ್ ಇನ್‌ಸ್ಪೆಕ್ಟರ್ ಪರಮೇಶ್ವರ ನಾಯ್ಕ ಹಾಗೂ ನೂರಾರು ಮಾಲಾಧಾರಿಗಳು ಹಾಜರಿದ್ದರು.

- - -

-12ಎಚ್.ಎಲ್.ಐ3.ಜೆಪಿಜಿ:

ಹೊನ್ನಾಳಿ ಪಟ್ಟಣದ ತುಂಗಭದ್ರಾ ಸೇತುವೆ ಬಳಿಯ ಸಂತ ಸೇವಾಲಾಲ್ ಉದ್ಯಾನವನಕ್ಕೆ ಉಪ ಸಭಾಪತಿ ರುದ್ರಪ್ಪ ಎಂ. ಲಮಾಣಿ ಭೇಟಿ ನೀಡಿದ ವೇಳೆ ಸಮಾಜದ ಮುಖಂಡರು ವಿವಿಧ ಬೇಡಿಕೆಗಳ ಈಡೇರಿಸಲು ಒತ್ತಾಯಿಸಿ ಮನವಿ ಸಲ್ಲಿಸಿದರು.