: ದೇಸೀ ದನಗಳ ಉತ್ಪನ್ನಗಳನ್ನು ದಿನ ಬಳಕೆಯಲ್ಲಿ ಉಪಯೋಗಿಸುವ ಮೂಲಕ ಆರೋಗ್ಯವಂತರಾಗುವ ಜೊತೆಗೆ ದೇಸೀ ತಳಿಗಳನ್ನು ಉಳಿಸಬೇಕು. ಕಟೀಲು ದೇಗುಲ ಮೂರು ಗೋಶಾಲೆಗಳನ್ನು ನಡೆಸುತ್ತಿದ್ದು, ಪ್ರಸ್ತುತ ವರ್ಷ ೯೧ ಲಕ್ಷ ರು.ವನ್ನು ಇದಕ್ಕಾಗಿ ವೆಚ್ಚ ಮಾಡಿದೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಆನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ಹೇಳಿದರು.

ಮೂಲ್ಕಿ: ದೇಸೀ ದನಗಳ ಉತ್ಪನ್ನಗಳನ್ನು ದಿನ ಬಳಕೆಯಲ್ಲಿ ಉಪಯೋಗಿಸುವ ಮೂಲಕ ಆರೋಗ್ಯವಂತರಾಗುವ ಜೊತೆಗೆ ದೇಸೀ ತಳಿಗಳನ್ನು ಉಳಿಸಬೇಕು. ಕಟೀಲು ದೇಗುಲ ಮೂರು ಗೋಶಾಲೆಗಳನ್ನು ನಡೆಸುತ್ತಿದ್ದು, ಪ್ರಸ್ತುತ ವರ್ಷ ೯೧ ಲಕ್ಷ ರು.ವನ್ನು ಇದಕ್ಕಾಗಿ ವೆಚ್ಚ ಮಾಡಿದೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಆನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ಹೇಳಿದರು. ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸರಸ್ವತೀ ಸದನದಲ್ಲಿ ಗೋ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ನಂದಿನೀ ಗವ್ಯಂ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಿನ್ನಿಗೋಳಿ ತಾಳಿಪಾಡಿ ಪಾಂಚಜನ್ಯ ಗೋಶಾಲೆಯ ಮುರಳೀಧರ್ ಅವರು ಗೋ ಉತ್ಪನ್ನಗಳನ್ನು ಕಟೀಲು ದೇವಳದ ಅರ್ಚಕ ವಾಸುದೇವ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣರಿಗೆ ನೀಡಿ, ನಂದಿನೀ ಗವ್ಯಂ ಪ್ರದರ್ಶನ ಮಾರಾಟಕ್ಕೆ ಚಾಲನೆ ನೀಡಿದರು.

ತಾಳಿಪಾಡಿಯ ಗೋ ಸೇವಕ ಶ್ರೀಧರ್ ಮಾತನಾಡಿ, ರಾಜ್ಯದ ನಾನಾ ಗೋಶಾಲೆಗಳು, ಗೋ ಉತ್ಪಾದಕರನ್ನು ಪ್ರೋತ್ಸಾಹಿಸುವುದಕ್ಕಾಗಿ ಇಂತಹ ಮೇಳವನ್ನು ಕಳೆದ ನಾಲ್ಕು ವರ್ಷಗಳಿಂದ ನಡೆಸುತ್ತಿರುವುದು ಅಭಿನಂದನೀಯ ಎಂದರು.

ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ, ಗೋ ಉತ್ಪನ್ನ ತಯಾರಕ ಶಿವಕುಮಾರ್, ಡಾ. ಜೀವನ್‌ ಕುಮಾರ್ ಮತ್ತಿತರರಿದ್ದರು. ಮೈಸೂರು, ದೊಡ್ಡಬಳ್ಳಾಪುರ, ಉಡುಪಿ, ಮಂಗಳೂರು, ಕುಂದಾಪುರ, ಮೊದಲಾದ ಕಡೆಗಳಿಂದ ಬಂದಿರುವ ಗೋಉತ್ಪನ್ನ ತಯಾರಕರು ಈ ಮೇಳದಲ್ಲಿದ್ದು, ತುಪ್ಪ, ಗೋಮಯ, ಸಾಬೂನು, ವಿವಿಧ ಔಷಧಿಗಳು, ಗೋಮೂತ್ರ ಸೇರಿದಂತೆ 25ಕ್ಕೂ ಹೆಚ್ಚು ವಿಧದ ಉತ್ಪನ್ನಗಳನ್ನು ಪ್ರದರ್ಶನ, ಮಾರಾಟಕ್ಕೆ ಇಟ್ಟಿದ್ದಾರೆ.