ಸಾರಾಂಶ
ಗ್ರಾಮೀಣ ಪ್ರತಿಭೆಗಳಿಗೆ ಒಳ್ಳೆಯ ಅವಕಾಶ ಕಲ್ಪಿಸಬೇಕಾಗಿದೆ. ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಕಾಲ ಈಗ ಉಳಿದಿಲ್ಲ. ಅಲ್ಲಿಯೂ ಅತ್ಯಂತ ಪ್ರತಿಭಾವಂತ ಗುರುವೃಂದ, ಅತ್ಯುತ್ತಮ ಸೌಲಭ್ಯಗಳು ಲಭ್ಯವಾಗುತ್ತಿವೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.
ಹಾನಗಲ್ಲ: ಯುವ ಸಬಲೀಕರಣವೇ ಆದ್ಯತೆಯಾಗಿ ತಂತ್ರಜ್ಞಾನದ ಸಹಾಯವನ್ನೂ ಪಡೆದು ಸ್ವಾವಲಂಬಿ, ಸೌಹಾರ್ದ ಬದುಕನ್ನು ಧ್ಯೇಯವಾಗಿಸಿಕೊಂಡು, ಉತ್ತಮ ಶಿಕ್ಷಣದ ಮೂಲಕ ಅತ್ಯುತ್ತಮ ಸಾರ್ಥಕ ಜೀವನ ಕಟ್ಟಿಕೊಳ್ಳೋಣ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.
ಸೋಮವಾರ ಇಲ್ಲಿನ ಹ್ಯಮ್ಯಾನಿಟಿ ಫೌಂಡೇಶನ್ನ ಪರಿವರ್ತನ ಕಲಿಕಾ ಕೇಂದ್ರದಲ್ಲಿ ಟೀಮ್ ಆಪದ್ಬಾಂಧವ ಸಹಯೋಗದಲ್ಲಿ ತಾಲೂಕಿನ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ರಾಜ್ಯ, ಜಿಲ್ಲಾ, ತಾಲೂಕು, ಶಾಲಾ ಮಟ್ಟದಲ್ಲಿ ಪ್ರತಿಭೆ ಪ್ರದರ್ಶಿಸಿ ಅತ್ಯುತ್ತಮ ಫಲಿತಾಂಶಕ್ಕೆ ಸಾಕ್ಷಿಯಾದ ೩೫೦ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಒಟ್ಟು ₹೫ ಲಕ್ಷ ಮೊತ್ತದ ಪ್ರತಿಭಾ ಪುರಸ್ಕಾರ, ಪ್ರಮಾಣಪತ್ರ, ಕಲಿಕಾ ಪುಸ್ತಕ ವಿತರಿಸಿ ಮಾತನಾಡಿ, ಪ್ರತಿಭಾವಂತರನ್ನು ಗೌರವಿಸುವ ಮೂಲಕ ಸಾಧಕರಿಗೆ ಸ್ಫೂರ್ತಿ ತುಂಬುವ ಕೆಲಸ ಆಗಬೇಕು ಎಂದರು.ಸಾಧನೆಗೆ ಇಚ್ಛಾಶಕ್ತಿ ಅತ್ಯವಶ್ಯ. ಕಲಿಕೆಯ ಹಂಬಲ ಬೇಕು. ಗ್ರಾಮೀಣ ಪ್ರತಿಭೆಗಳಿಗೆ ಒಳ್ಳೆಯ ಅವಕಾಶ ಕಲ್ಪಿಸಬೇಕಾಗಿದೆ. ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಕಾಲ ಈಗ ಉಳಿದಿಲ್ಲ. ಅಲ್ಲಿಯೂ ಅತ್ಯಂತ ಪ್ರತಿಭಾವಂತ ಗುರುವೃಂದ, ಅತ್ಯುತ್ತಮ ಸೌಲಭ್ಯಗಳು ಲಭ್ಯವಾಗುತ್ತಿವೆ ಎಂದರು.
ಸರ್ಕಾರದ ಅನುದಾನ ಹೊರತುಪಡಿಸಿ ತಾಲೂಕಿನಲ್ಲಿ ಸಮುದಾಯದ ಸಹಭಾಗಿತ್ವದಲ್ಲಿ ₹೩ ಕೋಟಿ ವೆಚ್ಚದಲ್ಲಿ ೯೫ ಶಾಲೆಗಳ ಅಭಿವೃದ್ಧಿಗೆ ಸಾಕ್ಷಿಯಾಗಿದ್ದೇವೆ. ನಾಳಿನ ಪೀಳಿಗೆಗಾಗಿ ಯೋಜನೆಗಳನ್ನು ರೂಪಿಸೋಣ. ರೋಟರಿ ಸಂಸ್ಥೆ ಕೂಡ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಕೈ ಜೋಡಿಸಲಿದೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ ಮಾತನಾಡಿ, ತಾಲೂಕಿನ ಸರ್ಕಾರಿ ಪ್ರೌಢ, ಪ್ರಾಥಮಿಕ ಶಾಲೆಗಳು ₹೩ ಕೋಟಿ ವೆಚ್ಚದಲ್ಲಿ ಶಾಲೆಗಳಿಗೆ ಸುಣ್ಣ ಬಣ್ಣ, ಮುದ್ರಣ ಯಂತ್ರ, ಝೆರಾಕ್ಸ್ ಯಂತ್ರ, ಗ್ರೀನ್ ಬೋರ್ಡ್, ಡೆಸ್ಕುಗಳು, ವಾಟರ್ ಫಿಲ್ಟರ್, ಪ್ರೊಜೆಕ್ಟರ್, ಸ್ಕ್ರೀನ್, ೫೨ ಶಾಲೆಗಳಿಗೆ ಪ್ರೊಜೆಕ್ಟರ್ಗಳನ್ನು ಒದಗಿಸಿ ಉತ್ತಮ ಜ್ಞಾನಕ್ಕಾಗಿ ಅವಕಾಶ ಕಲ್ಪಿಸಿದ್ದಾರೆ. ಶಾಲೆಗಳ ಅಭಿವೃದ್ಧಿಯ ಕನಸು ನನಸಾಗುತ್ತಿದೆ ಎಂದರು.ಪರಿವರ್ತನ ಕಲಿಕಾ ಕೇಂದ್ರದ ಆಡಳಿತಾಧಿಕಾರಿ ಪ್ರೊ. ಮಾರುತಿ ಶಿಡ್ಲಾಪೂರ ಮಾತನಾಡಿ, ಪರಿವರ್ತನ ಕಲಿಕಾ ಕೇಂದ್ರದ ಮೂಲಕ ಶೈಕ್ಷಣಿಕ ತರಬೇತಿ ಪಡೆದ ವಿದ್ಯಾರ್ಥಿಗಳು ಪರೀಕ್ಷಾ ಉತ್ತಮ ಫಲಿತಾಂಶ ಗಳಿಸಿ, ಅತ್ಯುತ್ತಮ ಉದ್ಯೋಗಾವಕಾಶಗಳಿಗೂ ಸಾಕ್ಷಿಯಾಗಿದ್ದಾರೆ. ತಾಲೂಕಿನ ಪ್ರತಿಭಾವಂತರನ್ನು ಗೌರವಿಸುವ ಮೂಲಕ ಯುವ ಪೀಳಿಗೆಯನ್ನು ಪ್ರೋತ್ಸಾಹಿಸುತ್ತಿರುವುದು ಅತ್ಯಂತ ಅಭಿನಂದನಾರ್ಹ ಕಾರ್ಯ ಎಂದರು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಅದಿತಿ ಹಾವಣಗಿ, ವರ್ಷಿಣಿ ಹಳ್ಳೇರ, ಕವಿತಾ ಹಾವಳೇರ ಮಾತನಾಡಿದರು. ಶಿಕ್ಷಣ ಸುಧಾರಣಾ ಸಮಿತಿ ಸದಸ್ಯರಾದ ಮೆಹಬೂಬಲಿ ಬ್ಯಾಡಗಿ, ಅನಿತಾ ಶಿವೂರ, ಬಸವರಾಜ ಚಹ್ವಾಣ, ಬಿ.ಎಸ್. ಕರಿಯಣ್ಣನವರ, ಅಬ್ದುಲ್ರಜಾಕ ಪಟೇಲ್, ಹೆಗ್ಗಪ್ಪ ಕಾಮನಹಳ್ಳಿ, ಚಂದ್ರಶೇಖರ ಬಳ್ಳಾರಿ, ಚಂದ್ರಶೇಖರ ಗೂಳಿ ಇದ್ದರು.ಸಂಗೀತ ಕಲಾವಿದೆ ಸುಧಾ ಹೊಸಮನಿ ಪ್ರಾರ್ಥನೆ ಹಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ ಸ್ವಾಗತಿಸಿದರು. ಸಿದ್ದು ಗೌರಣ್ಣನವರ ಕಾರ್ಯಕ್ರಮ ನಿರೂಪಿಸಿದರು.