ಸಾರಾಂಶ
ಕನ್ನಡಪ್ರಭ ವಾರ್ತೆ ಕಾರ್ಕಳ
ಪಾಕಿಸ್ತಾನದ ಪ್ರಾಯೊಜನೆಯಲ್ಲಿ ಪೆಹಲ್ಗಾಮ್ನಲ್ಲಿ ಉಗ್ರರು ನಡೆಸಿದ ನರಮೇಧಕ್ಕೆ ಪ್ರತೀಕಾರವಾಗಿ ಭಾರತ ‘ಆಪರೇಷನ್ ಸಿಂದೂರ್’ ಮಿಲಿಟರಿ ಕಾರ್ಯಾಚರಣೆಯ ಮೂಲಕ ಪಾಕಿಸ್ತಾನದಲ್ಲಿ ನೆಲೆಯೂರಿರುವ ಸುಮಾರು 9 ಉಗ್ರ ತರಬೇತಿ ನೆಲೆಗಳ ಮೇಲೆ ದಾಳಿ ನಡೆಸಿ ಅವುಗಳನ್ನು ಧ್ವಂಸ ಮಾಡಿರುವುದು ಸ್ವಾಗತಾರ್ಹ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ.ಉಗ್ರರ ನೆಲೆಗಳನ್ನು ಧ್ವಂಸ ಮಾಡಿ ಅಲ್ಲಿ ನೂರಕ್ಕೂ ಹೆಚ್ಚು ಉಗ್ರರನ್ನ ಕೊಂದು ಹಾಕುವ ಮೂಲಕ ಪೆಹಲ್ಗಾಮ್ನಲ್ಲಿ ಅಟ್ಟಹಾಸ ಮೆರೆದು ಅಳಿಸಿಹಾಕಿದ ಭಾರತೀಯ ನಾರಿಯರ ಸಿಂದೂರದ ಶಕ್ತಿ ಏನು ಎಂಬುದನ್ನು ಭಾರತೀಯ ಸೇನೆ ಪಾಕಿಸ್ತಾನಕ್ಕೆ ಪರಿಚಯಿಸಿದೆ. ಈ ಮೂಲಕ ಭಾರತದ ಸೇನಾಶಕ್ತಿ ಏನೆಂಬುದನ್ನು ಪಾಕಿಸ್ತಾನಕ್ಕೆ ಮಾತ್ರವಲ್ಲ ವಿಶ್ವಕ್ಕೆ ತೋರಿಸುವಂತಾಗಿದೆ ಎಂದು ಕಾಂಗ್ರೆಸ್ ಹೇಳಿದೆ.ಶಾಂತಿ ಮತ್ತು ಸೌಹಾರ್ದತೆಯ ರಾಜತಾಂತ್ರಿಕ ಸಿದ್ಧಾಂತದಡಿಯಲ್ಲಿ ಕಳೆದ 70 ವರ್ಷಗಳಿಂದ ವಿಶ್ವ ರಾಜಕಾರಣದಲ್ಲಿ ತನ್ನದೇ ಛಾಪನ್ನು ಮೂಡಿಸುತ್ತ ಕಾರ್ಯನಿರ್ವಹಿಸುತ್ತ ಬಂದಿರುವ ಭಾರತವನ್ನು 1971ರಲ್ಲಿ ಪ್ರಧಾನಿ ಇಂದಿರಾ ಗಾಂಧಿ ಆಡಳಿತ ಅವಧಿಯೂ ಸೇರಿ ಸುಮಾರು 6 ಬಾರಿ ಕೆಣಕಲು ಹೋಗಿ ಯುದ್ಧದಲ್ಲಿ ಸೋತು ಶರಣಾಗಿ ಇಬ್ಭಾಗವಾಗಿ ಹೋದ ಪಾಕಿಸ್ತಾನ ತನ್ನ ಹಳೆಯ ದುರಂತ ಕತೆಯನ್ನು ಮರೆತಂತಿದೆ. ಇದೀಗ ಮತ್ತೆ ತನ್ನ ಹಳೆಯ ಛಾಳಿ ಮುಂದುವರಿಸಿದ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಸರಿಯಾದ ಉತ್ತರ ನೀಡಿ ಎಚ್ಚರಿಸಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.